- ಸಾರ್ವಜನಿಕರ ಕುಂದು ಕೊರತೆಗಳ ಅಹವಾಲು ಸ್ವೀಕಾರ ಹಾಗೂ ವಿಚಾರಣೆ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಮಾಜದಲ್ಲಿರುವ ಪ್ರತಿಯೊಬ್ಬರು ಗೌರವಯುತವಾಗಿ ಎಲ್ಲಾ ಸವಲತ್ತುಗಳನ್ನು ಹೊಂದಿ ಸಂತೋಷವಾಗಿ ಬಾಳುವುದೇ ಭಾರತ ಸಂವಿಧಾನದ ಆಶಯವಾಗಿದೆ ಎಂದು ನ್ಯಾಯಮೂರ್ತಿ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಬುಧವಾರ ನಡೆದ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲು ಸ್ವೀಕಾರ ಹಾಗೂ ವಿಚಾರಣೆ ಸಭೆ ಉದ್ಘಾಟಿಸಿ ಮಾತನಾಡಿ ಸರ್ಕಾರ ಮೂಲಭೂತ ಸವಲತ್ತುಗಳ ಜೊತೆಗೆ ಹಕ್ಕು ಬಾಧ್ಯತೆಯನ್ನು ನೀಡಿದೆ. ಹಕ್ಕುಗಳ ಬಗ್ಗೆ ಅರಿವು ಮೂಡಿಸಿ ಆ ಹಕ್ಕುಗಳಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಲು ಸರ್ಕಾರ ಶ್ರಮ ವಹಿಸಿ ಕಾನೂನುಗಳನ್ನು ರಚನೆ ಮಾಡಿದೆ ಎಂದು ಹೇಳಿದರು.ಸರ್ವರಿಗೂ ಸಮಪಾಲು, ಸಮಬಾಳು ಎಂಬ ಸಂವಿಧಾನದ ಆಶೋತ್ತರದ ಅಡಿಯಲ್ಲಿ ಲೋಕಾಯುಕ್ತ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರ ರೂಪಿಸಿದ ಯೋಜನೆಗಳು ಹಾಗೂ ಇತರೆ ಸೌಲಭ್ಯವನ್ನು ಎಲ್ಲರಿಗೂ ದೊರಕಿಸುವ ಕಾರ್ಯವನ್ನು ಲೋಕಾಯುಕ್ತ ಸಂಸ್ಥೆ ಮಾಡುತ್ತಿದೆ ಎಂದರು.
ಭಾರತ ಸಂವಿಧಾನದ ಮಹತ್ವ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಕಾರ್ಯ ಪ್ರಕ್ರಿಯೆಗಳನ್ನು ಮನ ಮುಟ್ಟುವಂತೆ ಸವಿಸ್ತಾರವಾಗಿ ತಿಳಿಸಿಕೊಟ್ಟ ಅವರು, ಲೋಕಾಯುಕ್ತ ಸಂಸ್ಥೆ ಸ್ಥಾಪನೆ ಉದ್ದೇಶ, ಹಿನ್ನೆಲೆ, ಕಾರ್ಯವ್ಯಾಪ್ತಿ ಹಾಗೂ ಸಂಸ್ಥೆಯ ಕಾರ್ಯಮಾರ್ಗಸೂಚಿ ಪ್ರಕ್ರಿಯೆಗಳ ಮಾಹಿತಿ ನೀಡಿದರು.ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಕಾರ್ಯನಡೆಗಳ ಬಗ್ಗೆ ಸರ್ಕಾರದ 4ನೇ ಅಂಗವಾದ ಮಾಧ್ಯಮ ರಂಗ ನಿರಂತರ ನಿಗಾವಹಿಸುತ್ತಿದೆ. ಯಾವುದೇ ಅಂಗಗಳಲ್ಲಿನ ಲೋಪದೋಷಗಳನ್ನು ಪ್ರಜೆಗಳ ಮುಂದಿಟ್ಟು ಸರಿಪಡಿಸುವಂತಹ ಮಹತ್ವದ ಜವಾಬ್ದಾರಿಯನ್ನು ಮಾಧ್ಯಮ ಕ್ಷೇತ್ರ ನಿರ್ವಹಿಸುವುದರಿಂದ ಈ ಕ್ಷೇತ್ರದ ಪಾತ್ರ ಮಹತ್ವದ್ದು, ಆದ್ದರಿಂದ ಲೋಕಾ ಯುಕ್ತ ಸಂಸ್ಥೆ ಕಾರ್ಯ ವಿಧಾನವನ್ನು ಸಮಾಜದ ಕಟ್ಟ ಕಡೆ ವ್ಯಕ್ತಿಗೂ ತಾವೆಲ್ಲರೂ ತಲುಪಿಸಲು ಸಂಸ್ಥೆಯೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಸಾರ್ವಜನಿಕರಿಗೆ ಲಿಖಿತವಾಗಿ ಅರ್ಜಿ ಸಲ್ಲಿಸುವ ವಿಧಾನ, ದಾಖಲೆ ಸಹಿತ ಅರ್ಜಿ ಸಲ್ಲಿಕೆ ಹಾಗೂ ಯಾವ ರೀತಿ ಅರ್ಜಿಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಬಹುದು. ಈ ಎಲ್ಲ ವಿಚಾರಗಳ ಬಗ್ಗೆ ವಿಸ್ತೃತವಾಗಿ ಸಾರ್ವಜನಿಕರಿಗೆ ತಿಳಿಸಿಕೊಟ್ಟ ಅವರು, ಸ್ವೀಕರಿಸಿದ ಕೆಲವು ದೂರು ಅರ್ಜಿಗಳ ಬಗ್ಗೆ ಸ್ಥಳದಲ್ಲೇ ತೀರ್ಮಾನ ಕೈಗೊಂಡು ಅದಕ್ಕೆ ಸ್ಥಳದಲ್ಲೆಯೇ ಪರಿಹಾರ ನೀಡ ಲಾಗುವುದು ಎಂದು ಹೇಳಿದರು.ಅಧಿಕಾರಿಗಳು ಜನ ಸಾಮನ್ಯರ ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ, ನಿಯಮಾವಳಿ, ಕಾನೂನಿನ ಪ್ರಕಾರವಾಗಿ, ಸಮಯೋಚಿತವಾಗಿ ಪರಿಹಾರ ಒದಗಿಸಿಬೇಕು. ಅದಲ್ಲದೇ ಅಧಿಕಾರ ದುರುಪಯೋಗ, ಭ್ರಷ್ಟಚಾರ ಇಂತಹ ಕಾರಣದಿಂದ ಅವರ ಮೇಲೆ ಅಸಡ್ಡೆ ತೋರಿಸಿದರೆ ಅಂತಹ ಅಧಿಕಾರಿ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು. ಸಾರ್ವಜನಿಕರು ಕಚೇರಿಗೆ ಬಂದ ಸಂದರ್ಭದಲ್ಲಿ ಅಧಿಕಾರಿಗಳು ಸ್ಪಂದಿಸಿ ಸಮಾಧಾನದಿಂದ ಅವರ ಸಮಸ್ಯೆ ಆಲಿಸಿ ಸಮಸ್ಯೆ ಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ ಎಂದ ಅವರು, ಕರ್ನಾಟಕ ರಾಜ್ಯ ಶಾಸಕಾಂಗ 1985 ರ ಕರ್ನಾಟಕ ಅಧಿನಿಯಮ ಸಂಖ್ಯೆ 4 ರ ಅಡಿ ಕಾಯಿದೆ ಜಾರಿಗೊಳಿಸಿದೆ. ಆಡಳಿತ ಯಂತ್ರದಲ್ಲಿ ಭ್ರಷ್ಟಚಾರ, ಸ್ವಜನಪಕ್ಷಪಾತ ಮತ್ತು ಅಶಿಸ್ತಿನ ಪ್ರಕರಣಗಳು ಸೇರಿದಂತೆ ಆಡಳಿತಾತ್ಮಕ ಕ್ರಮಗಳ ವಿರುದ್ಧ ದೂರುಗಳ ವಿಚಾರಣೆ ನಡೆಸುವ ಮೂಲಕ ಸಾರ್ವಜನಿಕ ಆಡಳಿತ ಗುಣಮಟ್ಟವನ್ನು ಸುಧಾರಿಸಲು ಕರ್ನಾಟಕ ಲೋಕಾಯುಕ್ತ ಸಂಸ್ಥೆ ರಚಿಸಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಎಂ ಪಾಟೀಲ್, ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೀಕರ್, ಶಿವಾಜಿ ಅನಂತ ನಲ್ಪಾಡೆ, ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ, ಜಿಲ್ಲಾಧಿಕಾರಿ ಮೀನಾನಾಗರಾಜ್, ಹಾಸನ - ಚಿಕ್ಕಮಗಳೂರು ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಸ್ನೇಹಾ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.24 ಕೆಸಿಕೆಎಂ 1ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರ ಹಾಗೂ ವಿಚಾರಣೆ ಸಭೆಯನ್ನು ನ್ಯಾಯಮೂರ್ತಿ ಉಪ ಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಉದ್ಘಾಟಿಸಿದರು.