ಕನ್ನಡಪ್ರಭ ವಾರ್ತೆ ಹಾಸನ
ಬಂಧಿತರನ್ನು ವಿಕಾಸ್, ಕಲಬುರಗಿಯ ಸಾಯಿನಾಥ್, ಮೈಸೂರಿನ ಆಕಾಶ್, ಆದಿತ್ಯ ಆರ್, ನಂಜನಗೂಡಿನ ಜಯಂತ್, ತುಮಕೂರಿನ ಪುನೀತ್ ಕುಮಾರ್, ಮಾಗಡಿ ರಸ್ತೆಯ ರಾಕೇಶ್, ಬೆಳ್ಳೂರಿನ ಶಶಿಧರ್, ಬೆಂಗಳೂರಿನ ಭರತ್ ಹಾಗೂ ಯಲ್ಲಾಲಿಂಗ ಎಂದು ಗುರುತಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾ ಅವರ ನೇತೃತ್ವದಲ್ಲಿ ಹಲವು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳ ಪತ್ತೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ನಡುವೆ ಸಾಯಿನಾಥ್, ಶಶಿಧರ್, ಭರತ್ ಸೇರಿದಂತೆ ಐವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಿಡುಗಡೆ ಮಾಡಿ ಬಳಿಕ ಹಾಸನ ಡಿವೈಎಸ್ಪಿ ಗಂಗಾಧರಪ್ಪ ಅವರ ಮುಂದೆ ಶರಣಾಗಿದ್ದರು.
ವಿಡಿಯೋದಲ್ಲಿ ಮಂಜೇಶ್ ಹತ್ಯೆಗೂ ನಮಗೂ ಯಾವುದೇ ಸಂಬಂಧವಿಲ್ಲ. ನಾವು ಆ ದಿನ ಬೆಂಗಳೂರಿನಲ್ಲಿದ್ದು ನಂತರ ಕಾರವಾರ ಸೇರಿದಂತೆ ವಿವಿಧ ಸ್ಥಳಗಳಿಗೆ ಪ್ರವಾಸಕ್ಕೆ ತೆರಳಿದ್ದೆವು. ಆದರೂ ಪೊಲೀಸರು ನಮ್ಮ ಮನೆಗಳಿಗೆ ಭೇಟಿ ನೀಡಿ ಪೋಷಕರನ್ನು ವಿಚಾರಣೆ ನಡೆಸುತ್ತಿದ್ದಾರೆ. ಬೇರೆಯವರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಸ್ವಯಂಪ್ರೇರಿತವಾಗಿ ಶರಣಾಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ನಮಗೇನಾದರೂ ತೊಂದರೆ ಆದರೆ ಅದಕ್ಕೆ ಹಾಸನ ಡಿವೈಎಸ್ಪಿ ಹೊಣೆ ಎಂಬ ಆರೋಪವನ್ನೂ ವಿಡಿಯೋದಲ್ಲಿ ಮಾಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿತ್ತು. ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಈ ರೀತಿಯ ಶರಣಾಗತಿ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ನಿಜವಾದ ಆರೋಪಿಗಳನ್ನು ರಕ್ಷಿಸುವ ಉದ್ದೇಶದಿಂದಲೇ ಇಂಥಾ ಬೆಳವಣಿಗೆ ಆಗಿದೆಯೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಇದರ ಮಧ್ಯೆ, ವಿಶೇಷ ತನಿಖಾ ತಂಡಗಳು ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಮತ್ತೈದು ಆರೋಪಿಗಳನ್ನು ಶರಣಾಗುವ ಮೊದಲೇ ಬಂಧಿಸಿದ್ದವು. ಇದರಿಂದ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ೧೦ಕ್ಕೆ ಏರಿಕೆಯಾಗಿದೆ.ಬಂಧಿತರೆಲ್ಲರನ್ನು ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಬಡಾವಣೆ ಪೊಲೀಸ್ ಠಾಣೆಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ, ಪ್ರಕರಣದ ಕಿಂಗ್ಪಿನ್ ಹಾಗೂ ಪ್ರಮುಖ ಆರೋಪಿ ಎಂದು ಗುರುತಿಸಲ್ಪಟ್ಟಿರುವ ಪರಮೇಶ್ ಇನ್ನೂ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ರಾಜ್ಯಾದ್ಯಂತ ಬಲೆ ಬೀಸಿದ್ದಾರೆ. ಹತ್ಯೆಯ ಹಿಂದಿನ ನಿಖರ ಉದ್ದೇಶ, ಸಂಚು ಮತ್ತು ಭಾಗಿಯಾಗಿರುವ ಇತರರ ಪಾತ್ರವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.