ಶೋಷಣೆಗೆ ಒಳಗಾದವರ ನೆರವಿಗೆ ಆಯೋಗ ಸದಾ ಇರುತ್ತದೆ: ಅಧ್ಯಕ್ಷ ಡಾ.ಎಲ್.ಮೂರ್ತಿ

KannadaprabhaNewsNetwork |  
Published : Oct 30, 2025, 01:30 AM IST
29ಕೆಎಂಎನ್ ಡಿ21 | Kannada Prabha

ಸಾರಾಂಶ

ತಿಂಗಳಿಗೆ ರಾಜ್ಯದ 3 ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನೆ ಮಾಡಲಾಗುವುದು. ಅದಾಲತ್ ಮಾದರಿಯಲ್ಲಿ ಸಣ್ಣ ಪುಟ್ಟ ವ್ಯಾಜ್ಯಗಳನ್ನು ಜಿಲ್ಲಾ ಹಂತದಲ್ಲಿಯೇ ಪರಿಹರಿಸಲು ಕ್ರಮ ವಹಿಸಲಾಗುವುದು. ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಾಗಿ ಕಂದಾಯ, ದೌರ್ಜನ್ಯ, ಖಾತೆ, ಪಾಣಿ, ಸ್ಮಶಾನದ ವಿಚಾರಗಳ ಕುರಿತಾಗಿ ಪ್ರಕರಣಗಳು ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶೋಷಣೆಗೆ ಒಳಗಾದವರು ಆಯೋಗಕ್ಕೆ ದೂರು ನೀಡಿ ಪ್ರಕರಣ ದಾಖಲಿಸಬಹುದು. ಆಯೋಗ ಸದಾ ನಿಮ್ಮೊಂದಿಗಿರುತ್ತದೆ ಎಂದು ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಅಯೋಗ ಅಧ್ಯಕ್ಷ ಡಾ.ಎಲ್. ಮೂರ್ತಿ ಹೇಳಿದರು.

ನಗರದ ಜಿಪಂ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 20 ದಿನಗಳ ಹಿಂದೆ ನಾನು ಆಯೋಗಕ್ಕೆ ನೂತನ ಅಧ್ಯಕ್ಷನಾಗಿ ನೇಮಕ ಕೊಂಡಿದ್ದೇನೆ. ಆಯೋಗದಲ್ಲಿ ಒಟ್ಟಾರೆ 1503 ಪ್ರಕರಣಗಳು ಹಾಗೂ 4943 ಪತ್ರ ವ್ಯವಹಾರದ ಕಡತಗಳು ಬಾಕಿ ಇವೆ. ಎಲ್ಲವನ್ನೂ ಶೀಘ್ರ ವಿಲೇವಾರಿ ಮಾಡಲು ಶ್ರಮಿಸುತ್ತೇನೆ ಎಂದರು.

ಆಯೋಗದ ಅಧ್ಯಕ್ಷನಾಗಿ ಮೊದಲು ಜಿಲ್ಲೆಯವನಾಗಿ ಮಂಡ್ಯದಲ್ಲಿ ಸಭೆ ನಡೆಸುತ್ತಿದ್ದೇನೆ. ಜಿಲ್ಲೆಯ ಸ್ಥಿತಿ-ಗತಿಗಳ ಕುರಿತು ಹತ್ತಿರದಿಂದ ನೋಡಿದ್ದೇನೆ. ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ವ್ಯಾಜ್ಯಗಳಲ್ಲಿ ಇತ್ಯಾರ್ಥ ಮಾಡಬಹುದಾದ ಪ್ರಕರಣಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾಡಿ ಸಮುದಾಯದ ಜನರ ಕಷ್ಟ ಕಾರ್ಪಣ್ಯ ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಿಂಗಳಿಗೆ ರಾಜ್ಯದ 3 ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನೆ ಮಾಡಲಾಗುವುದು. ಅದಾಲತ್ ಮಾದರಿಯಲ್ಲಿ ಸಣ್ಣ ಪುಟ್ಟ ವ್ಯಾಜ್ಯಗಳನ್ನು ಜಿಲ್ಲಾ ಹಂತದಲ್ಲಿಯೇ ಪರಿಹರಿಸಲು ಕ್ರಮ ವಹಿಸಲಾಗುವುದು. ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಾಗಿ ಕಂದಾಯ, ದೌರ್ಜನ್ಯ, ಖಾತೆ, ಪಾಣಿ, ಸ್ಮಶಾನದ ವಿಚಾರಗಳ ಕುರಿತಾಗಿ ಪ್ರಕರಣಗಳು ದಾಖಲಾಗಿವೆ ಎಂದರು.

ಮುಖ್ಯವಾಗಿ ಎಸ್‌ಇಪಿ/ಟಿ‌ಎಸ್‌ಪಿ ಹಣ ಸರಿಯಾಗಿ ಅರ್ಹ ಯೋಜನೆಗಳಿಗೆ ತಲುಪಬೇಕು. ಇನ್ನೊಂದು ತಿಂಗಳ ಒಳಗೆ ಜಿಲ್ಲೆಯ ದೊಡ್ಡದಾಗಿ ಕುಂದುಕೊರತೆ ಸಭೆ ಆಯೋಜನೆ ಮಾಡಿ ಎಲ್ಲರ ಅಹವಾಲು ಸ್ವೀಕರಿಸಲಾಗುವುದು. ಅಧಿಕಾರಿಗಳ ಎಸ್‌ಸಿ/ಎಸ್ ಟಿ ಸಮುದಾಯಗಳ ನಾಗರೀಕ ಹಕ್ಕುಗಳು, ಶಿಕ್ಷಣ ಹಾಗೂ ಅವರನ್ನು ಸಾಮಾಜಿಕವಾಗಿ ಸದೃಢ ಮಾಡಲು ಶ್ರಮ ವಹಿಸಿ ಪದವಿ, ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ದೊರಕಿಸಿ ಕೊಡುವ ದೃಷ್ಟಿಯಿಂದ ತರಬೇತಿ ನೀಡಿ ಎಂದರು.

ಪರಿಶಿಷ್ಟ ಜನಾಂಗದವರಿಗೆ ಸ್ಮಶಾನ ನೀಡುವಾಗ ಸರ್ವೇ ನಡೆಸಿ ಯಾವ ಗ್ರಾಮದಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರು ಹಾಗೂ ಸ್ವತಃ ಜಾಮೀನು ಇಲ್ಲದ ಪರಿಶಿಷ್ಟರಿಗೆ ಸ್ಮಶಾನ ಮಂಜೂರು ಮಾಡುವ ಮೂಲಕ ಅಧಿಕಾರಿಗಳು ಅಭಿವೃದ್ಧಿಗೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ವಸತಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯದ ( ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು ಒಟ್ಟು 102 ಇದೆ. ಅದರಲ್ಲಿ 85 ಸ್ವಂತ ಕಟ್ಟಡ 17 ಬಾಡಿಗೆ ಕಟ್ಟಡಗಳಿವೆ. 2025-26ನೇ ಸಾಲಿನಲ್ಲಿ 10958 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 1301 ಸ್ಮಶಾನಗಳು ಇದ್ದು, ಪ್ರತ್ಯೇಕವಾಗಿ 195 ಸ್ಮಶಾನಗಳು ಪರಿಶಿಷ್ಟ ಜಾತಿ ಜನಾಂಗದವರಿಗೆ ಸೇರಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಕಾಲೋನಿಗಳ ಮೂಲ ಸೌಕರ್ಯ ಒದಗಿಸಲು ಪ್ರಗತಿ ಕಾಲೋನಿ ಯೋಜನೆ ಇಡೀ 2023 ರಿಂದ ಸದರಿ ವರ್ಷದವರೆಗೂ 222 ಕಾಮಗಾರಿ ಗುರುತಿಸಲಾಗಿದೆ. ಅದರಲ್ಲಿ 97 ಕಾಮಗಾರಿಗಳು ಮುಕ್ತಾಯಗೊಂಡಿವೆ. 124 ಕಾಮಗಾರಿಗಳು ಪ್ರಗತಿ ಹಂತದಲ್ಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಈಗಾಗಲೇ ಜಿಲ್ಲೆಯ ಮಟ್ಟದಲ್ಲಿ ಪರಿಶಿಷ್ಟ ವರ್ಗಗಳಿಗೆ ಸಂಬಂಧಿಸಿದ 3 ಸಭೆ ಮಾಡಲಾಗಿದೆ. ಎಲ್ಲಾ ತಾಲೂಕುಗಳ ತಹಸೀಲ್ದಾರ್ ತಾಲೂಕು ಮಟ್ಟದಲ್ಲಿ ಕುಂದು ಕೊರತೆಗಳ ಸಭೆ ನಡೆಸಿ 2025ನೇ ಸಾಲಿನಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡದ ಮೇಲಿನ ದೌರ್ಜನ್ಯ ಒಟ್ಟು ಪ್ರಕರಣಗಳು 67 ಸಂತ್ರಸ್ತರಿಗೆ ಒಟ್ಟು ರು. 75,12,500 ಹಣವನ್ನು ಮಂಜೂರು ಮಾಡಲಾಗಿದೆ ಎಂದರು.

ಇದೇ ವೇಳೆ ನಂತರ ಸಂಘ ಸಂಸ್ಥೆಗಳಿಂದ ಅಹವಾಲು ಸ್ವೀಕರಿಸಿದರು. ಸಭೆ ಆರಂಭಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಉದ್ಯಾನವನದಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು.

ಸಭೆಯಲ್ಲಿ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಅಯೋಗ ಕಾರ್ಯದರ್ಶಿ ಶಿವರಾಂ, ರಾಜ್ಯ ಸಣ್ಣ ಕೈಗಾರಿಕೆಗಳ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು