ಕುರುಗೋಡು: ವಿದ್ವಾಂಸರಿಂದ ವಿಷಯವಾರು ವೈವಿಧ್ಯಮಯ ವಿಷಯ ಸಂಗ್ರಹಿಸಿದ ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾಗಿವೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಆಡಳಿತ ವಿಭಾಗದ ಕುಲಸಚಿವ ಪಿ.ನಾಗರಾಜು ಹೇಳಿದರು.
ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ಮಾರ್ಗಸೂಚಿಗಳಾಗಿದ್ದು, ಸಾಹಿತ್ಯದ ಅಭಿರುಚಿಯನ್ನು ಮೂಡಿಸುವಲ್ಲಿ, ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಿವೆ ಎಂದು ತಿಳಿಸಿದರು.
ಸಾಹಿತಿ ಹಾಗೂ ಸಿಂಡಿಕೇಟ್ ಸದಸ್ಯ ಡಾ.ಅಮರೇಶ್ ನುಗಡೋಣಿ ಸ್ನಾತಕ ಪದವಿಯ ಪಠ್ಯಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಕನ್ನಡ ಸಾಹಿತ್ಯದ ಚರಿತ್ರೆಯ ಅರಿವು ಮತ್ತು ಕನ್ನಡ ಭಾಷಾ ಜ್ಞಾನ ನೀಡುವ ಕಾರ್ಯವನ್ನು ಪಠ್ಯಪುಸ್ತಕಗಳು ಮಾಡುತ್ತವೆ. ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೇ ಸ್ಪರ್ಧಾತ್ಮಕ ಪ್ರಪಂಚಕ್ಕೆ ಉಪಯುಕ್ತವಾಗುವ ಜ್ಞಾನವನ್ನು ಸಂಪಾದಿಸಬೇಕು ಎಂದು ಕರೆ ನೀಡಿದರು.ವಿಶ್ವವಿದ್ಯಾಲಯವು ಸಂಪಾದಕರಿಗೆ ಚಿಂತನ-ಮಂಥನ ಕಾರ್ಯಾಗಾರವನ್ನು ನಡೆಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಉತ್ತಮ ಪಠ್ಯಕ್ರಮವನ್ನು ರೂಪಿಸಬೇಕಾಗಿದೆ ಎಂದು ತಿಳಿಸಿದರು.
ಪ್ರಸಾರಾಂಗದ ನಿರ್ದೇಶಕ ಡಾ.ತಿಪ್ಪೇರುದ್ರ ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಶಾಂತಲಾ ವಹಿಸಿದ್ದರು. ಡಾ.ಶಶಿಕಾಂತ್ ಅವರು ಸ್ವಾಗತಿಸಿದರು. ಮಂಜುನಾಥಸ್ವಾಮಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಪ್ರಸಾರಾಂಗದ ಹಿಂದಿನ ನಿರ್ದೇಶಕ ಡಾ.ಅರುಣಕುಮಾರ ಲಗಶೆಟ್ಟಿ, ವಾಣಿಜ್ಯ ಸೌರಭ-2 ಪಠ್ಯಪುಸ್ತಕದ ಸಂಪಾದಕ ಸಿ.ದೇವಣ್ಣ, ರಘುಪ್ರಸಾದ್, ಮೌನೇಶ್ ಬಡಿಗೇರ್, ಕಾಲೇಜಿನ ಅಧ್ಯಾಪಕ ಡಾ.ಚನ್ನಬಸವಯ್ಯ ಹೆಚ್.ಎಂ., ಮುರಳಿಶಂಕರಗೌಡ, ಡಾ.ಜ್ಞಾನ ಪ್ರಸೂನಾಂಭ, ಮಧುಸೂಧನ್, ವೀರಲಿಂಗಪ್ಪ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.