- ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ನೀಡಿ ಸ್ವಾಗತ । ಖುಷಿಯಿಂದ ಶೈಕ್ಷಣಿಕ ವರ್ಷ ಆರಂಭ
ಕನ್ನಡಪ್ರಭ ವಾರ್ತೆ, ಬೀರೂರು ಬೀರೂರು ಶೈಕ್ಷಣಿಕ ವಲಯದ ಸರಕಾರಿ ಶಾಲೆಗಳಲ್ಲಿ ಸಡಗರ, ಸಂಭ್ರಮದ ವಾತಾವರಣದಲ್ಲಿ ಮಕ್ಕಳ ಕಲರವ, ಶಿಕ್ಷಕರ ಜತೆಗೆ ಮಕ್ಕಳ ಮಾತುಕತೆ, ಸ್ನೇಹಿತರೊಂದಿಗೆ ಬೇಸಿಗೆ ರಜೆ ಕಳೆದಿರುವ ಬಗ್ಗೆ ಪರಸ್ಪರ ಹಂಚಿಕೆ.. ಇವು ಪ್ರಾರಂಭೋತ್ಸವ ನಡೆದ ಶುಕ್ರವಾರ ಶಾಲೆಗಳಲ್ಲಿ ಕಂಡುಬಂದ ದೃಶ್ಯಗಳು. ಸರಕಾರಿ, ಖಾಸಗಿ, ಅನುದಾನಿದ ಶಾಲೆಗಳತ್ತ ಹೆಜ್ಜೆಹಾಕಿದ ಮಕ್ಕಳನ್ನು ಮೊದಲ ದಿನ ಶಿಕ್ಷಕರು, ಸಿಬ್ಬಂದಿ, ಆಡಳಿತ ಮಂಡಳಿ ಹೂ ಗುಚ್ಛ ನೀಡಿ ಸ್ವಾಗತ ಕೋರಿ ಶಾಲಾ ಪ್ರಾರಂಭೋತ್ಸವಕ್ಕೆ ಕಳೆಕಟ್ಟಿದರು.ಮಕ್ಕಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ಸರಕಾರಿ ಶಾಲೆಗಳನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಗೇಟ್ ಬಳಿ ಶಿಕ್ಷಕರು, ಸಿಬ್ಬಂದಿ ನಿಂತು ಶಾಲೆ ಪ್ರವೇಶಿಸುವ ಮಕ್ಕಳಿಗೆ ಹೂ ನೀಡಿ ಬರಮಾಡಿಕೊಂಡರು. ಕೆಲ ಶಾಲೆಗಳಲ್ಲಿ ಮೊದಲ ದಿನ ಆಗಮಿಸಿದ ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯ ಪುಸ್ತಕ ವಿತರಿಸಲಾಯಿತು. ಹಬ್ಬದೂಟ ಸವಿದ ಮಕ್ಕಳು: ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಕೆಲ ಶಾಲೆಗಳಲ್ಲಿ ಬ್ಯಾಂಡ್ ನೊಂದಿಗೆ ಮಕ್ಕಳನ್ನು ಸ್ವಾಗತಿಸಿದರೆ, ಹಲವೆಡೆ ಹೂ ನೀಡಿ ಬರಮಾಡಿಕೊಳ್ಳಲಾಯಿತು. ಬೇಸಿಗೆ ರಜೆಯಲ್ಲಿ ನಿಶ್ಯಬ್ದವಾಗಿದ್ದ ಶಾಲಾ ಮೈದಾನಗಳಲ್ಲಿ ಮಕ್ಕಳ ಕಲರವದ ಸದ್ದು ಗಮನಸೆಳೆದವು. ಇನ್ನೂ ವಸತಿ ನಿಲಯಗಳಲ್ಲಿಯೂ ಸಂಭ್ರಮ ಮನೆ ಮಾಡಿತು. ಎಮ್ಮೆದೊಡ್ಡಿ ಬಳಿಯ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶುಚಿಗೊಳಿಸಿದ ಅಡುಗೆ ಕೊಠಡಿಯಲ್ಲಿ ನಿಲಯದ ಮೇಲ್ವಿಚಾರಕ ರಾಜು ಸೇರಿದಂತೆ ಸಿಬ್ಬಂದಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ಅಡುಗೆಯೊಂದಿಗೆ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಿದರು. ಪುರಸಭೆ ಅಧ್ಯಕ್ಷ, ಸದಸ್ಯರಿಂದ ಮಕ್ಕಳಿಗೆ ಸ್ವಾಗತ :ಬಾಲಕರ ಪಿಎಂಶ್ರೀ ಶಾಲೆಯಲ್ಲಿ ಶಿಕ್ಷಣ ಇಲಾಖೆಯಿಂದ ನೀಡಲಾಗಿದ್ದ ಪಠ್ಯಪುಸ್ತಕ, ಸಮವಸ್ತ್ರ, ಬ್ಯಾಡ್ಜ್, ಟೈ, ಗಳನ್ನು ಮಕ್ಕಳಿಗೆ ನೀಡುವ ಮೂಲಕ ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿನೆ ಮಕ್ಕಳನ್ನು ಸ್ವಾಗತಿಸಿ, ಮಾತನಾಡಿ, ಪೋಷಕರು ಖಾಸಗಿ ಶಾಲೆಗಳಿಗೆ ಒತ್ತು ನೀಡುವಂತೆ ಸರ್ಕಾರಿ ಶಾಲೆಗಳ ಉಳಿವಿಗಾಗಿ ಹೋರಾಟ ನಡೆಸಿದರೇ ಮಾತ್ರ ಸರ್ಕಾರಿ ಶಾಲೆ ಉಳಿಯುತ್ತವೆ. ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಎಲ್ಲಾ ರೀತಿಯ ವಿದ್ಯಾಭ್ಯಾಸದ ಸವಲತ್ತು ಗಳನ್ನು ನೀಡುತ್ತಿದೆ. ಅದನ್ನು ಪೋಷಕರು ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಿ ಎಂದರು. ಮಕ್ಕಳು ಸಂಭ್ರಮದೊಂದಿಗೆ ಶಾಲೆಗೆ ಧಾವಿಸಿದರು. ಇದೇ ಸಂದರ್ಭ ಪೋಷಕರು ತಮ್ಮ ಮಕ್ಕಳಿಗೆ ಸಾಮೂಹಿಕವಾಗಿ ಅಕ್ಷರಾಭ್ಯಾಸ ಮಾಡಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಬಸಪ್ಪ, ಕಾರ್ಯದರ್ಶಿ ಅಶೋಕ್, ಬಿ.ಆರ್.ಸಿ ಶೇಖರಪ್ಪ, ಟಿ.ಪಿಒಇ,ಒ ಜಯದೇವಪ್ಪ, ಹಳೇ ವಿದ್ಯಾರ್ಥಿ ಗಳ ಸಂಘದ ಅಧ್ಯಕ್ಷ ಗಿರೀಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಸನ್ನ, ಹಾಗೂ ಶಿಕ್ಷಣ ಇಲಾಖೆ ಎಲ್ಲಾ ಅನುಪಾಲನ ಅಧಿಕಾರಿಗಳು ಇದ್ದರು.
-- ಕೋಟ್--ಶೈಕ್ಷಣಿಕ ವಲಯದಲ್ಲಿ ಎಲ್ಲಾ ಶಾಲೆಗಳಲ್ಲಿ ಎಸ್ ಡಿ ಎಂಸಿ ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಕರೆಸಿ ಮಕ್ಕಳಿಗೆ ಸ್ವಾಗತ ಕೋರಲಾಯಿತು. ವಲಯದಲ್ಲಿ ಈಗಾಗಲೇ ಶೇ 90ರಷ್ಟು ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಲಾಗಿದ್ದು, ಶಾಲೆಗೆ ಇಂದು ಹಾಜರಾದ ಮಕ್ಕಳಿಗೆ ವಿತರಿಸಿದ್ದಾರೆ. ಶಾಲೆಗೆ ಗೈರುಹಾಜರಾದ ಮಕ್ಕಳ ಪೋಷಕರನ್ನು ಆಯಾ ಶಾಲೆ ತರಗತಿ ಶಿಕ್ಷಕರು ಶಾಲೆಗೆ ಕರೆತರಲು ಗಮನಹರಿಸಿದ್ದು.ಸಿ.ಆರ್.ಪಿ ಗಳು ವಲಯ ವ್ಯಾಪ್ತಿಯಲ್ಲಿ ಶಾಲೆಗಳ ಮೇಲೆ ಪೂರ್ವಸಿದ್ಧತೆ ಬಗ್ಗೆ ಪರಿಶೀಲಿಸಲು ಮಿಂಚಿನ ಸಂಚಾರ ಕೈಗೊಂಡಿದ್ದಾರೆ. ಟಿ.ಆರ್.ರುದ್ರಪ್ಪ.
ಕ್ಷೇತ್ರಶಿಕ್ಷಣಾಧಿಕಾರಿಗಳು ,ಬೀರೂರು. 30ಬೀರೂರು 1ಬೀರೂರಿನ ಸರಕಾರಿ ಬಾಲಕರ ಶಾಲೆಯಲ್ಲಿ ನಡೆದ ಪ್ರಾರಂಭೋತ್ಸವದಲ್ಲಿ ಪುರಸಭೆ ಅಧ್ಯಕ್ಷೆ ವನಿತಾಮಧು ಹಾಗೂ ಬಿ.ಇ.ಒ ಟಿ.ಆರ್.ರುದ್ರಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಬಸಪ್ಪ, ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಹೂಗುಚ್ಚ ನೀಡಿ ಸ್ವಾಗತಿಸಿದರು.