ಸಮಯಕ್ಕೆ ಬಾರದ ಬಸ್‌, ನಿತ್ಯ ಕಾಯೋದೆ ನಮ್ಮ ಕೆಲ್ಸ !

KannadaprabhaNewsNetwork |  
Published : Jun 29, 2024, 12:34 AM IST
ಪೋಟೋ-20 ಜಿಎಲ್ಡಿ-1 -ಗುಳೇದಗುಡ್ಡದ ಬಸ್ ನಿಲ್ದಾಣದಲ್ಲಿ ವಿವಿಧ ಗ್ರಾಮಗಳಿಗೆ ತೆರಳಲು ಬಸ್ ಗಾಗಿ   ಕಾದು ನಿಂತ ವಿದ್ಯಾರ್ಥಿಗಳು. | Kannada Prabha

ಸಾರಾಂಶ

ಸಮಯಕ್ಕೆ ಸರಿಯಾಗಿ ಬಸ್‌ಗಳ ಬಾರದ ಕಾರಣ ನಿತ್ಯ ಶಾಲಾ-ಕಾಲೇಜು ಮುಗಿಸಿ ವಿವಿಧ ಗ್ರಾಮಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ ನಿಲ್ದಾಣದಲ್ಲಿ ನಿತ್ಯ ಗಂಟೆಗಟ್ಟಲೆ ಕಾದು ಸುಸ್ತಾಗುವಂತಾಗಿದೆ.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಸಮಯಕ್ಕೆ ಸರಿಯಾಗಿ ಬಸ್‌ಗಳ ಬಾರದ ಕಾರಣ ನಿತ್ಯ ಶಾಲಾ-ಕಾಲೇಜು ಮುಗಿಸಿ ವಿವಿಧ ಗ್ರಾಮಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ ನಿಲ್ದಾಣದಲ್ಲಿ ನಿತ್ಯ ಗಂಟೆಗಟ್ಟಲೆ ಕಾದು ಸುಸ್ತಾಗುವಂತಾಗಿದೆ.

ಹಲವು ಬಾರಿ ಮಧ್ಯಾಹ್ನ 2-30ಕ್ಕೆ ಬರುವ ಬಸ್ ಸಂಜೆ 5-10ಕ್ಕೆ ಬಂದಿದೆ. ಇದರಿಂದ ಪಟ್ಟದಕಲ್ಲ, ಲಾಯದಗುಂದಿ, ಚಿಮ್ಮಲಗಿ, ಸಬ್ಬಲಹುಣಸಿ, ಮಂಗಳಗುಡ್ಡ, ಕಾಟಾಪೂಟ, ಆಸಂಗಿ, ಕಟಗಿನಹಳ್ಳಿ, ಕೊಟ್ನಳ್ಳಿ, ನಾಗರಾಳ ಎಸ್.ಪಿ. ಹೀಗೆ ವಿವಿಧ ಗ್ರಾಮಗಳಿಗೆ ಹೋಗುವ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾದು ಕಾದು ಹೈರಾಣಾಗುವಂತಾಗಿದೆ.

ಪ್ರತಿದಿನ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಬಸ್ ಗಾಗಿ ಕಾಯುವ ಸ್ಥಿತಿ ಇದೆ. ಇದರಿಂದ ಶಾಲೆ, ಕಾಲೇಜು ಮುಗಿಸಿ ಬಸ್ ನಿಲ್ದಾಣದಲ್ಲಿ ಮಕ್ಕಳು, ವಿದ್ಯಾರ್ಥಿಗಳು, ಸಾರ್ವಜನಿಕರು ಸಾಕಷ್ಟು ಸಮಯ ಬಸ್‌ ಗಾಗಿ ಕಾದು ಸುಸ್ತಾಗುತ್ತಿದ್ದಾರೆ. ಘಟಕಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಶಾಲಾ, ಕಾಲೇಜು ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬೆಳಗ್ಗೆಯಿಂದ ಶಾಲೆ, ಕಾಲೇಜು ಮುಗಿಸಿ ಬೇಗ ಮನೆಗೆ ಹೋಗಬೇಕೆನ್ನುವ ಆತುರದಲ್ಲಿ ವಿದ್ಯಾರ್ಥಿಗಳು ಬಸ್ ನಿಲ್ದಾಣಕ್ಕೆ ಬಂದರೆ ಸಮಯಕ್ಕೆ ಸರಿಯಾಗಿ ಬಸ್ ಬಿಡುವುದಿಲ್ಲ. ಕಳೆದ 3-4 ತಿಂಗಳಿಂದ ಗುಳೇದಗುಡ್ಡದಿಂದ ವಿವಿಧ ಗ್ರಾಮಗಳಿಗೆ ತೆರಳುವ ಬೇರೆ ಬೇರೆ ಬಸ್ ಗಳು ವೇಳೆಗೆ ಸರಿಯಾಗಿ ಬರುತ್ತಿಲ್ಲ. ಅಧಿಕಾರಿಗಳು ಕೂಡ ವಿದ್ಯಾರ್ಥಿಗಳ ಗೋಳಾಟಕ್ಕೆ ಸ್ಪಂದಿಸುತ್ತಿಲ್ಲ ಎನ್ನುವ ಆರೋಪ ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಂದ ಕೇಳಿರುತ್ತಿದೆ.

---------------

ಗುಳೇದಗುಡ್ಡ ಬಸ್ ನಿಲ್ದಾಣದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಗಳು ಬರುತ್ತಿಲ್ಲ. ಮನೆಯಲ್ಲಿ ಪಾಲಕರು ನಮಗಾಗಿ ಕಾಯುತ್ತಾರೆ. ಪ್ರತಿದಿನ ಬಸ್ ಬಂದಿಲ್ಲವೆಂದು ಹೇಳಿದರೆ ಮನೆಯಲ್ಲಿ ಬೈಯುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ಪ್ರಶ್ನಿಸಿದರೆ ಒಂದಿಲ್ಲೊಂದು ಕಾರಣ ನೆಪ ಹೇಳುತ್ತಾರೆ. ಬಸ್ ಕೆಟ್ಟಿದೆ. ಇದರಿಂದ ನಮಗೆ ಶಾಲೆ ಕಲಿಯಲು ಗುಳೇದಗುಡ್ಡಕ್ಕೆ ಬರಬೇಕೆನ್ನುವುದೇ ಸಾಕು ಸಾಕಾಗಿದೆ.-ಬಸ್ ಗಾಗಿ ಕಾದು ಕುಳಿತ ವಿದ್ಯಾರ್ಥಿಗಳು.

---

ಬಸ್ ನಿಲ್ದಾಣದಲ್ಲಿ ಇದು ಒಂದು ದಿನದ ಸಮಸ್ಯೆ ಅಲ್ಲ. ಬಸ್ ಘಟಕದ ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಸಾಕಷ್ಟು ಬಾರಿ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಣಮೌನ ವಹಿಸಿದ್ದಾರೆ. ಈ ಬಸ್ ಸಮಸ್ಯೆ ಪರಿಹಾರವಾಗದಿದ್ದರೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಬೇಕಾಗುತ್ತದೆ.

-ಹೊಳಬಸಪ್ಪ ಹಾಳಕೇರಿ, ಅಧ್ಯಕ್ಷ, ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ, ನಾಗರಾಳ ಎಸ್.ಪಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!