ಮೂಡುಬಿದಿರೆ: ವಿದ್ಯಾರ್ಥಿಗಳು ದುರಭ್ಯಾಸಗಳಿಗೆ ಬಲಿಯಾಗದೆ ಜೀವನವನ್ನು ಸುಂದರವಾಗಿ ಕಟ್ಟಿಕೊಳ್ಳಬೇಕು ಎಂದು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಜೇಂದ್ರ ಬಿ. ಪ್ರತಿಪಾದಿಸಿದರು.ಇಲ್ಲಿನ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ಡ್ರಗ್ ಅವೇರ್‌ನೆಸ್ (ಮಾದಕ ವಸ್ತು ಜಾಗೃತಿ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಾದಕ ವಸ್ತುಗಳ ಸೇವನೆಯು ಕೇವಲ ಒಬ್ಬ ವ್ಯಕ್ತಿಯ ಬದುಕನ್ನು ಮಾತ್ರವಲ್ಲದೆ, ಆತನ ಕುಟುಂಬದ ನೆಮ್ಮದಿ ಮತ್ತು ಇಡೀ ಸಮಾಜದ ಶಾಂತಿಯನ್ನೇ ಕದಡುವ ಗಂಭೀರ ಪಿಡುಗಾಗಿದೆ ಎಂದರು.

ಕ್ಷಣಿಕ ಕುತೂಹಲ ಅಥವಾ ಕೆಟ್ಟ ಸ್ನೇಹಿತರ ಸಂಗದಿಂದ ಆರಂಭವಾಗುವ ಸಣ್ಣ ಅಭ್ಯಾಸ, ಇಡೀ ಜೀವನದ ದಿಕ್ಕನ್ನೇ ಹಾಳುಗೆಡವಬಲ್ಲದು. ಶೈಕ್ಷಣಿಕವಾಗಿ ಬೆಳೆಯಲು ನಿಮ್ಮ ಮುಂದೆ ಹತ್ತಾರು ಸನ್ಮಾರ್ಗದ ಆಯ್ಕೆಗಳಿವೆ. ಹೀಗಾಗಿ ವಿದ್ಯಾರ್ಥಿಗಳು ಸೂಕ್ತ ಕಾನೂನಿನ ಅರಿವು, ಆತ್ಮಸಂಯಮ ಹಾಗೂ ಉತ್ತಮ ಜೀವನಮೌಲ್ಯಗಳನ್ನು ಮೈಗೂಡಿಸಿಕೊಂಡು ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಮೂಲ್ಕಿ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ನಾಯಕ್, ಯುವಜನತೆಯನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳ ಜಾಲ ವಿಸ್ತರಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಜೀವ ದೇವರ ಕೊಡುಗೆ. ಜೀವನ ನಮ್ಮ ಸಾಧನೆ. ಜೀವವನ್ನು ಕಾಪಾಡಿ, ಜೀವನವನ್ನು ಸಾರ್ಥಕಗೊಳಿಸಿ. ಜೀವ ಅಮೂಲ್ಯ; ಜೀವನ ಅದಕ್ಕಿಂತಲೂ ಅಮೂಲ್ಯವಾದ ಹೊಣೆಗಾರಿಕೆ. ಶಿಕ್ಷಣದ ನಿಜವಾದ ಉದ್ದೇಶ ಕೇವಲ ಶೈಕ್ಷಣಿಕ ಸಾಧನೆಯಲ್ಲ; ಉತ್ತಮ ವ್ಯಕ್ತಿತ್ವ, ಸಾಮಾಜಿಕ ಬದ್ಧತೆ ಹಾಗೂ ರಾಷ್ಟ್ರಪ್ರಜ್ಞೆಯುಳ್ಳ ಯುವಜನರನ್ನು ರೂಪಿಸುವುದಾಗಿದೆ ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಕೆರಿಯರ್ ಗೈಡೆನ್ಸ್ ತಜ್ಞ ವಿವೇಕ್ ಭಂಡಾರಿ ಹಾಗೂ ಪ್ರಾಂಶುಪಾಲ ಪುಷ್ಪರಾಜ್, ಗೈಡೆನ್ಸ್ ತಜ್ಞ ವಿವೇಕ್ ಭಂಡಾರಿ ಹಾಜರಿದ್ದರು. ಉಪನ್ಯಾಸಕಿ ಮಂಜುಶ್ರೀ ನಾಯ್ಕ್ ನಿರೂಪಿಸಿ, ಉಪನ್ಯಾಸಕಿ ಪ್ರಿಯಾಂಕ ವಂದಿಸಿದರು.