ಕನಕಪುರ: ಸೋಮವಾರ ಲಿಂಗೈಕ್ಯರಾದ ತಾಲೂಕಿನ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ, ಪಾದುಕೆಗಳಿಗೆ ನಮಸ್ಕರಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್ ಅವರು, ಶ್ರೀಗಳದ್ದು ಮಾತು ಕಡಿಮೆ ಮೌನವಾಗಿಯೇ ಅಚ್ಚುಕಟ್ಟಾಗಿ ಕೆಲಸಗಳನ್ನು ನೆರವೇರಿಸುತ್ತಿದ್ದರು. ಚುನಾವಣೆಗೂ ಮುಂಚೆ ಅವರ ಆಶೀರ್ವಾದ ಪಡೆಯಲು ಹೋದ ಸಂದರ್ಭದಲ್ಲಿ ಅನಾರೋಗ್ಯದಿಂದ ಹಾಸಿಗೆಯಲ್ಲಿ ಮಲಗಿದ್ದರೂ ತಮಗೆ ಹಣದ ಕಟ್ಟನ್ನು ನೀಡಿ ಇದು ಚುನಾವಣಾ ಖರ್ಚಿಗೆ ಸಣ್ಣ ಕೊಡುಗೆ ಎಂದು ಹೇಳಿ ಆಶೀರ್ವಸಿದ್ದರು. ಅವರಿಗೆ ಭವಿಷ್ಯದಲ್ಲಿ ಏನಾಗುತ್ತದೆ ಎಂದು ಮೊದಲೇ ತಿಳಿದಿತ್ತು ಎಂದು ಭಾವುಕರಾದರು.
ನನಗೆ ಕೆಂಪೇಗೌಡ ಎಂದು ನಾಮಕರಣ ಮಾಡಿದ್ದರೂ ಶಿವಗಿರಿ ಕ್ಷೇತ್ರದ ಅನುಗ್ರಹ ಇದ್ದ ಕಾರಣಕ್ಕೆ ಶಿವಕುಮಾರ್ ಎಂದು ಮರುನಾಮಕರಣ ಮಾಡಲಾಯಿತು ಎಂದು ನಮ್ಮ ತಾಯಿ ಹೇಳುತ್ತಿರುತ್ತಾರೆ. ನನಗೂ ಮಠ-ಮಾನ್ಯಗಳಿಗೂ ಅವಿನಾಭಾವ ಸಂಬಂಧವಿದೆ. ಮನೆ ಹುಷಾರು, ಮಠ ಹುಷಾರು ಎಂದು ಹಿರಿಯರು ಹೇಳಿದ್ದಾರೆ. ಅದರಂತೆ ನಮ್ಮ ಮಠಗಳನ್ನೂ ನಾವು ಉಳಿಸಿ ಬೆಳೆಸಬೇಕು. ಸಾವಿಗೆ ಗಳಿಗೆಯಿಲ್ಲ, ಸಾವು ಯಾರನ್ನೂ ಕೇಳಿ ಬರುವುದಿಲ್ಲ, ಅತಿಥಿಗಳಿಗೆ ನಾಳೆ ಬನ್ನಿ ಎನ್ನಬಹುದು. ಆದರೆ ಸಾವಿಗೆ ನಾಳೆ ಬಾ ಎನ್ನಲು ಸಾಧ್ಯವಿಲ್ಲ. ಆದರೆ ನಿರ್ವಾಣ ಸ್ವಾಮಿಗಳ ಆದರ್ಶ ಸದಾ ಶಾಶ್ವತ ಎಂದರು.ನಮ್ಮ ಕುಟುಂಬಕ್ಕೂ ಶ್ರೀ ಮಠಕ್ಕೂ ಉತ್ತಮ ಒಡನಾಟ:
ನಮ್ಮ ಜಿಲ್ಲೆಗೆ ಆಧ್ಯಾತ್ಮಿಕ ದೀಪ. ಅನ್ನ, ಅಕ್ಷರ, ಆಶ್ರಯವನ್ನು ಸರ್ಕಾರ ನೀಡುವುದಕ್ಕಿಂತ ಮೊದಲು ದೇಗುಲ ಮಠ ಹಾಗೂ ಸಿದ್ದಗಂಗಾ ಮಠ ನೀಡಿದ್ದವು. 84 ವರ್ಷ ಬಾಳಿ ಬದುಕಿ ಮಾರ್ಗದರ್ಶನ ನೀಡಿದವರು. ಮೈಸೂರು ಮಹಾರಾಜರ ಕಾಲದಿಂದಲೂ ಈ ಮಠ ಅಚಲವಾಗಿ ನಿಂತಿದೆ. ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳು, ಉದ್ಯಮಿಗಳು ಮಠದಲ್ಲಿ ಕಲಿತು ಉತ್ತಮ ಜೀವನ ರೂಪಿಸಿಕೊಂಡಿದ್ದಾರೆಂದು ಹೇಳಿದರು.
ಈ ವೇಳೆ ಸಚಿವ ಈಶ್ವರ್ ಖಂಡ್ರೆ, ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಎಂಎಲ್ಸಿ ಎಸ್.ರವಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಕನಕಪುರ ತಾಲೂಕಿನ ಲಿಂಗೈಕ್ಯರಾದ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್.
ಸರ್ಕಾರಿ ಗೌರವದ ನಂತರ ರಾಷ್ಟ್ರಧ್ವಜವನ್ನು ಶ್ರೀ ಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಸ್ತಾಂತರಿಸಿದರು.