ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಸುಮಾರು ರು. 65 ಲಕ್ಷ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ದೇವಾಲಯದಲ್ಲಿ ವಿಗ್ರಹ ಪುನರ್ ಪ್ರತಿಷ್ಠಾಪನೆ, ಕುಂಭಾಭಿಷೇಕ, ಅಷ್ಟಬಂಧ, ಪ್ರಾಣಪ್ರತಿಷ್ಠೆ ಹಾಗೂ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮಗಳು ಜು. 1ರಿಂದ 3ರವರೆಗೆ ಆಗಮೋಕ್ತ ವಿಧಿವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ಮೂರು ದಿನಗಳ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಅಮ್ಮನವರ ದರ್ಶನ ಪಡೆದು ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡರು.ಮಹೋತ್ಸವದ ಪ್ರಮುಖ ದಿನವಾದ ಗುರುವಾರ ಬ್ರಹ್ಮ ಮುಹೂರ್ತದಲ್ಲಿ ಪೀಠಪೂಜೆ, ನವರತ್ನನ್ಯಾಸ, ವಿಮಾನ ಕಳಸ ಸ್ಥಾಪನೆ, ಅಮ್ಮನವರ ಪ್ರತಿಷ್ಠಾಪನೆ, ಅಷ್ಟಬಂಧ, ಪ್ರಾಣ ಪ್ರತಿಷ್ಠೆ ಸೇರಿದಂತೆ ವಿವಿಧ ಆಗಮೋಕ್ತ ವಿಧಿವಿಧಾನಗಳು ನೆರವೇರಿತು.
ಗೋಪುರದ ಕಳಶ ಪ್ರತಿಷ್ಠಾಪನೆ ನೆರವೇರಿಸಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮೈಸೂರು ಶಾಖೆಯ ಸೋಮೇಶ್ವರನಾಥ ಸ್ವಾಮೀಜಿ, ದೇವಾಲಯಗಳು ಸಮಾಜದಲ್ಲಿ ಭಾವೈಕ್ಯತೆ, ಸೌಹಾರ್ದತೆ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಪವಿತ್ರ ಕೇಂದ್ರಗಳಾಗಿವೆ ಎಂದು ಹೇಳಿದರು.
ಮಹೋತ್ಸವದ ಅಂಗವಾಗಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೂತನ ದೇವಸ್ಥಾನ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು.
ಮಹೋತ್ಸವದ ಮೊದಲ ದಿನ ಪಟ್ಟಣದ ತಾರಕಾ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಿಂದ ಮಂಗಳವಾದ್ಯಗಳೊಂದಿಗೆ ನೂರಾರು ಮಹಿಳೆಯರು ಕಳಶಗಳಲ್ಲಿ ಗಂಗಾಜಲ ತಂದು ಭವ್ಯ ಮೆರವಣಿಗೆಯ ಮೂಲಕ ದೇವಾಲಯ ಪ್ರವೇಶಿಸಿದರು. ನಂತರ ಗಣಪತಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು. ಎರಡನೇ ದಿನ ಪುಣ್ಯಾಹ, ವಾಸ್ತು ಪೂಜೆ, ಕಳಸ ಪೂಜೆ, ಹೋಮ, ಪೂರ್ಣಾಹುತಿ ಸೇರಿದಂತೆ ವಿಶೇಷ ಪೂಜೆಗಳು ನೆರವೇರಿದವು. ಸಂಜೆ ನಡೆದ ಭಕ್ತಿಗೀತೆಗಳ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆದವು.
ದೇವಾಲಯ ನಿರ್ಮಾಣಕ್ಕೆ ಸಾರ್ವಜನಿಕರು, ದಾನಿಗಳು ಹಾಗೂ ಟ್ರಸ್ಟ್ ಸದಸ್ಯರು ಉದಾರವಾಗಿ ಸಹಕಾರ ನೀಡಿದ್ದರು. ಅವರ ಸಹಭಾಗಿತ್ವದಿಂದ ದೇವಾಲಯದ ಪುನರ್ ನಿರ್ಮಾಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನೂತನ ದೇವಸ್ಥಾನವು ಪಟ್ಟಣದ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿ ರೂಪುಗೊಂಡಿದೆ. ಮೂರು ದಿನಗಳ ಮಹೋತ್ಸವವು ಭಕ್ತಿ, ಸಂಭ್ರಮ, ಶಿಸ್ತು ಹಾಗೂ ಜನಸಹಭಾಗಿತ್ವದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಭಕ್ತರ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿಯಿತು.