ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮತಗಳ್ಳತನದ ದರೋಡೆಯ ಮೂಲಕ ಬಿಜೆಪಿ ಪಕ್ಷವು ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನೆ ಬುಡಮೇಲು ಮಾಡುತ್ತಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮಯೂರ್ ಜಯ್ ಕುಮಾರ್ ಆರೋಪಿಸಿದರು.ಕಾಂಗ್ರೆಸ್ ಪಕ್ಷವು ಆರಂಭಿಸಿರುವ ‘ವೋಟ್ ಚೋರ್ ಗದ್ದಿ ಚೋಡ್’ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ ಶನಿವಾರ ನಗರದ ಆರ್.ಎಂ.ಎಲ್. ನಗರ ಟೆಂಪೋ ಸ್ಟ್ಯಾಂಡ್ ಹತ್ತಿರ ಜಿಲ್ಲಾ ಕಾಂಗ್ರೆಸ್ ಸಮಿತಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಹಾಗೂ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,
ಕೇಂದ್ರ ಚುನಾವಣಾ ಆಯೋಗ ಬಿಜೆಪಿ ಪರವಾಗಿದೆ. ಆ ಕಾರಣದಿಂದಲೇ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಚ್ಚು ಸ್ಥಾನ ಪಡೆಲಾಯಿತಲ್ಲದೆ, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಸಾಧ್ಯವಾಯಿತು ಎಂದು ದೂರಿದ ಅವರು, ಇದರ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಜನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.ಕರ್ನಾಟಕದ ಮಹಾದೇವಪುರ ಕ್ಷೇತ್ರವೊಂದರಲ್ಲೇ 1.6 ಲಕ್ಷ ಮತಗಳ್ಳತನವಾಗಿದೆ. ಕೇಂದ್ರ ಚುನಾವಣಾ ಅಯೋಗ ಬಿಜೆಪಿ ಕೈಗೊಂಬೆಯಾಗಿದೆ. ನಮ್ಮ ನಾಯಕ ರಾಹುಲ್ ಗಾಂಧಿ ಅವರು ಆರು ತಿಂಗಳ ಕಾಲ ಶ್ರಮಪಟ್ಟು, ಈ ವೋಟ್ ಚೋರಿಯನ್ನು ಸಾಕ್ಷಿ ಸಮೇತ ಬಯಲಿಗೆಳೆದಿದ್ದಾರೆ. 10x10 ಮನೆಯಲ್ಲಿ 84 ಮತಗಳು ನೋಂದಣಿಯಾಗಿದೆ. ಆ ಮನೆ ಬಿಜೆಪಿ ನಾಯಕರಿಗೆ ಸೇರಿದ್ದು, ಇನ್ನು ಅದೇ ಕ್ಷೇತ್ರದಲ್ಲಿ ನಾಲ್ಕುಸಾವಿರ ಮತದಾರರಿಗೆ ಅಡ್ರೆಸ್ ಮತ್ತು ಗುರುತಿನ ಪತ್ರ ಇರಲಿಲ್ಲ. ಒಟ್ಟಾರೆಯಾಗಿ ಕೇಂದ್ರ ಚುನಾವಣಾ ಆಯೋಗದ ನೆರವಿನೊಂದಿಗೆ ಬಿಜೆಪಿ ಮೋಸದ ಚುನಾವಣೆ ನಡೆಸಿದೆ ಎಂದು ದೂರಿದರು.
ಕಾಂಗ್ರೆಸ್ ಮತಬ್ಯಾಂಕ್ ಇರುವ ಏರಿಯಾಗಳಲ್ಲಿ ಅವರ ಮತಗಳನ್ನು ಬೇರೆ ಬಡಾವಣೆಗೆ ವರ್ಗಾವಣೆ ಮಾಡಲಾಗಿದೆ. ಆ ಜಾಗಕ್ಕೆ ಬಿಜೆಪಿ ಮತದಾರರನ್ನು ಸೇರಿಸಲಾಗಿದೆ. ಲೋಪದೋಷಗಳ ಬಗ್ಗೆ ಆರು ತಿಂಗಳೊಳಗೆ ದೂರು ನೀಡಬೇಕು ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಆರು ತಿಂಗಳೊಳಗೆ ಡಿಜಿಟಲ್ ಕಾಫಿ ಹಾಗೂ ಫಾರ್ಮ್ ನಂಬರ್ 17 ಸಿ ಪ್ರತಿ ಬೂತ್ ಅಧಿಕಾರಿಗಳ ಬಳಿಯಲ್ಲಿದ್ದು, ಅದನ್ನುಕೇಳಿದರೆ ಅದು ಡಿಲಿಟ್ ಆಗಿದೆ ಎಂದು ಹೇಳಲಾಗುತ್ತಿದೆ ಎಂದು ಚುನಾವಣಾ ಆಯೋಗದ ವಿರುದ್ದ ಕಿಡಿಕಾರಿದರು.ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 7 ಲಕ್ಷ ಸಹಿ ಸಂಗ್ರಹದಗುರಿ ಕೊಟ್ಟಿದ್ದಾರೆ. ಅದನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಬೀದಿಬೀದಿಗೂ ಹೋಗಿ ಮತಗಳ್ಳತನ ಮಾಡಿದ ಕೇಂದ್ರ ಸರ್ಕಾರದ ವಿರುದ್ದ ಪ್ರಚಾರ ಮಾಡಲಾಗುವುದು, ಮತಗಳ್ಳತನದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾಬಂಡಿ ಮಾತನಾಡಿ, ಬಿಜೆಪಿ ಮೋಸದ ಜಾಲವನ್ನು ಬಹಿರಂಗಪಡಿಸಬೇಕು, ನಿರೀಕ್ಷೆಗೂ ಮೀರಿ ಚುನಾವಣಾ ಆಯೋಗ ಬಿಜೆಪಿ ಸರ್ಕಾರದೊಂದಿಗೆ ಶಾಮೀಲಾಗಿದೆ. ಬಿಜೆಪಿ ವೋಟ್ ಚೋರಿಯನ್ನು ಮನೆಮನೆಗಳಲ್ಲೂ ಪ್ರಚಾರ ಮಾಡಬೇಕಿದೆ. ಅಂಬೇಡ್ಕರ್ ಅವರು ನೀಡಿದ ಸಮಾನತೆ ಸಂವಿಧಾನವನ್ನು ಉಳಿಸಬೇಕಿದೆ ಎಂದರು.ಈ ಸಂದರ್ಭದಲ್ಲಿ ವಿಪ ಸದಸ್ಯ ಬಲ್ಕೀಶ್ಬಾನು, ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಅಲೆಮಾರಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ರಮೇಶ್ ಶಂಕರಘಟ್ಟ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಿಂಪಾಷಾ, ಪ್ರಮುಖರಾದ ಸಿ.ಎಸ್. ಚಂದ್ರಭೂಪಾಲ್, ಎನ್. ರಮೇಶ್, ಎಚ್.ಸಿ. ಯೋಗೀಶ್, ಶಿವುಕುಮಾರ್, ಕಲಗೋಡು ರತ್ನಾಕರ್, ಜಿ.ಡಿ ಮಂಜುನಾಥ್, ಶರತ್ ಮರಿಯಪ್ಪ, ಶ್ರೀನಿವಾಸ್ ಕರಿಯಣ್ಣ, ಎಸ್.ಟಿ. ಚಂದ್ರಶೇಖರ್ ಇತರರಿದ್ದರು.