ಸಾಹಿತ್ಯ ಮನುಷ್ಯನನ್ನು ಮಾನವೀಯ ನೆಲೆಯಲ್ಲಿ ಚಿಂತಿಸುವಂತೆ ಮಾಡುತ್ತದೆ. ನಾಡು ನುಡಿ ಸಂರಕ್ಷಣೆ ಹಿನ್ನೆಲೆಯಲ್ಲಿ ಪರಿಷತ್ತು ರೂಪಗೊಂಡಿದೆ
ಗದಗ:ಭಾಷೆ, ನೆಲ, ಜಲದ ಪ್ರಶ್ನೆ ಬಂದಾಗ ಶತಮಾನಗಳಿಂದಲೂ ಕನ್ನಡ ಸಾಹಿತ್ಯ ಪರಿಷತ್ತು ಪ್ರಭುತ್ವ ಎಚ್ಚರಿಸುವ ಕಾರ್ಯ ಮಾಡುತ್ತಾ ಬಂದಿದೆ. ಪುಸ್ತಕ ಪ್ರಕಟನೆಗಳ ಮೂಲಕ ಕನ್ನಡಿಗರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಿ ಕನ್ನಡ, ಕನ್ನಡಿಗ ಮತ್ತು ಕರ್ನಾಟಕತ್ವವನ್ನು ಸದಾ ಜಾಗೃತವಾಗಿಡುವ ಕೆಲಸ ಮಾಡಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಸ್ನಾತಕೋತ್ತದ ಕೇಂದ್ರದ ಯಲಬುರ್ಗಾದ ಉಪನ್ಯಾಸಕ ಡಾ.ನಾಗಪ್ಪ ಹೂವಿನಭಾವಿ ಹೇಳಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನ, ಕಸಾಪ ಕಾರ್ಯಾಲಯ ಗದಗದಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ 111 ನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಜನಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ತು ಎಂಬ ವಿಷಯದ ಮೇಲೆ ಮಾತನಾಡಿದರು. ಸಮ್ಮೇಳನ, ಕಮ್ಮಟ, ಕಾರ್ಯಾಗಾರಗಳ ಮೂಲಕ ಬರಹಗಾರರನ್ನು ಹಾಗೂ ಓದುಗರನ್ನು ಮುಖಾಮುಖಿಯಾಗಿಸಿ ಕನ್ನಡದ ಪ್ರಜ್ಞೆ ಇಮ್ಮಡಿಗೊಳಿಸುವಲ್ಲಿ ಪರಿಷತ್ತು ಯಶಸ್ವಿಯಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಉಮೇಶ ಸಾಹಿತ್ಯ ಮನುಷ್ಯನನ್ನು ಮಾನವೀಯ ನೆಲೆಯಲ್ಲಿ ಚಿಂತಿಸುವಂತೆ ಮಾಡುತ್ತದೆ. ನಾಡು ನುಡಿ ಸಂರಕ್ಷಣೆ ಹಿನ್ನೆಲೆಯಲ್ಲಿ ಪರಿಷತ್ತು ರೂಪಗೊಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಬರಹಗಾರರು ಸಾಕಷ್ಟು ಪ್ರಮಾಣದಲ್ಲಿ ಕೃಷಿ ಮಾಡುತ್ತಿದ್ದರೂ ಓದುಗರ ಸಂಖ್ಯೆ ತೃಪ್ತಿದಾಯಕವಾಗಿಲ್ಲ. ಈ ಹಿನ್ನೆಲೆಯಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವದು ಇಂದಿನ ಅಗತ್ಯವಾಗಿದೆ. ಕನ್ನಡದ ಉಳಿವು ಶಾಲೆಗಳನ್ನು ಅವಲಂಬಿಸಿರುವದರಿಂದ ಕನ್ನಡ ಶಾಲೆಗಳ ಸಬಲೀಕರಣ ಪ್ರಥಮ ಆದ್ಯತೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗುರಣ್ಣ ಬಳಗಾನೂರ, ಡಾ.ಆರ್.ಎನ್. ಗೋಡಬೋಲೆ, ಶ್ರೀನಿವಾಸ ಹುಯಿಲಗೋಳ, ವಾಸಣ್ಣ ಕುರಡಗಿ, ಫಕ್ಕೀರಪ್ಪ ಹೆಬಸೂರ, ತಯ್ಯಬಅಲಿ ಹೊಂಬಳ, ಎ.ಎಸ್. ಮಕಾನದಾರ, ಎನ್.ಬಿ. ಕಳಸಾಪೂರ ಡಾ. ರಶ್ಮಿ ಅಂಗಡಿ, ಎಸ್.ವಿ. ಗುಂಜಾಳ ಅವರನ್ನು ಸನ್ಮಾನಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.