ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶ ಪುನರ್ ಪರಿಶೀಲನೆ ಆಗಲಿ

KannadaprabhaNewsNetwork |  
Published : Jul 30, 2026, 01:15 AM IST
9 | Kannada Prabha

ಸಾರಾಂಶ

ನೀರು ನಿರ್ವಹಣಾ ಮಂಡಳಿ ಮುಂದೆ ರಾಜ್ಯದ ನೀರಾವರಿ ಸಚಿವರು ರಾಮಲಿಂಗರೆಡ್ಡಿ ಕಾವೇರಿ ಅಚ್ಚುಕಟ್ಟು ಭಾಗದ ಸಮಸ್ಯೆ ಕುರಿತು ವಾಸ್ತವ ಸಂಗತಿ ಮಂಡಿಸಿಲ್ಲ. ಇವರ ನಿರ್ಲಕ್ಷತನ ನೀರು ಬಿಡುವಂತೆ ಆದೇಶ ಬರಲು ಕಾರಣವಾಯಿತು. ಕೂಡಲೇ ಕಾವೇರಿ ಪ್ರಾಧಿಕಾರದ ಮುಂದೆ ಪುನರ್ ಪರಿಶೀಲನ ಅರ್ಜಿ ಸಲ್ಲಿಸಲಿ. ಯಾವುದೇ ಕಾರಣಕ್ಕೂ ನೀರು ಬಿಡಬಾರದು.

ಕನ್ನಡಪ್ರಭ ವಾರ್ತೆ ಮೈಸೂರು

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು 15 ದಿನಗಳ ಕಾಲ 3500 ಕ್ಯುಸೆಕ್‌ ನೀರನ್ನು ತಮಿಳುನಾಡಿಗೆ ತಕ್ಷಣವೇ ಬಿಡುಗಡೆಗೊಳಿಸುವಂತೆ ನೀಡಿರುವ ಆದೇಶ ಧಿಕ್ಕರಿಸಬೇಕು. ರಾಜ್ಯ ಸರ್ಕಾರ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಲಿ ಎಂದು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರ ಸಂಘದ ಪದಾಧಿಕಾರಿಗಳು ಮೈಸೂರು- ಊಟಿ ಹೆದ್ದಾರಿ ತಡೆ ಚಳುವಳಿ ನಡೆಸಿದರು.

ಬಿಡಬೇಡಿ ಬಿಡಬೇಡಿ ನೀರು ಬಿಡಬೇಡಿ, ಏತಕ್ಕಾಗಿ ಹೋರಾಟ ನೀರಿಗಾಗಿ ಹೋರಾಟ, ಕಾವೇರಿ ನಮ್ಮ ತಾಯಿ ಕಾವೇರಿ ಉಳಿಸಿ ಎನ್ನುವ ಘೋಷಣೆ ಕೂಗುತ್ತಾ ರಸ್ತೆ ತಡೆ ನಡೆಸಲು ಯತ್ನಿಸಿದಾಗ ಪೊಲೀಸರು ಅಡ್ಡಿಪಡಿಸಲು ಮುಂದಾದಾಗ ಪೊಲೀಸರನ್ನು ಲೆಕ್ಕಿಸದೆ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಖಾಲಿ ಬಿಂದಿಗೆ ಹಿಡಿದು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ, ರಸ್ತೆ ತಡೆ ನಡೆಸಿದರು. ನೂರಾರು ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತವು.

ಚಳವಳಿ ನೇತೃತ್ವವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ನೀರು ನಿರ್ವಹಣಾ ಮಂಡಳಿ ಮುಂದೆ ರಾಜ್ಯದ ನೀರಾವರಿ ಸಚಿವರು ರಾಮಲಿಂಗರೆಡ್ಡಿ ಕಾವೇರಿ ಅಚ್ಚುಕಟ್ಟು ಭಾಗದ ಸಮಸ್ಯೆ ಕುರಿತು ವಾಸ್ತವ ಸಂಗತಿ ಮಂಡಿಸಿಲ್ಲ. ಇವರ ನಿರ್ಲಕ್ಷತನ ನೀರು ಬಿಡುವಂತೆ ಆದೇಶ ಬರಲು ಕಾರಣವಾಯಿತು. ಕೂಡಲೇ ಕಾವೇರಿ ಪ್ರಾಧಿಕಾರದ ಮುಂದೆ ಪುನರ್ ಪರಿಶೀಲನ ಅರ್ಜಿ ಸಲ್ಲಿಸಲಿ. ಯಾವುದೇ ಕಾರಣಕ್ಕೂ ನೀರು ಬಿಡಬಾರದು ನೀರು ಹರಿಸಿದರೆ ಕಾವೇರಿಕೊಳ್ಳದ ರೈತರು ಸಂಘ ಸಂಸ್ಥೆಗಳು ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಎಂ.ಬಿ.ಪಾಟೀಲ್ ನಂತಹ ಕೆಲವು ಸಚಿವರು ನೀರು ಬಿಡಬೇಕಾಗುತ್ತದೆ ಎಂದು ಲಘುವಾಗಿ ಹೇಳುತ್ತಿದ್ದಾರೆ. ಕಾವೇರಿ ವಿಚಾರದಲ್ಲಿ ಗಂಭೀರವಾಗಿ ವರ್ತಿಸಬೇಕು ಎಂದು ಆಗ್ರಹಿಸಿದರು.

ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಾದ ಕೆ.ಆರ್‌.ಎಸ್‌, ಕಬಿನಿ, ಹಾರಂಗಿ ಮತ್ತು ಹೇಮಾವತಿಗಳಲ್ಲಿ ಪ್ರಸ್ತುತ ಇರುವ ನೀರು ನಮ್ಮ ರಾಜ್ಯದ ಕುಡಿಯುವ ನೀರಿನ ಅಗತ್ಯತೆಗೆ ಬೆಳೆದು ನಿಂತ ರೈತರ ಬೆಳೆಗಳ ರಕ್ಷಣೆಗೆ ಮಾತ್ರ ಇದೆ. ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಕಾವೇರಿ ನೀರನ್ನೇ ನೆಚ್ಚಿಕೊಂಡಿರುವ ನಗರಗಳು ಮತ್ತು ಗ್ರಾಮಗಳ ಕುಡಿಯುವ ನೀರಿನ ಅಭಾವವನ್ನು ನೀಗಿಸುವುದು ಕಷ್ಟ ಸಾಧ್ಯ ಎಂದರು.

ಆಗಸ್ಟ್ ತಿಂಗಳಲ್ಲೂ ಮಳೆ ಕಡಿಮೆ ಬರುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಕುಡಿಯುವ ನೀರು ಮತ್ತು ರೈತರ ಬೆಳೆದ ಬೆಳೆಗಳ ಹಿತಾಸಕ್ತಿಯನ್ನು ಬಲಿ ಕೊಟ್ಟು ನೀರು ಹರಿಸಲು ಸಾಧ್ಯವಿಲ್ಲ ಎಂದರು.

ಪ್ರತಿಭಟನೆಯಲ್ಲಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮಾರ್ಬಳ್ಳಿ ನೀಲಕಂಠಪ್ಪ, ವರಕೋಡು ನಾಗೇಶ್, ಲಕ್ಷ್ಮೀಪುರ ವೆಂಕಟೇಶ್, ಕೆ.ಜಿ. ಗುರುಸ್ವಾಮಿ, ಕುರುಬೂರು ಸಿದ್ದೇಶ್, ಪಿ. ಪರಶಿವಮೂರ್ತಿ, ಕಾಟೂರು ನಾಗೇಶ್, ಅಂಬಳೆ ಮಂಜುನಾಥ್, ವಾಜಮಂಗಲ ಮಹಾದೇವ, ಜಯರಾಮು, ಶಿವಣ್ಣ, ಮಹೇಶ್, ಮಿಲಿಟರಿ ಕುಮಾರ್, ನಂಜುಂಡಸ್ವಾಮಿ, ರಂಗರಾಜು, ಪ್ರಭಾಕರ್, ಉಮೇಶ್, ಬಾಲು, ಸತೀಶ್, ಗಿರಿಯಣ್ಣ ಸೇರಿದಂತೆ 100ಕ್ಕೂ ಹೆಚ್ಚು ರೈತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತ್ಯ ಲೋಕಕ್ಕೆ ಹಡಪದ ಅಪ್ಪಣ್ಣ ಕೊಡುಗೆ ಅಪಾರ
ದೇಶದಲ್ಲೇ ಮೊದಲ ಬಾರಿ 138 ರೈತರಿಗೆ ಪ್ರಮಾಣಪತ್ರ