ಕನ್ನಡಪ್ರಭ ವಾರ್ತೆ ಜೋಯಿಡಾ
ಕೃಷಿಕರ ಬದುಕಿನ ಬುತ್ತಿಯಾದ ತೋಟಪಟ್ಟಿಗಳು, ಬಿಸಿಲಿನ ತಾಪಕ್ಕೆ ನಲುಗಿ ಹೋಗುತ್ತಿವೆ. ಅಡಕೆ, ತೆಂಗು, ಇತರ ಎಲ್ಲ ಗಿಡಗಳಲ್ಲಿ ಇರುವ ಎಳೆಯ ಕಾಯಿಗಳು, ಒಣಗಿ ಬೀಳುತ್ತಿವೆ. ಸಿಂಗಾರಗಳು ಬಿಸಿಲಿನ ಬಿರುಸಿಗೆ ಒಣಗುತ್ತಿವೆ. ನೀರು ಇರುವವರು ನೀರು ಕೊಟ್ಟರೂ ಕಷ್ಟ, ಕೊಡದಿದ್ದರೂ ಕಷ್ಟ ಎಂಬ ಸ್ಥಿತಿಗೆ ಬಂದಿದ್ದಾರೆ. ಮೇಲಿನ ಬಿಸಿಲಿನ ತಾಪಕ್ಕೆ, ಗಿಡಗಳ ಬುಡಕ್ಕೆ ನೀರು ಬಿದ್ದರೆ ಇರುವ ಮಿಡಿಗಳೂ ಬಿದ್ದು ಹೋಗುತ್ತವೆ ಎನ್ನುವ ರೈತರು, ಮಳೆಗಾಗಿ ಆಕಾಶ ನೋಡುತ್ತಾ ದಿಕ್ಕೇ ತೋಚದೆ ಕಂಗೆಟ್ಟಿದ್ದಾರೆ. ದನಕರುಗಳಿಗೆ, ಅಲ್ಲಲ್ಲಿ ಸಿಗುವ ನೀರುಗಳೆಲ್ಲ ಬತ್ತಿಹೋಗಿದೆ. ಕಾಡು ಪ್ರಾಣಿಗಳ ಸ್ಥಿತಿಯಂತೂ ಯಾರಿಗೂ ಬೇಡ, ಕಾಡಲ್ಲಿ ನೀರಿಲ್ಲದ ಕಾರಣ ರೈತರ ತೋಟ ಗಳಿಗೆ ನೀರಿಗಾಗಿ ಬರುತ್ತಿವೆ, ಇದರಿಂದ ರೈತರ ಬೆಳೆ ಹಾಳಾಗುತ್ತಿದೆ. ಅರಣ್ಯ ಇಲಾಖೆ ಅರಣ್ಯದಲ್ಲಿ ಹತ್ತಾರು ಕಡೆ ನೀರಿನ ಸಂಗ್ರಹಣೆ ಮಾಡಿ ಕೊಟ್ಟರೆ ಪ್ರಾಣಿಗಳ ಬದುಕು ಹಸನಾಗಬಹುದು. ನೀರು ಇರುವ ಕಡೆ ಪ್ರವಾಸಿಗರು, ಬಂದು ಹೋಗುತ್ತಿರುವ ಕಾರಣ ಕಾಡು ಪ್ರಾಣಿಗಳು ನೀರಿನ ಬರ ಎದುರಿಸಬೇಕಾಗಿದೆ, ಅಲ್ಲಲ್ಲಿ ಮಳೆ ಬೀಳುತ್ತಿದ್ದರೂ ತಾಲೂಕಿನಲ್ಲಿ ಮಳೆ ಇಲ್ಲದೇ ಜನಜೀವನಕ್ಕೆ ತೊಂದರೆ ಆಗಿದೆ. ಇಡೀ ಜಿಲ್ಲೆಯಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.