ಸಹಕಾರ ಸಂಘಗಳಿಗೆ ಶಕ್ತಿ ಹೆಚ್ಚಿಸಿದರೆ ದೇಶದ ಅಭಿವೃದ್ಧಿ ಸಾಧ್ಯ : ಸಂಸದ ಕೋಟಾ ಶ್ರೀನಿವಾಸ ಪೂಜಾರಿ

KannadaprabhaNewsNetwork | Updated : Mar 30 2025, 09:25 AM IST

ತರೀಕೆರೆ, ಸಹಕಾರ ಸಂಘಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ಮೂಲಕ ಶಕ್ತಿ ಹೆಚ್ಚಿಸಿದರೆ ದೇಶದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

 ತರೀಕೆರೆ :  ಸಹಕಾರ ಸಂಘಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ಮೂಲಕ ಶಕ್ತಿ ಹೆಚ್ಚಿಸಿದರೆ ದೇಶದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಶನಿವಾರ, ಭಾರತೀಯ ಜನತಾ ಪಾರ್ಟಿ, ತರೀಕೆರೆ ಮಂಡಲದಿಂದ ಪಟ್ಟಣದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ತಾಲುಕಿನ 21 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಬಿಜೆಪಿ ಬೆಂಬಲಿತವಾಗಿದೆ ಎಂಬುದು ಖುಷಿಯ ಸಂಗತಿ, ಕಾರ್ಯಕರ್ತರ ಬಗ್ಗೆ ಹೆಮ್ಮೆ ಎನಿಸುತ್ತದೆ. ಶ್ರದ್ಧೆಯಿಂದ ಕೆಲಸ ಮಾಡಿದರೆ ಸಹಕಾರ ಕ್ಷೇತ್ರ ಹಾಗೂ ಸಂಘಟನೆಗಳಿಗೆ ಹೆಚ್ಚು ಶಕ್ತಿ ಬರುತ್ತದೆ. ಈ ನಿಟ್ಟಿನಲ್ಲಿ ಸಹಕಾರಿ ಸಂಘಗಳಿಗೆ ಹೆಚ್ಚು ಶಕ್ತಿ ಕೊಡಬೇಕು ಎಂದು ಪ್ರತಿಪಾದಿಸಿದರು.

ಜನರ ಮಧ್ಯೆಯೇ ಇರುವ ನಿರ್ದೇಶಕರು ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದ ಅವರು, ಈ ಮೊದಲು, ಸಹಕಾರಿ ಕ್ಷೇತ್ರಕ್ಕೆ ಕೇಂದ್ರದಲ್ಲಿ ಸಚಿವಾಲಯವೇ ಇರಲಿಲ್ಲ, ಪ್ರಧಾನಿ ನರೇಂದ್ರ ಮೋದಿ ಮೂರುವರೆ ವರ್ಷಗಳ ಹಿಂದೆ ಸಹಕಾರಿ ಸಚಿವಾಲಯ ಸ್ಥಾಪಿಸಿ ಅಮಿತ್ ಷಾರನ್ನು ಸಚಿವರಾಗಿ ನೇಮಕ ಮಾಡಿದರು. ಸಹಕಾರಿ ವಿಶ್ವವಿದ್ಯಾನಿಲಯದ ಅಗತ್ಯ ಮನಗಂಡು ಸಹಕಾರಿ ವಿ.ವಿ.ಸ್ಥಾಪನೆಗೂ ನಿರ್ಧರಿಸಲಾಯಿತು ಎಂದು ವಿವರಿಸಿದರು.

ಸಹಕಾರಿ ವಿಶ್ವವಿದ್ಯಾನಿಲಯದಿಂದ ಸಹಕಾರಿ ಕ್ಷೇತ್ರದ ಹೆಚ್ಚಿನ ಅಭಿವೃದ್ಧಿ ಸಾಧ್ಯವಿದೆ. ದೇಶಾದ್ಯಂತ 8 ಲಕ್ಷ ಸಹಕಾರಿ ಸಂಘಗಳಿದ್ದು ಸುಮಾರು 31 ಕೋಟಿ ಸದಸ್ಯರಿದ್ದಾರೆ. ಈ ಕ್ಷೇತ್ರಕ್ಕೆ ಹೆಚ್ಚಿನ ಶಕ್ತಿ ಒದಗಿಸಿದರೆ ಬದಲಾವಣೆ ಸಾಧ್ಯವಿದೆ. ಸಹಕಾರಿ ಸಂಘಗಳಲ್ಲಿ 24 ಗಂಟೆಯೊಳಗೆ ಸದಸ್ಯರ ಯಾವುದೇ ಅರ್ಜಿಗಳು ಇತ್ಯರ್ಥವಾಗಬೇಕು. ಸೂಜಿ ದಾರದಂತೆ ಒಬ್ಬರಿಗೊಬ್ಬರು ಸಹಕಾರ ಕೊಟ್ಟರೆ ಸಹಕಾರ ಸಂಘಗಳು ಉದ್ದಾರ ಖಂಡಿತ ಎಂದು ಹೇಳಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ ಮಾತನಾಡಿ ಸಹಕಾರ ಸಂಘಗಳು ಒಳ್ಳೆಯ ಉದ್ದೇಶ ಹೊಂದಿವೆ. ದೇಶದ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರ ಬಹಳ ಮುಖ್ಯ ಎಂದು ಹೇಳಿದರು.

ಮಾಜಿ ಶಾಸಕ ಎಸ್.ಎಂ.ನಾಗರಾಜ್ ಮಾತನಾಡಿ ಇದು ಬಹಳ ಒಳ್ಳೆಯ ಕಾರ್ಯಕ್ರಮ. ಸಹಕಾರ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ನಿರ್ದೇಶಕರಿಗೆ ಮಾಜಿ ಶಾಸಕ ಡಿ.ಎಸ್.ಸುರೇಶ್ ಉತ್ಸಾಹ ಹೆಚ್ಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತಿದೆ. ಇನ್ನು ಹೆಚ್ಚು ಕೆಲಸಗಳನ್ನು ವಿರ್ವಹಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ ಮಾತನಾಡಿ ಮಾಜಿ ಶಾಸಕ ಡಿ.ಎಸ್.ಸುರೇಶ್ ಡಿಸಿಸಿ ಬ್ಯಾಂಕ್ ನಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ಬಿಜೆಪಿ ಹೆಚ್ಚಿನ ಸಹಕಾರ ಸಂಘಗಳಲ್ಲಿ ಗೆದ್ದಿರುವುದು ಸಂತೋಷ ತಂದಿದೆ ಎಂದು ಹೇಳಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್ ಮಾತನಾಡಿ ಮಾಜಿ ಶಾಸಕ ಡಿ.ಎಸ್.ಸುರೇಶ್ ಯಾರಿಗೂ ತಾರತಮ್ಯ ಮಾಡದೇ ಡಿಸಿಸಿ ಬ್ಯಾಂಕಿನಿಂದ ಸಾಲ ಸೌಲಭ್ಯ ನೀಡಿದ್ದಾರೆ. ಅತ್ಯುತ್ತಮ ಸಾಧನೆಗೆ ರಾಜ್ಯದಲ್ಲಿ ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ 2ನೇ ಸ್ಥಾನ ಪಡೆದಿದೆ. ತರೀಕೆರೆ ಕ್ಷೇತ್ರದಲ್ಲಿ ಅಮೃತ್- 2.0 ಯೋಜನೆ, 269 ಜನರಿಗೆ ಮನೆ ಹಕ್ಕು ಪತ್ರ ಹಾಗೂ ಸಮಗ್ರ ಅಭಿವೃ್ದ್ಧಿಗೆ ಅನುದಾನ ತಂದಿದ್ದು ಅವರೇ ಎಂದು ಹೇಳಿದರು.ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್ ಮಾತನಾಡಿ ಕಾಂಗ್ರೆಸ್ ಸರ್ಕಾರ 2 ವರ್ಷಗಳಲ್ಲಿ ಹಾಲಿನ ದರ, ವಿದ್ಯುತ್ ದರ ಇತ್ಯಾದಿ ಎಲ್ಲ ಕ್ಷೇತ್ರದಲ್ಲಿ ಬೆಲೆ ಏರಿಕೆ ಮಾಡಿದೆ. ಗ್ಯಾರಂಟಿ ಯೋಜನೆಗಳು ಒಂದೂ ಸಮರ್ಪಕವಾಗಿಲ್ಲ.

 ಬಿ.ಎಚ್.ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ದೂರಿದರು.ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ ಸಹಕಾರ ಸಂಘಗಳಿಗೆ ನೂತನ ವಾಗಿ ಆಯ್ಕಾಯಾದ ಆಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರಿಗೆ ಅಬಿನಂದನೆಗಳು. ಡಿಸಿಸಿಬ್ಯಾಂಕ್ ನ ನಮ್ಮ ಆಡಳಿತ ಮಂಡಳಿ ಬಂದ ಮೇಲೆ ರೈತರಿಗೆ ಹೆಚ್ಚುವರಿ ಸಾಲ, ಅಭಿವೃದ್ಧಿ ಸಾಲಗಳನ್ನು ನೀಡಿದೆ. ತಾರತಮ್ಯ ಮಾಡದೆ ಇಡೀ ಜಿಲ್ಲೆಯ ಎಲ್ಲ ಸಹಕಾರ ಸಂಘಗಳಿಗೆ ಸಾಲ ಸೌಲಭ್ಯ ನೀಡಿದೆ. ಹೆಚ್ಚು ಕೃಷಿ ಸಾಲ ನೀಡಿದ್ದರಿಂದ ಡಿಸಿಸಿ ಬ್ಯಾಂಕಿಗೆ ರಾಜ್ಯದಲ್ಲೇ 2ನೇ ಸ್ಥಾನದ ಪ್ರಶಸ್ತಿ ದೊರಕಿದೆ. ನಮ್ಮ ಆಡಳಿತದಲ್ಲಿ ಬ್ಯಾಂಕ್ ₹5 ಕೋಟಿ ಮತ್ತು ಪ್ರಸಕ್ತ ವರ್ಷ ಏಳುವರೆ ಕೋಟಿ ಲಾಭ ಗಳಿಸಿದೆ ಎಂದು ಹೇಳಿದರು.

ಈಗಿನ ಶಾಸಕರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ನಾವು ಶಾಸಕರಾಗಿದ್ದಾಗ ತರೀಕೆರೆ ಮತ್ತು ಅಜ್ಜಂಪುರಕ್ಕೆ ಅಮೃತ್ 2.0 ಯೋಜನೆ ತಂದಿದ್ದು, ಈ ಹಿಂದೆಯೇ ಈ ಯೋಜನೆಗೆ ಶಂಕುಸ್ಥಾಪನೆ ನಡೆದಿದೆ. ನಮ್ಮ ಸರ್ಕಾರ ತಂದ ಅನೇಕ ಯೋಜನೆಗಳಿಗೆ ಮತ್ತೆ ಮತ್ತೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ. 79 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಯೋಜನೆ ಆಗಿದ್ದು ನಮ್ಮ ಸರ್ಕಾರದಿಂದ ಎಂದು ಹೇಳಿದರು.ತಾಲೂಕು ಬಿಜೆಪಿ ಅಧ್ಯಕ್ಷ ಪ್ರತಾಪ್ ಗರಗದಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಕೆ.ಆರ್.ದೃವಕುಮಾರ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಂಭೈನೂರು ಆನಂದಪ್ಪ ಮತ್ತಿತರರು ಮಾತನಾಡಿದರು. ಮುಖಂಡರಾದ ಎಲ್.ಎಸ್. ಶಿವಯೋಗಿ, ವಸಂತಕುಮಾರ್,ರೇಣುಕಪ್ಪ, ಬೇಲೇನಹಳ್ಳಿ ಸೋಮಶೇಖರ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ವರಿ ರಾಜಶೇಖರ್, ಪಕ್ಷದ ಕಾರ್ಯಕರ್ತರು ಮತ್ತಿತರರು ಭಾಗವಹಿಸಿದ್ದರು.29ಕೆಟಿಆರ್.ಕೆ.4ಃ

ತರೀಕೆರೆಯಲ್ಲಿ ಭಾರತೀಯ ಜನತಾ ಪಾರ್ಟಿ ತರೀಕೆರೆ ಮಂಡಲದಿಂದ ನಡೆದ ಪ್ರಾ.ಕೃ.ಪ.ಸ.ಸಂಘಗಳ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರಿಗೆ ಅಭಿನಂದನಾ ಸಮಾರಂಭವನ್ನು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಡಿ.ಎಸ್.ಸುರೇಶ್, ಮಾಜಿ ಶಾಸಕ ಎಸ್.ಎಂ.ನಾಗರಾಜ್ ಮತ್ತಿತರರು ಇದ್ದರು.