5 ರಂದು ಆಂದೋಲನ । ತಾಲೂಕು ಕಚೇರಿಯಲ್ಲಿ ಪೂರ್ವ ಭಾವಿ ಸಭೆ
ಸೆಪ್ಟಂಬರ್ 5 ರ ಶನಿವಾರ ಬಿ.ಎಚ್. ಕೈಮರದ ನಾರಾಯಣ ಗುರು ಸಮುದಾಯಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ನಡೆಯುವ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನಕ್ಕೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಹಸೀಲ್ದಾರ್ ಡಾ.ನೂರಲ್ ಹುದಾ ಸೂಚಿಸಿದರು.
ಮಂಗಳವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಪ್ರಜಾ ಸೇವೆ ಆಂದೋಲನ ಸಭೆ ಕುರಿತು ನಡೆದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಎನ್.ಆರ್.ಪುರ ತಾಲೂಕಿನಲ್ಲಿ ಪ್ರಜಾ ಸೇವೆ ಆಂದೋಲನ ಶನಿವಾರ ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಶಾಸಕ ಟಿ.ಡಿ.ರಾಜೇಗೌಡ ಹಾಗೂ ಇತರ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಜಿಪಂ ಸಿಒ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಹ ಭಾಗವಹಿಸಲಿದ್ದಾರೆ.ಸಾರ್ವಜನಿಕರು ಯಾವುದೇ ಸರ್ಕಾರಿ ಇಲಾಖೆ ಸಮಸ್ಯೆಗಳ ಬಗ್ಗೆ ಅರ್ಜಿ ನೀಡಬಹುದು. ಇಲಾಖೆ ಅಧಿಕಾರಿಗಳ ಸೂಕ್ತ ಉತ್ತರ ನೀಡಬೇಕು. ವೇದಿಕೆ ಎದುರು 2 ಪೋಡಿಯಂ ಮಾಡಲಿದ್ದು ಒಂದು ಪೋಡಿಯಂನಲ್ಲಿ ಸಾರ್ವಜನಿಕರು ಪ್ರಶ್ನೆ ಕೇಳಬಹುದು. ಮತ್ತೊಂದು ಪೋಡಿಯಂ ನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಉತ್ತರ ನೀಡಲಿದ್ದಾರೆ. ಸಮಸ್ಯೆ ಬಗೆಹರಿಸಲು ಸಾಧ್ಯವಾದರೆ ಅಲ್ಲೇ ಬಗೆಹರಿಸುತ್ತಾರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ ಎಂದರು.
ತಾಲೂಕು ಕಚೇರಿಯಲ್ಲಿ ಬುಧವಾರದಿಂದಲೇ ಸಾರ್ವಜನಿಕರು ಅರ್ಜಿ ನೀಡಲು ಅನುಕೂಲವಾಗುವಂತೆ ಕೌಂಟರ್ ತೆರೆಯಲು ತೀರ್ಮಾನಿಸಲಾಯಿತು. ತಾಲೂಕು ಮಟ್ಟದ ಎನ್.ಆರ್.ಎಲ್.ಎಂ. ಯೋಜನೆಯಿಂದ ಗೃಹ ಬಳಕೆ ವಸ್ತುಗಳ ಸ್ಟಾಲ್ ಹಾಕಬಹುದು. ಸಾರ್ವಜನಿಕರು ಕಾರ್ಯಕ್ರಮ ನಡೆಯುವ ದಿನದಂದೇ ನಿಗದಿತ ಅರ್ಜಿ ಫಾರಂನಲ್ಲಿ ಪಿಂಚಣಿ, ವಸತಿ, ನಿವೇಶನ ಸಮಸ್ಯೆ, ಗ್ಯಾರಂಟಿ ಯೋಜನೆಗೆ ಇರುವ ಸಮಸ್ಯೆ ಸೇರಿದಂತೆ ಯಾವುದೇ ಸಮಸ್ಯೆ ಇದ್ದರೂ ಅರ್ಜಿ ನೀಡಬಹುದು. ಈ ವಿಚಾರ ವ್ಯಾಪಕ ಪ್ರಚಾರಕ್ಕೆ ನಿರ್ಧರಿಸಲಾಯಿತು.