ಕನ್ನಡಪ್ರಭ ವಾರ್ತೆ ಬೆಂಗಳೂರು
ಆಂಧ್ರಪ್ರದೇಶ ರಾಜ್ಯದ ವಿಶಾಖಪಟ್ಟಣದ ಕಠಿ ಸತ್ತಿಬಾಬು ಅಲಿಯಾಸ್ ಸ್ಪೈಡರ್, ಆತನ ಸಹಚರರಾದ ಕಡಪ ಜಿಲ್ಲೆಯ ಪತುಕೂರಿ ಸುನೀಲ್ ಕುಮಾರ್, ನುನ್ ಸಾವತ್ ನರೇಂದ್ರ ಹಾಗೂ ರಾಮಾವತ್ ರಾಕೇಶ್ ನಾಯ್ಕ್ ಬಂಧಿತರಾಗಿದ್ದು, ಆರೋಪಿಗಳಿಂದ 584 ಗ್ರಾಂ ಚಿನ್ನಾಭರಣ, 1 ಕಾರು, 1 ವಾಚ್ ಹಾಗೂ 9.85 ಲಕ್ಷ ರು.ನಗದು ಸೇರಿ ಒಟ್ಟು 1.16 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿ ಕಿರಣ್ ಮನೆಯಲ್ಲಿ ಕಳ್ಳತನವಾಗಿತ್ತು. ಈ ಕೃತ್ಯದ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಅಂತರ್ ರಾಜ್ಯ ಕಳ್ಳರ ತಂಡವನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.ಜೇಡನ ವಿರುದ್ಧ ವಿವಿಧೆಡೆ
ವಿಶಾಖಪಟ್ಟಣದ ಸತ್ತಿಬಾಬು ಅಲಿಯಾಸ್ ಸ್ಪೈಡರ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಕೇರಳಂ ಹಾಗೂ ಆಂಧ್ರಪ್ರದೇಶದ ಸೇರಿದಂತೆ ದಕ್ಷಿಣ ಭಾರತದಲ್ಲಿ ಸುಮಾರು 72ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಅದೇ ರೀತಿ ಮತ್ತೊಬ್ಬ ಆರೋಪಿ ನರೇಂದ್ರ ವಿರುದ್ಧ ಸಹ ವಿವಿಧ ರಾಜ್ಯಗಳಲ್ಲಿ 18 ಪ್ರಕರಣಗಳಿವೆ. ಈ ಇಬ್ಬರು ಮನೆಗಳ್ಳತನ ಕೃತ್ಯಗಳಿಗೆ ಕುಖ್ಯಾತರಾಗಿದ್ದು, ಮೊದಲು ಕಾರು ಚಾಲಕನಾಗಿದ್ದರು. ತರುವಾಯ ಹಣದಾಸೆಗೆ ಬಿದ್ದು ಕಳ್ಳ ಮಾರ್ಗ ತುಳಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಗಲು ಹೊತ್ತಿನಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಜೇಡರ ತಂಡ ಕನ್ನ ಹಾಕುತ್ತಿತ್ತು. ಅಂತೆಯೇ ಕಳೆದ ಮಾರ್ಚ್ನಲ್ಲಿ ವೈಟ್ಫೀಲ್ಡ್ ನಿವಾಸಿ ಉದ್ಯಮಿ ಕಿರಣ್ ಕುಮಾರ್ ಮನೆಯ ಬೀಗ ಮುರಿದು ಆರೋಪಿಗಳು ಚಿನ್ನಾಭರಣ ದೋಚಿದ್ದರು.
ತಾನು ಕೆಲಸ ಮಾಡುತ್ತಿದ್ದ ಪ್ರತಿಷ್ಠಿತ ಚಿನ್ನಾಭರಣ ಅಂಗಡಿಯಲ್ಲಿ ಕಳವು ಮಾಡಿದ್ದ ನೌಕರನೊಬ್ಬನ್ನು ವೈಟ್ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುಲ್ತಾನ್ ನಗರದ ನಿವಾಸಿ ತೌಹಿದ್ ಖಾನ್ ಬಂಧಿತನಾಗಿದ್ದು, ಕೆಲ ದಿನಗಳ ವೈಟ್ಫೀಲ್ಡ್ ಸಮೀಪದ ತನಿಷ್ಕಾ ಚಿನ್ನಾಭರಣ ಅಂಗಡಿಯಲ್ಲಿ ಖಾನ್ ಕಳವು ಮಾಡಿದ್ದ. 3 ವರ್ಷಗಳಿಂದ ಆಭರಣ ಮಳಿಗೆಯಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ. ಇನ್ನು ಹಣದಾಸೆ ತೋರಿಸಿ ತನ್ನ ಕೃತ್ಯಕ್ಕೆ ಸ್ನೇಹಿತರರನ್ನು ಬಾಬು ಸೇರಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.