ಕೊಟ್ಟೂರು: ವೈಜ್ಞಾನಿಕ ಹಿನ್ನೆಲೆಯುಳ್ಳವರಾಗಿ, ಚಿಂತಕರಾಗಿ, ಪರಿಸರ ಕಾಳಜಿಯುಳ್ಳವರಾಗಿದ್ದ ಪೂರ್ಣಚಂದ್ರ ತೇಜಸ್ವಿಯವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಹೊಳಪನ್ನು ನೀಡಿದ್ದಾರೆ ಎಂದು ಶಿಕ್ಷಕ ಹಾಗೂ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಬಿ. ಶಿವಾನಂದ ಹೇಳಿದರು.
ರಾಷ್ಟ್ರಕವಿ ಕುಂವೆಂಪು ಮಗನಾಗಿದ್ದರೂ ಎಂದಿಗೂ ಅವರ ಹೆಸರಿನಿಂದ ಗುರುತಿಸಿಕೊಳ್ಳದೇ ತಮ್ಮದೇ ವಿಚಾರಧಾರೆಗಳನ್ನು ರೂಢಿಸಿಕೊಂಡಿದ್ದರು. ಪ್ರತಿಯೊಂದನ್ನು ಪ್ರಶ್ನಿಸುವ, ತಿಳಿದುಕೊಳ್ಳವ ದೊಡ್ಡ ವ್ಯಕ್ತಿತ್ವ ತೇಜಸ್ವಿಯವರದ್ದಾಗಿತ್ತು. ತಮ್ಮ ತಂದೆಯವರ ಕುರಿತಾಗಿ ಅಣ್ಣನ ನೆನಪು ಪುಸ್ತಕದಲ್ಲಿ ಸಮಗ್ರ ವಿವರ ನೀಡಿದ್ದಾರೆ. ಪರಿಸರ ಉಳಿವು, ಹೋರಾಟ ಕುರಿತು ಬರೆದ ಜುಗಾರಿ ಕ್ರಾಸ್ ಪುಸ್ತಕ ಅವರಲ್ಲಿನ ಪರಿಸರ ಕಾಳಜಿ ತೋರಿದರೆ, ಕೃಷ್ಞೇಗೌಡರ ಆನೆ ಪುಸ್ತಕ ಪ್ರಾಣಿ ಮತ್ತು ಮಾನವ ಸಂಘರ್ಷವನ್ನು ತಿಳಿಸುತ್ತದೆ. ಮನುಷ್ಯ ಎಷ್ಟೇ ಬುದ್ಧಿವಂತನಾದರೂ ಪರಿಸರದ ವಿಸ್ಮಯಗಳನ್ನು ಬದಲಿಸಲು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದ್ದರು. ಕನ್ನಡ ಸಾಹಿತ್ಯ ಪರಿಷತ್ನ ತಾಲೂಕು ಅಧ್ಯಕ್ಷ ಡಿ. ಕೊಟ್ರೇಶ ಅವರು ಎಂದಿಗೂ ಚಟುವಟಿಕೆಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಅವರಲ್ಲಿನ ಕನ್ನಡ ಪ್ರೇಮ ಉತ್ಸಾಹ ತೋರುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಭಾರ ಪ್ರಾಚಾರ್ಯ ಡಾ. ಜಗದೀಶ್ ಚಂದ್ರ ಭೋಸ್ ಮಾತನಾಡಿ, ಕಸಾಪಕ್ಕಾಗಿ ಅನೇಕ ದಾನಿಗಳು ದತ್ತಿ ಉಪನ್ಯಾಸ ನಡೆಸಲು ಸಹಕರಿಸಿರುವುದು ಹೆಮ್ಮೆಯ ಸಂಗತಿ. ಕಸಾಪ ಮೂಲಕ ಶಾಲೆ ಕಾಲೇಜುಗಳನ್ನು ಉಪನ್ಯಾಸಗಳನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ. ತಾಲೂಕು ಅಧ್ಯಕ್ಷ ದೇವರಮನಿ ಕೊಟ್ರೇಶ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನು ಹೋಂದಿರಬೇಕು. ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕು. ತಂದೆ ತಾಯಿಯೊಂದಿಗೆ ಉತ್ತಮ ಮಕ್ಕಳಾಗಿ ಹೆಸರು ಕೀರ್ತಿ ತರಬೇಕು. ನಮ್ಮ ಘಟಕದಿಂದ ಹೆಚ್ಚಿನ ಸಂಖ್ಯೆಯ ದಾನಿಗಳಿಂದ ದತ್ತಿ ನೀಡಲಾಗಿದೆ. ಜಿಲ್ಲಾ ಘಟಕದಿಂದ ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.ದತ್ತಿ ದಾನಿಗಳಾದ ಸುಶೀಲಮ್ಮ, ಹುಡೇದ ಮೃತ್ಯುಂಯ, ಕಸಾಪ ಗೌರವ ಕಾರ್ಯದರ್ಶಿ ಸೊನ್ನದ ರಾಜಣ್ಣ, ಶಿಕ್ಷಕ ಮತ್ತಿಹಳ್ಳಿ ನಾಗರಾಜ, ಉಪನ್ಯಾಸಕ ಮಗ್ಗದ ನಾಗರಾಜ ಇದ್ದರು. ಪರಿಷತ್ ಗೌರವ ಖಜಾಂಚಿ ಈಶ್ವರಪ್ಪ ತುರಕಾಣಿ, ದತ್ತಿ ದಾನಿಗಳ ಪರಿಚಯ ಮಾಡಿಕೊಟ್ಟರು.