ಹನುಮಸಾಗರದಲ್ಲಿ ಕಬ್ಬರಗಿಯಲ್ಲಿ ಪರೀಕ್ಷಾ ಸಂಭ್ರಮ ಕಾರ್ಯಕ್ರಮ

KannadaprabhaNewsNetwork | Published : Feb 26, 2024 1:30 AM

ನಾವೆಲ್ಲ ಈ ಪರೀಕ್ಷೆಯನ್ನು ಒಂದು ಹಬ್ಬವಾಗಿ ಆಚರಿಸಿ ಯಾವುದೇ ರೀತಿಯ ಆತಂಕ ಇಲ್ಲದೇ ಈ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಎದುರಿಸಿ ತಾಲೂಕಿಗೆ ಉತ್ತಮ ಫಲಿತಾಂಶ ನೀಡುವುದಕ್ಕೆ ನಾವೆಲ್ಲ ಸಿದ್ಧರಾಗೋಣ.

ಹನುಮಸಾಗರ: ಪರೀಕ್ಷೆ ಎಂಬುದು ಯುದ್ಧವಲ್ಲ, ಅದೊಂದು ಉತ್ಸವ. ಪರೀಕ್ಷೆ ಬರೆಯುವುದಕ್ಕೆ ಉತ್ಸಾಹ ಇರಬೇಕೇ ಹೊರತು ಭಯವಲ್ಲ ಎಂದು ಕಬ್ಬರಗಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಮೈಲಾರಪ್ಪ ಹಾದಿಮನಿ ಹೇಳಿದರು.ಸಮೀಪದ ಕಬ್ಬರಗಿ ಸರ್ಕಾರಿ ಪ್ರೌಢಶಾಲೆ ಕಬ್ಬರಗಿಯ ಸಹಯೋಗದಲ್ಲಿ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಪರೀಕ್ಷೆಯನ್ನು ಬರೆಯಲಿರುವ 2023 - 24 ನೇ ಸಾಲಿನ ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಸಂಭ್ರಮ ಮತ್ತು ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪರೀಕ್ಷಾ ಕೇಂದ್ರದಲ್ಲಿ ಅತ್ಯಂತ ಅಚ್ಚುಕಟ್ಟಾದ ರೀತಿಯಲ್ಲಿ ಪರೀಕ್ಷೆ ನಡೆಸಲಾಗುವುದು. ನಿಮಗೆ ಯಾವುದೇ ರೀತಿಯ ತೊಂದರೆ ಆಗದ ಹಾಗೆ ಎಲ್ಲ ಶಿಕ್ಷಕರು ನಿಮಗೆ ಮಾರ್ಗದರ್ಶನ ಮಾಡಿ ಅತ್ಯಂತ ಸರಳ ಮತ್ತು ಭಯ ರಹಿತವಾಗಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗುವುದು ಎಂದರು.ಶಿಕ್ಷಣ ಸಂಯೋಜಕ ತಿಮ್ಮಣ್ಣ ಹಿರೇಹೊಳಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಭಯ ನಿವಾರಣೆ ಮಾಡಿ ಅತ್ಯಂತ ಉತ್ಸಾಹದಿಂದ ಪರೀಕ್ಷೆ ಎದುರಿಸಲಿ ಎಂಬುವ ಸದುದ್ದೇಶದಿಂದ ಕನಸಿನ ಕೂಸು ಈ ಪರೀಕ್ಷಾ ಸಂಭ್ರಮ ಮತ್ತು ಸಂವಾದ ಅನ್ನುವ ಒಂದು ವಿನೂತನ ಕಾರ್ಯಕ್ರಮವಾಗಿದೆ. ನಾವೆಲ್ಲ ಈ ಪರೀಕ್ಷೆಯನ್ನು ಒಂದು ಹಬ್ಬವಾಗಿ ಆಚರಿಸಿ ಯಾವುದೇ ರೀತಿಯ ಆತಂಕ ಇಲ್ಲದೇ ಈ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಎದುರಿಸಿ ತಾಲೂಕಿಗೆ ಉತ್ತಮ ಫಲಿತಾಂಶ ನೀಡುವುದಕ್ಕೆ ನಾವೆಲ್ಲ ಸಿದ್ಧರಾಗೋಣ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಭಯ ಹೋಗಲಾಡಿಸುವ ಸಲುವಾಗಿ ಮುಖ್ಯ ಪರೀಕ್ಷೆಯ ಮಾದರಿಯಂತೆ ಅಣಕು ಪರೀಕ್ಷೆಯನ್ನು ನಡೆಸಲಾಯಿತು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಚನ್ನಪ್ಪ ಅಂಬಿಗೇರ (ಕನ್ನಡ), ಅರವಿಂದ ನಡುವಿನಮನಿ (ಹಿಂದಿ), ಮಲ್ಲಪ್ಪ ಹೆಬ್ಬಾಳ (ಗಣಿತ), ಬಸವರಾಜ ಕೊರ್ತಿ (ವಿಜ್ಞಾನ) ಹಾಗೂ ಚಿದಾನಂದ ಕಸ್ತೂರಿ (ಸಮಾಜ ವಿಜ್ಞಾನ) ವಿದ್ಯಾರ್ಥಿಗಳಿಗೆ ಪರೀಕ್ಷೆಯ ಕುರಿತಾಗಿ ವಿಷಯವಾರು ಇರುವ ಆತಂಕ ಪರೀಕ್ಷೆಗೆ ಬೇಕಾಗುವ ಸಿದ್ಧತೆ ಪರೀಕ್ಷೆಯಲ್ಲಿ ಎದುರಿಸಬಹುದಾದ ಸವಾಲುಗಳನ್ನು ಕುರಿತು ಮಾರ್ಗದರ್ಶನ ಮಾಡಿದರು.ಗುರುಬಸಪ್ಪ, ಶ್ರೀನಿವಾಸ ಕುಲಕರ್ಣಿ, ಎಸ್.ಎಚ್. ಬೀಳಗಿ, ದೈಹಿಕ ಶಿಕ್ಷಕ ಬಿವಿ ಬನ್ನಿ, ಚಿತ್ರಕಲಾ ಶಿಕ್ಷಕ ತಿರುಪತಿ ಚಲವಾದಿ, ಸಂಗಮೇಶ ತೆಗ್ಗಿನಮನಿ, ಶಿವಪ್ರಕಾಶ ಸಜ್ಜನ, ಶರಣಬಸಪ್ಪ ಇತರರು ಇದ್ದರು.