ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಜಗತ್ತಿನ ಶ್ರೇಷ್ಠ ಅರ್ಥಶಾಸ್ತ್ರಜ್ಞರು. ಸಾಮಾಜಿಕ ನ್ಯಾಯದ ಹರಿಕಾರರು ಹಾಗೂ ಜ್ಞಾನದ ಸಂಕೇತವಾಗಿರುವ ಅಂಬೇಡ್ಕರ್ ಜನ್ಮದಿನವನ್ನು ಪ್ರತಿವರ್ಷ ಕೇವಲ ಹಳ್ಳಿ, ಪಟ್ಟಣಗಳಲ್ಲಿ ಮಾತ್ರವಲ್ಲದೆ ಜಗತ್ತಿನ ೧೯೮ ದೇಶಗಳಲ್ಲಿ ಹಾಗೂ ಅಲ್ಲಿನ ವಿದ್ಯಾನಿಲಯಗಳಲ್ಲಿ ಆಚರಿಸುತ್ತಾರೆ. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ವಿಶ್ವದ ಇತರೆ ದೇಶಗಳು ಅಳವಡಿಸಿಕೊಂಡಿವೆ. ಸಮಾನತೆಯ ಸಾಕಾರಮೂರ್ತಿ ಅಂಬೇಡ್ಕರ್ ಎಂದರೆ ತಪ್ಪಾಗಲಾರದು ಎಂದರು.ಅಂಬೇಡ್ಕರ್ ಅವರು ನೈತಿಕ ಮೌಲ್ಯಗಳನ್ನು ರೂಢಿಸುವುದೇ ನಿಜವಾದ ಶಿಕ್ಷಣ ಎಂದು ಹೇಳಿದ್ದರು. ಶಿಕ್ಷಣವೆಂಬುದು ಪ್ರತಿಯೊಬ್ಬರಿಗೂ ಒಂದು ಅಸ್ತ್ರ. ಶಿಕ್ಷಣವು ದೇಶದ ಸಾಮಾಜಿಕ ಬದಲಾವಣೆಗೆ ಕಾರಣವಾಗಲಿದೆ. ಮಹಿಳೆಯರಿಗೆ ಸಮಾನತೆ ಸೇರಿದಂತೆ ದೇಶದಲ್ಲಿ ಪ್ರತಿಯೊಬ್ಬರಿಗೂ ಮತದಾನ ಹಕ್ಕನ್ನು ಕಲ್ಪಿಸಿಕೊಟ್ಟರು. ಕಾರ್ಮಿಕರಿಗೆ ಕನಿಷ್ಠ ವೇತನ, ವಿಮಾ ಯೋಜನೆ, ರಜೆ, ಮುಂಬಡ್ತಿ, ಮಹಿಳೆಯರಿಗೆ ಹೆರಿಗೆ ರಜೆ, ಹಿಂದೂ ಕೋಡ್ ಬಿಲ್ ಇತರೆ ಅನೇಕ ಸೌಲಭ್ಯಗಳನ್ನು ಪ್ರತಿಪಾದಿಸಿದರು. ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಆದರ್ಶ ಚಿಂತನೆ, ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಾಹಿತಿ ಕೃಷ್ಣಕುಮಾರ್ ಅವರು ತಿಳಿಸಿದರು.
ವಕೀಲರು ಹಾಗೂ ಪುಲೆ- ಅಂಬೇಡ್ಕರ್ ವಾದಿಗಳಾದ ಎನ್. ಮಹೇಂದ್ರ ಮಾತನಾಡಿ, ಅಂಬೇಡ್ಕರ್ ಅವರು ಪ್ರತಿದಿನ ೧೮ ಗಂಟೆಗಳ ಕಾಲ ಓದುತ್ತಿದ್ದರು. ವಿದ್ಯಾರ್ಥಿಗಳು ಓದಿನ ಸಮಯದಲ್ಲಿ ಶ್ರದ್ಧೆಯಿಂದ ಓದುವುದೇ ಅಂಬೇಡ್ಕರ್ ಅವರಿಗೆ ಕೊಡುವ ಉನ್ನತ ಗೌರವ. ಯಾವುದೆ ಜನಾಂಗಕ್ಕೆ ತನ್ನ ಜೀವನವನ್ನೇ ಮುಡುಪಿಟ್ಟ ನಾಯಕನನ್ನು ಗೌರವಿಸದಿದ್ದರೆ ಅದು ಅನಾಚಾರ ಎಂದು ಅರಿಸ್ಟಾಟಲ್ ಹೇಳಿದ್ದಾರೆ. ಆದ್ದರಿಂದ ದೇಶದ ಎಲ್ಲಾ ಸಮುದಾಯ, ವರ್ಗಗಳಿಗಾಗಿ ತಮ್ಮ ವೈಯಕ್ತಿಕ ಜೀವನವನ್ನು ಮುಡುಪಾಗಿಟ್ಟ ಅಂಬೇಡ್ಕರ್ ಅವರನ್ನು ಎಲ್ಲರೂ ಸ್ಮರಿಸಲೇಬೇಕು ಎಂದರು.
ಗಣಿತಶಾಸ್ತ್ರ ಮುಖ್ಯಸ್ಥರಾದ ಚಂದ್ರಶೇಖರ್. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮಲ್ಲೇಶ್. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಸಿ.ಎನ್. ನಾರಾಯಣ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ನಾಗೇಂದ್ರಕುಮಾರ್, ಲೆಕ್ಕ ವ್ಯವಸ್ಥಾಪಕರಾದ ಡಾ. ಶಾಲಿನಿ, ಪತ್ರಾಂಕಿತ ವ್ಯವಸ್ಥಾಪಕರಾದ ಪೂರ್ಣಿಮಾ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
17ಸಿಎಚ್ಎನ್15