ಶಿವಕುಮಾರ ಕುಷ್ಟಗಿ
ಬೆಳಗ್ಗೆ 6 ಗಂಟೆಯಿಂದಲೇ ಯೂರಿಯಾ ಗೊಬ್ಬರ ಪಡೆಯಲು ರೈತರು ಗೋದಾಮಿನ ಮುಂದೆ ಕಾದು ನಿಂತಿದ್ದರು. ಆದರೆ 10.30ರ ಆನಂತರ ತಾಂತ್ರಿಕ ದೋಷ ಉಂಟಾಗಿದೆ ಎಂದು ತಿಳಿಸಿ ಗೇಟ್ಗೆ ಬೋರ್ಡ್ ಅಳವಡಿಸಿ ವಿತರಣೆ ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ರೈತರು ಮತ್ತಷ್ಟು ಕಂಗಾಲಾಗಿದ್ದಾರೆ. ಈ ವೇಳೆ ವಿತರಕರ ಜತೆ ಕೆಲಹೊತ್ತು ರೈತರು ವಾಗ್ವಾದ ನಡೆಸಿದರು.
ತಾಂತ್ರಿಕ ದೋಷ ನಮ್ಮಲ್ಲಿ ಮಾತ್ರ ಅಲ್ಲ, ಎಲ್ಲ ಕಡೆಯೂ ಇದೆ ಎಂದು ಗೊಬ್ಬರ ವಿತರಕರು ಹೇಳಿದರು. ರೈತರು ಇನ್ನೇನು ಮಾಡುವುದು ಎಂದು ಸರ್ಕಾರ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ಹೊರನಡೆದರು.ಮಳೆ ಕಾರಣ: ಜಿಲ್ಲೆಯಲ್ಲಿ ಈಚೆಗೆ ಸುರಿದ ಮುಂಗಾರು ಪೂರ್ವ ಮಳೆಯಿಂದ ತೋಟಗಾರಿಕೆ ಬೆಳೆಗಳಿಗೆ ಭಾರೀ ಪ್ರಮಾಣದ ಹಾನಿಯಾಗಿದೆ. ವಿಶೇಷವಾಗಿ ತಗ್ಗು ಪ್ರದೇಶಗಳಲ್ಲಿನ ಜಮೀನುಗಳಲ್ಲಿ ನೀರು ನಿಂತ ಪರಿಣಾಮ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುವಿಕೆ, ಬೆಳವಣಿಗೆ ಕುಂಠಿತಗೊಳ್ಳುವಿಕೆ ಹಾಗೂ ಬೇರು ಕೊಳೆ ಸಮಸ್ಯೆಗಳು ಹೆಚ್ಚಾಗಿವೆ. ಇದರಿಂದ ಬೆಳೆಗಳನ್ನು ಪುನಶ್ಚೇತನಗೊಳಿಸಲು ರೈತರು ಯೂರಿಯಾ, ಇತರ ರಸಗೊಬ್ಬರ ಖರೀದಿಗೆ ಮುಗಿಬಿದ್ದಿದ್ದಾರೆ.
ಕಾಳಸಂತೆಯ ಆತಂಕ: ಯೂರಿಯಾ ಕೊರತೆಯ ಸಂದರ್ಭಗಳಲ್ಲಿ ಕಾಳಸಂತೆ ದಂಧೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವೆಡೆ ಗೊಬ್ಬರವನ್ನು ನಿಗದಿತ ದರಕ್ಕಿಂತ ಹೆಚ್ಚು ಬೆಲೆಗೆ ಮಾರಾಟ ಮಾಡುವ ಪ್ರಕರಣಗಳು ಕಂಡುಬರುವ ಸಾಧ್ಯತೆಯಿದ್ದು, ಇದರಿಂದ ಸಣ್ಣ ಹಾಗೂ ಮಧ್ಯಮ ರೈತರು ಹೆಚ್ಚು ಸಂಕಷ್ಟಕ್ಕೆ ಸಿಲುಕುತ್ತಾರೆ. ಗೊಬ್ಬರಕ್ಕಾಗಿ ದಿನಗಟ್ಟಲೆ ಅಂಗಡಿಗಳ ಮುಂದೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ನಿಂತರೂ ಗೊಬ್ಬರ ಸಿಗುತ್ತಿಲ್ಲ ಎನ್ನುವುದು ಅಷ್ಟೇ ಬೇಸರದ ಸಂಗತಿ.
ಅಲ್ಪ ವಿಳಂಬ: ಜಿಲ್ಲೆಯಲ್ಲಿ ಗೊಬ್ಬರದ ಅಭಾವವಿಲ್ಲ. 2026- 27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಯೂರಿಯಾ ರಸಗೊಬ್ಬರವನ್ನು ಕಡ್ಡಾಯವಾಗಿ ಕೆ- ಕಿಸಾನ್ ತಂತ್ರಾಂಶದ ಮೂಲಕವೇ ವಿತರಿಸಬೇಕಿದೆ. ಹಾಗಾಗಿ ತಾಂತ್ರಿಕ ಸಮಸ್ಯೆಯಿಂದ ವಿತರಣೆಯಲ್ಲಿ ಅಲ್ಪ ವಿಳಂಬವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚೇತನಾ ಪಾಟೀಲ ತಿಳಿಸಿದರು.ಜಿಲ್ಲೆಯ ಮುಂಗಾರು ಸಿದ್ಧತೆ: ಬಿತ್ತನೆ ಗುರಿ ಒಟ್ಟು 3.14 ಲಕ್ಷ ಹೆಕ್ಟೇರ್, ಹೆಸರು 1.17 ಲಕ್ಷ ಹೆ., ಮೆಕ್ಕೆಜೋಳ 1.55 ಲಕ್ಷ ಹೆ., ಶೇಂಗಾ 15 ಸಾವಿರ ಹೆ., ಸೂರ್ಯಕಾಂತಿ 8 ಸಾವಿರ ಹೆ., ಬೀಜ ದಾಸ್ತಾನು ಒಟ್ಟು ಅವಶ್ಯಕತೆ 8 ಸಾವಿರ ಕ್ವಿಂಟಲ್.