ಶಕ್ತಿ ಯೋಜನೆಯಿಂದ ದೇವಳ ಆದಾಯ ದ್ವಿಗುಣ: ಉಡುಪಿ ಕಾಂಗ್ರೆಸ್‌

KannadaprabhaNewsNetwork |  
Published : Feb 28, 2024, 02:35 AM IST
ಕಾಂಗ್ರಸ್‌ | Kannada Prabha

ಸಾರಾಂಶ

ಹಿಂದೂ ಧರ್ಮವನ್ನು ಅನ್ಯ ಧರ್ಮಗಳ ವಿರುದ್ಧ ಎತ್ತಿಕಟ್ಟಿ ಧರ್ಮಾಂಧತೆಯ ವಿಷಬೀಜ ಬಿತ್ತಿ ತನ್ನ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಬಿಜೆಪಿಯದ್ದು ಕಪಟ ಹಿಂದುತ್ವ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ರಾಜ್ಯ ಸರ್ಕಾರ ನೀಡಿರುವ ಪಂಚ ಗ್ಯಾರಂಟಿಯಡಿಯಲ್ಲಿ ಘೋಷಿಸಿರುವ ಶಕ್ತಿ ಯೋಜನೆಯಿಂದ ಮುಜರಾಯಿ ದೇವಸ್ಥಾನಗಳ ಆರ್ಥಿಕ ಸಂಪನ್ಮೂಲ ಇಮ್ಮಡಿಗೊಂಡಿದೆ. ಇದನ್ನು ಕಂಡು ದಿಗ್ಭ್ರಮೆಗೊಂಡಿರುವ ಬಿಜೆಪಿ ಜನರ ದಿಕ್ಕು ತಪ್ಪಿಸಲು ಸರ್ಕಾರ ದೇವರ ಹುಂಡಿಗೆ ಕನ್ನ ಹಾಕುತ್ತಿದೆ ಎಂದು ಅಪಪ್ರಚಾರ ಮಾಡುತ್ತಿರುವುದನ್ನು ರಾಜ್ಯ ಅರ್ಚಕರ ಸಂಘ ಖಂಡಿಸಿ ವಾಸ್ತವ ಸತ್ಯವನ್ನು ಜನರ ಮುಂದಿಟ್ಟಿರುವುದು ಕಾಂಗ್ರೆಸ್ಸಿನ ಧಾರ್ಮಿಕ ಕ್ಷೇತ್ರದ ಸಾಧನೆಗೆ ಸಂದ ಜಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ಮಸೂದೆ-2024ರ ಮೂಲ ಉದ್ದೇಶ, ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಗೊಳಪಟ್ಟ ಎ ಶ್ರೇಣಿಯ 1 ಕೋಟಿ ರು. ಹಾಗೂ ಅದಕ್ಕಿಂತ ಮೇಲ್ಪಟ್ಟು ಆದಾಯವಿರುವ ದೇಗುಲಗಳ ಆದಾಯದ ಶೇ.10 ಅಂಶವನ್ನು ಆದ್ಯತೆಯಡಿಯಲ್ಲಿ ಸಿ ಶ್ರೇಣಿಯ ಸುಮಾರು 34223 ದೇವಾಲಯಗಳ ಸಮಗ್ರ ಅಭಿವೃದ್ಧಿಯ ಗುರಿಯೊಂದಿಗೆ ಇಲಾಖೆಯ ಸಾಮಾನ್ಯ ಸಂಗ್ರಹಣಾ ನಿಧಿಗೆ ಮೀಸಲಿಡುವುದೇ ಆಗಿದೆ. ಆದರೆ ಸಿದ್ದರಾಮಯ್ಯ ಸರ್ಕಾರ ಹಿಂದು ದೇಗುಲಗಳ ಹುಂಡಿಗೆ ಕನ್ನಹಾಕಿ ಮಸೀದಿ, ಚರ್ಚುಗಳ ಅಭಿವೃದ್ಧಿಗೆ ಈ ಹಣ ನೀಡುತ್ತಿದೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿರುವುದು ವಿಷಾದನೀಯ. ಆದರೆ ರಾಜ್ಯ ಅರ್ಚಕರ ಸಂಘ ಇದಕ್ಕೆ ಸ್ಪಷ್ಟನೆ ನೀಡಿ ಹಿಂದು ದೇಗುಲಗಳ ಹಣ ಅನ್ಯ ಧರ್ಮಿಯರ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ವಿನಿಯೋಗವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿ ಸತ್ಯ ಬಿಚ್ಚಿಟ್ಟಿರುವುದು ಉಲ್ಲೇಖನೀಯ. ಆದರೆ ವಿಧಾನಮಂಡಲದ ಮೇಲ್ಮನೆಯಲಿ ಧ್ವನಿಮತದಲ್ಲಿ ಮಸೂದೆ ಬಿದ್ದು ಹೋಗಿರುವುದು ಬಿಜೆಪಿಯ ಡೋಂಗಿ ಧರ್ಮ ರಾಜಕೀಯಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಹೇಳಿದೆ.

ಹಿಂದೂ ಧರ್ಮವನ್ನು ಅನ್ಯ ಧರ್ಮಗಳ ವಿರುದ್ಧ ಎತ್ತಿಕಟ್ಟಿ ಧರ್ಮಾಂಧತೆಯ ವಿಷಬೀಜ ಬಿತ್ತಿ ತನ್ನ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಬಿಜೆಪಿಯದ್ದು ಕಪಟ ಹಿಂದುತ್ವ. ತನ್ನ ಆಡಳಿತದ ಅವಧಿಯಲ್ಲಿ ವಿವಿಧ ದೇಗುಲಗಳ ಅರ್ಚಕರ ನಿರಂತರ ಬೇಡಿಕೆಯ ಹೊರತಾಗಿಯೂ ದೇಗುಲಗಳಿಗೆ ತಸ್ತಿಕ್ ಹಣ ಬಿಡುಗಡೆ ಮಾಡದ ಬಿಜೆಪಿಗೆ ಕಾಂಗ್ರೆಸ್ ಪಕ್ಷಕ್ಕಿರುವ ಹಿಂದುತ್ವದ ಧರ್ಮ ಬದ್ಧತೆಯನ್ನು ಪ್ರಶ್ನಿಸುವ ನೈತಿಕತೆ ಇಲ್ಲ. ಸಿದ್ಧರಾಮಯ್ಯ ಸರ್ಕಾರ ಈಗಾಗಲೇ 2023-24ರ ತಸ್ತಿಕ್ ಹಣದ ಮೊದಲ ಕಂತಿನ ಸುಮಾರು 77.56 ಕೋಟಿ ರು. ಬಿಡುಗಡೆ ಮಾಡಿ ಹಿಂದುತ್ವದ ತಮ್ಮ ಬದ್ಧತೆಯನ್ನು ಸಾಬೀತು ಮಾಡಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ, ಮಾಜಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ