ವಿಜಯಪುರ: ಶಿಕ್ಷಣದ ಆರಂಭಿಕ ಹಂತದಿಂದ ಜೀವನದ ಪ್ರಮುಖ ಮೈಲುಗಲ್ಲುಗಳವರೆಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವವರು ಶಿಕ್ಷಕರು. ಶೈಕ್ಷಣಿಕ ಜ್ಞಾನ ಮಾತ್ರವಲ್ಲದೆ ನೈತಿಕ ಮೌಲ್ಯಗಳ ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳನ್ನು ಯಶಸ್ಸಿನತ್ತ ಕೊಂಡೊಯ್ಯುವ ಶಿಕ್ಷಕರು ನಿಸ್ವಾರ್ಥಿಗಳು ಎಂದು ಎಸ್.ಕುಮಾರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಸ್.ಕುಮಾರ ಹೇಳಿದರು.
ಸಂಸ್ಥೆಯ ಅಧ್ಯಕ್ಷೆ ಡಾ.ಎಚ್.ಟಿ.ಲತಾದೇವಿ ಮಾತನಾಡಿ, ಗುರುವಿಗೆ ಮಹತ್ವದ ಸ್ಥಾನವಿದೆ. ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನ ಪಡೆದು ಜೀವನದಲ್ಲಿ ಮುಕ್ತಿ ಹೊಂದುವವನೇ ಶಿಷ್ಯ. ಗುರುಕುಲ ಶಿಕ್ಷಣದಿಂದ ಇಂದಿನವರೆಗೆ ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಶಿಕ್ಷಕಿ ಸುಜಾತಾ ಜೋರಾಪುರ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿ, ಶಿಕ್ಷಕರು, ಶಿಕ್ಷಕಿಯರು ಹಾಗೂ ನೂರಾರು ವಿದ್ಯಾರ್ಥಿಗಳು ಮತ್ತು ಪಾಲಕರು ಪಾಲ್ಗೊಂಡಿದ್ದರು.