ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದ ಪ್ರಧಾನಿ ಮೋದಿ ಅವರು ಸಂಚರಿಸುವ ಮಾರ್ಗದಲ್ಲಿ ಭಾನುವಾರ ಬೆಳಗ್ಗೆ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕನ್ನಡಪ್ರಭ ವಾರ್ತೆ ಬೆಂಗಳೂರು/ರಾಮನಗರ
ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದ ಪ್ರಧಾನಿ ಮೋದಿ ಅವರು ಸಂಚರಿಸುವ ಮಾರ್ಗದಲ್ಲಿ ಭಾನುವಾರ ಬೆಳಗ್ಗೆ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ನ ಧ್ಯಾನಮಂದಿರ ಉದ್ಘಾಟನೆಗೆ ಪ್ರಧಾನಿ ಮೋದಿ ತೆರಳುವ ಒಂದೂವರೆ ತಾಸು ಮೊದಲು ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಾತಗುಣಿ ಬಳಿಯ ಒಡೆಯರಹಳ್ಳಿ ಗೇಟ್ ಬಳಿ ಬೆಳಗ್ಗೆ 10.30ರ ಸುಮಾರಿಗೆ ಈ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ.
ಘಟನೆ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ, ಪ್ರಕರಣ ಕುರಿತು ತನಿಖೆಗೆ ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ಕು ತನಿಖಾ ತಂಡಗಳನ್ನೂ ರಚಿಸಲಾಗಿದೆ.ಅನುಮಾನಾಸ್ಪದ ಪ್ಯಾಕೆಟ್ನಲ್ಲಿ ಪತ್ತೆ:ನೈಸ್ ರಸ್ತೆ ಜಂಕ್ಷನ್ನಿಂದ ಸುಮಾರು ಒಂದು ಕಿಲೋಮೀಟರ್ ಹಾಗೂ ರಸ್ತೆಯಿಂದ ಸುಮಾರು 50 ಮೀಟರ್ ದೂರದಲ್ಲಿರುವ ಕಾಂಪೌಂಡ್ ಬಳಿ ಅನುಮಾನಾಸ್ಪದ ಪ್ಯಾಕೆಟ್ ಒಂದನ್ನು ಕರ್ತವ್ಯ ನಿರತ ಕಾನ್ಸ್ಟೆಬಲ್ ಗಮನಿಸಿದ್ದಾರೆ. ಅದನ್ನು ಪರಿಶೀಲಿಸಿದಾಗ ಅದರಲ್ಲಿ ಎರಡು ಜಿಲೆಟಿನ್ ಕಡ್ಡಿಗಳು ಕಂಡುಬಂದಿದೆ. ತಕ್ಷಣ ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆ್ಯಂಟಿ ಸಬೊಟೇಜ್ ಚೆಕ್ (ಎಎಸ್ಸಿ) ತಂಡ, ಬಾಂಬ್ ನಿಷ್ಕ್ರಿಯ ದಳ, ಎಫ್ಎಸ್ಎಲ್ ತಂಡ ಸ್ಥಳಕ್ಕೆ ದೌಡಾಯಿಸಿ ತೀವ್ರ ತಪಾಸಣೆ ನಡೆಸಿ ಜಿಲೆಟಿನ್ ಕಡ್ಡಿಗಳನ್ನು ತೆರವುಗೊಳಿಸಿದರು. ಯಾವುದೇ ಅಪಾಯವಿಲ್ಲ ಎಂದು ಖಚಿತವಾದ ನಂತರ ಪ್ರಧಾನಿಗಳು ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಘಟನೆ ಸಂಬಂಧ ಬೆಂಗಳೂರು ನಗರ ಪೊಲೀಸರು ಮತ್ತು ರಾಮನಗರ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.
ಹೈ ಅಲರ್ಟ್:ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದ ನಂತರ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ನ ಧ್ಯಾನಮಂದಿರ ಉದ್ಘಾಟನೆಗೆ ಪ್ರಧಾನಿ ತೆರಳಬೇಕಿತ್ತು. ಆದರೆ ಅದಕ್ಕೂ ಮುನ್ನ ಜಿಲೆಟಿನ್ ಕಡ್ಡಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದರು. ಎಚ್ಎಎಲ್ ಏರ್ಪೋರ್ಟ್ನಿಂದ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ವರೆಗೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಯಾವುದೇ ಅನಾಹುತ ಸಂಭವಿಸದ ಹಿನ್ನೆಲೆಯಲ್ಲಿ ಪೊಲೀಸರು ನಿಟ್ಟುಸಿರು ಬಿಟ್ಟರು.ಪ್ರಧಾನಿ ಸಾಗುವ ದಾರಿ ಉದ್ದಕ್ಕೂ 7 ಹಂತದ ಭದ್ರತೆ ಕಲ್ಪಿಸಲಾಗಿರುತ್ತದೆ. ಅಲ್ಲದೆ ಒಂದು ವಾರ ಮುಂಚಿತವಾಗಿ ತೀವ್ರ ಪರಿಶೀಲನೆ ನಡೆಸುತ್ತಾರೆ. ಇದರ ನಡುವೆಯೂ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವುದು ಪೊಲೀಸರ ತಲೆ ಬಿಸಿ ಹೆಚ್ಚಿಸಿತ್ತು.
ಅಪರಿಚಿತನ ಕರೆಯಿಂದ ಎಚ್ಚೆತ್ತ ಪೊಲೀಸರುಬೆಳಗ್ಗೆ 8 ಗಂಟೆ ಸುಮಾರಿಗೆ ತುರ್ತು ಸಹಾಯವಾಣಿ 112ಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಆರ್ಟ್ ಆಫ್ ಲಿವಿಂಗ್ ಬಳಿ ಸ್ಫೋಟ ನಡೆಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಇದರಿಂದ ತಕ್ಷಣ ಅಲರ್ಟ್ ಆದ ಬೆಂಗಳೂರು ಮತ್ತು ರಾಮನಗರ ಪೊಲೀಸರು ತಪಾಸಣೆ ಚುರುಕುಗೊಳಿಸಿದ್ದರು. ಬೆಂಗಳೂರು ಪೊಲೀಸರು ತಕ್ಷಣ ಎಚ್ಎಎಲ್ ಬಳಿ ತೀವ್ರ ಶೋಧ ನಡೆಸಿದ್ದಾರೆ. ಈ ಮಧ್ಯೆ, ರಾಮನಗರ ಪೊಲೀಸರು ಆರ್ಟ್ ಆಫ್ ಲಿವಿಂಗ್ ಸುತ್ತಮುತ್ತ ತೀವ್ರ ತಪಾಸಣೆ ನಡೆಸಿದಾಗ ಆಶ್ರಮದ ಹೊರಗಿನ ರಸ್ತೆಯ 50 ಮೀಟರ್ ದೂರದಲ್ಲಿ ಕಸದ ಬಳಿ 5 ಇಂಚಿನ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದೆ.
ಬಾಕ್ಸ್-ಬೆದರಿಕೆ ಹಾಕಿದವನನ್ನುವಶಕ್ಕೆ ಪಡೆದು ವಿಚಾರಣೆ
ಸ್ಫೋಟದ ಬೆದರಿಕೆ ಕರೆ ಮಾಡಿದ್ದ ಶಂಕೆ ಮೇರೆಗೆ ಕೋರಮಂಗಲ ಠಾಣೆ ಪೊಲೀಸರು ಲೋಹಿತ್ (40) ಎಂಬಾತನನ್ನು ಕೋರಮಂಗಲದ ಕೆಎಚ್ಬಿ ಕಾಲೊನಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಈತನನ್ನು ರಹಸ್ಯ ಸ್ಥಳದಲ್ಲಿರಿಸಿ ಆಗ್ನೇಯ ವಿಭಾಗದ ಡಿಸಿಪಿ ಮೊಹಮ್ಮದ್ ಸುಜಿತಾ ಅವರು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಈತ ಹಿಂದೆಯೂ ಗಣ್ಯರು ನಗರಕ್ಕೆ ಬಂದಾಗಲೆಲ್ಲ ಇದೇ ರೀತಿ ಹುಸಿ ಬಾಂಬ್ ಕರೆ ಮಾಡುತ್ತಿದ್ದ ವಿಷಯ ಬಯಲಾಗಿದೆ. ಹಿಂದೆ ಈತನನ್ನು ವಶಕ್ಕೆ ಪಡೆದಿದ್ದಾಗ ಮಾನಸಿಕ ಸ್ಥಿತಿ ಸರಿಯಿಲ್ಲ ಎಂಬ ಕಾರಣಕ್ಕೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿಕೊಡಲಾಗಿತ್ತು. ಲೋಹಿತ್ ಪದವೀಧರನಾಗಿದ್ದು, ಈತನ ತಂದೆ-ತಾಯಿ ಸರ್ಕಾರಿ ನೌಕರಿಯಲ್ಲಿದ್ದಾರೆ. ಕೌಟುಂಬಿಕ ವಿಚಾರದಿಂದಾಗಿ ಖಿನ್ನತೆಗೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.ತನಿಖೆಗಾಗಿ ನಾಲ್ಕು ತಂಡ ರಚನೆ ಜಿಲೆಟಿನ್ ಕಡ್ಡಿ ಪತ್ತೆ ಪ್ರಕರಣದ ತನಿಖೆಗಾಗಿ ಡಿವೈಎಸ್ಪಿ ನೇತೃತ್ವದಲ್ಲಿ 50 ಪೊಲೀಸರನ್ನೊಳಗೊಂಡ ನಾಲ್ಕು ತಂಡಗಳನ್ನು ರಚಿಸಿ ಬೆಂಗಳೂರು ದಕ್ಷಿಣ ಜಿಲ್ಲೆ ಎಸ್ಪಿ ಶ್ರೀನಿವಾಸ್ ಗೌಡ ಆದೇಶಿಸಿದ್ದಾರೆ. ಜಿಲೆಟಿನ್ ಕಡ್ಡಿ ಹೇಗೆ ಬಂತು? ಯಾರು ತಂದು ಹಾಕಿದ್ದಾರೆ? ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಪತ್ತೆಯಾದ ಜಿಲೆಟಿನ್ ಕಡ್ಡಿಗಳು ಕಲ್ಲು ಕ್ವಾರಿ ಸ್ಫೋಟಿಸಲು ಬಳಸುವಂಥ ಸ್ಫೋಟಕ ಎಂಬ ಅನುಮಾನದ ಮೇರೆಗೆ ತಾತಗುಣಿ ಸುತ್ತಮುತ್ತಲಿನ ಕಾರ್ಮಿಕರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ತಾತಗುಣಿ ಸಮೀಪದ ಆಶ್ರಮದ ಹೊರಗಡೆ ಎರಡು ಜಿಲೆಟಿನ್ ಕಡ್ಡಿಗಳು ಸಿಕ್ಕಿದೆ. ಭಾನುವಾರ ಬೆಳಗ್ಗೆ ಕೋರಮಂಗಲ ಪೊಲೀಸರಿಗೆ ವ್ಯಕ್ತಿ ಓರ್ವ ಬೆದರಿಕೆ ಕರೆ ಮಾಡಿದ್ದ. ಆತನಿಗೂ ಈ ಜಿಲೆಟಿನ್ ಕಡ್ಡಿಗೂ ಸಂಬಂಧ ಇದೆಯೇ, ಇಲ್ವೇ ಅಂತ ತನಿಖೆ ಮಾಡಲಾಗುತ್ತಿದೆ. ಜೆಲೆಟಿನ್ ಕಡ್ಡಿಗಳು ಯಾರು ಇಟ್ಟಿದ್ದಾರೆ ಎಂಬುದು ಪತ್ತೆಯಾಗಿಲ್ಲ. ಅವರಿಗಾಗಿ ಹುಡುಕಾಟ ನಡೆಸಲಾಗಿದೆ.-ಗಿರೀಶ್, ಕೇಂದ್ರ ವಲಯ ಡಿಐಜಿ
ಪ್ರಧಾನಿಗಳು ಬರುವ ಎರಡು ಗಂಟೆ ಮುಂಚಿತವಾಗಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಆಗಿಲ್ಲ. ಕಂಟ್ರೋಲ್ ರೂಂಗೆ ಬಂದಿರುವ ಕರೆಗೂ, ಈ ಘಟನೆಗೂ ಮೇಲ್ನೋಟಕ್ಕೆ ಸಂಬಂಧವಿಲ್ಲ ಅಂತ ಗೊತ್ತಾಗಿದೆ. ನಮ್ಮ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿ ಇನ್ನೂ ಯಾರು ಪತ್ತೆಯಾಗಿಲ್ಲ. ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ವಿಶೇಷ ತಂಡ ರಚನೆ ಮಾಡಿ ತನಿಖೆ ಕೂಡ ನಡೆಸುತ್ತಿದ್ದೇವೆ.-ಶ್ರೀನಿವಾಸ್ ಗೌಡ, ಬೆಂಗಳೂರು ದಕ್ಷಿಣ ಜಿಲ್ಲೆ ಎಸ್ಪಿ
