ಮೈಸೂರು: ಸಾಮಾಜಿಕ ಮಾಧ್ಯಮಗಳ ದೈಹಿಕ ಹಾಗೂ ಮಾನಸಿಕವಾದ ಆಕರ್ಷಣೆಗಳನ್ನು ವಿವೇಕದಿಂದ ಧಿಕ್ಕರಿಸುವ, ಯೋಚಿಸುವ ಕೆಲಸ ಮಾಡಬೇಕು. ಇಂತಹ ವಿಷಯದಲ್ಲಿ ಹದಿಹರೆಯದವರಿಗೆ ನಿರ್ಣಾಯಕ ಆಲೋಚನೆ ಬಹಳ ಅವಶ್ಯಕ ಎಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್ ಮತ್ತು ನಿರ್ದೇಶಕ ಡಾ.ಎಚ್.ಜಿ. ಮಂಜುನಾಥ್ ಎಚ್ಚರಿಸಿದರು.
ಮಾನಸ ಗಂಗೋತ್ರಿಯ ಆಹಾರ ವಿಜ್ಞಾನ ಮತ್ತು ಪೋಷಣೆ ಅಧ್ಯಯನ ವಿಭಾಗದಲ್ಲಿ ಮಾನವ ಅಭಿವೃದ್ಧಿ ಮತ್ತು ಕಲ್ಯಾಣ ಸಂಘ ಹಾಗೂ ಭಾರತೀಯ ಗೃಹ ವಿಜ್ಞಾನ ಸಂಘ ಮೈಸೂರು ಪ್ರಾದೇಶಿಕ ಅಧ್ಯಾಯನ ವತಿಯಿಂದ ಗುರುವಾರ ಏರ್ಪಡಿಸಿದ್ದ ಹದಿಹರೆಯದಲ್ಲಿ ಅಪಾಯಗಳು ಮತ್ತು ಸ್ಥಿತಿಸ್ಥಾಪಕತ್ವದ ಕವಲುದಾರಿಯಲ್ಲಿ ಜೀವನ ಕೌಶಲ್ಯಗಳು ವಿಷಯ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಹದಿಹರೆಯದವರಿಗೆ ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮದ ಗೀಳು ಅತ್ಯಂತ ಅಪಾಯಕಾರಿ. ಇವುಗಳನ್ನು ಅತಿಯಾಗಿ ನೋಡುವುದರಿಂದ ಮಾನಸಿಕ ಮತ್ತು ದೈಹಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಹದಿಹರೆಯದವರಲ್ಲಿ ದೈಹಿಕ ಬೆಳವಣಿಗೆ, ಮಾನಸಿಕ ಭಾವನೆ ಸೇರಿ ಹಲವು ಬದಲಾವಣೆಗಳು ಸಹಜ ಕ್ರಿಯೆ. ಹೀಗಾಗಿ ಹದಿಹರೆಯದವರು ಯೋಚನಾ ಶಕ್ತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಅವರ ಸುತ್ತಲಿನ ಪರಿಸರ, ಪೋಷಕರು ಅವರ ಬೆಳವಣಿಗೆಯ ಭವಿಷ್ಯದ ಮೇಲೆ ಯಾವ ರೀತಿಯ ಪ್ರಭಾವ ಬೀರಬಲ್ಲರೂ ಎಂಬುದು ಅತ್ಯಂತ ಮುಖ್ಯವಾಗುತ್ತದೆ ಎಂದು ಅವರು ಹೇಳಿದರು.ಪ್ರತಿಯೊಬ್ಬರೂ ಕನಸು ಕಾಣಬೇಕು. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ತವಕ, ಗುರಿ ಬೆಳೆಸಿಕೊಳ್ಳಬೇಕು. ದೈಹಿಕವಾಗಿ ಸದೃಢವಾಗಿರಲು ವ್ಯಾಯಾಮ, ಕಸರತ್ತು ಮಾಡುವಂತೆ, ಮಾನಸಿಕವಾಗಿಯೂ ಮೆದುಳನ್ನು ಸದೃಢವಾಗಿಸಲು ಹೆಚ್ಚು ಕೆಲಸ, ವ್ಯಾಯಾಯ ಮಾಡಬೇಕು. ಇದೆಲ್ಲಾ ಶಿಕ್ಷಣಕ್ಕೆ, ಕಲಿಕೆಗೆ ಒತ್ತು ನೀಡುವುದರಿಂದ ಸಾಧ್ಯ ಎಂದರು.
ಪ್ರಸ್ತುತ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಹದಿಹರೆಯದ ವಯಸ್ಸಿನಲ್ಲಿ ಹಲವು ಅಪಾಯಗಳು ಎದುರಾಗುತ್ತವೆ. ಹಾಗಾಗಿ ಈ ವಯಸ್ಸಿನಲ್ಲಿ ಹೆಚ್ಚು ಓದಿಗೆ ಪ್ರಾಮುಖ್ಯತೆ ನೀಡಿ ಎಂದು ಅವರು ಕಿವಿಮಾತು ಹೇಳಿದರು.ಹದಿಹರೆಯದಲ್ಲಿ ಹೆಚ್ಚು ಭಯ, ಹೆದರಿಕೆ, ನಾಚಿಕೆ ಸ್ವಾಭಾವ ಕಾಣಿಸುತ್ತದೆ. ಅದೆಲ್ಲದರಿಂದ ಬಿಡಿಸಿಕೊಂಡು ಸಮಾಜದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಬೇಕು. ವಿದ್ಯಾರ್ಥಿ ದಿಸೆಯಲ್ಲಿ ಹೆಚ್ಚು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದಾಗಿ ಜ್ಞಾನವೃದ್ಧಿ ಸಾಧ್ಯ ಎಂದು ಅವರು ತಿಳಿಸಿದರು.
ಆಹಾರ ವಿಜ್ಞಾನ ಮತ್ತು ಪೋಷಣೆ ಅಧ್ಯಯನ ವಿಭಾಗದ ಅಧ್ಯಕ್ಷೆ ಪ್ರೊ.ಎಂ. ಕೋಮಲಾ, ವಿಎಲ್ಇಡಿ ಡಾ.ಎಚ್.ಆರ್. ದಿವ್ಯಶ್ರೀ, ಎಚ್.ಡಿ.ಎಫ್.ಎಸ್ ಅಧ್ಯಾಪಕ ಎಸ್.ಕೆ. ಪವನ್ ಕುಮಾರ್, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.