ಪುತ್ತೂರು: ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಬರಹ ರೂಢಿಸಬೇಕು. ಆಗ ಜ್ಞಾನ ವೃದ್ಧಿ ಆಗುವುದು. ಕೇವಲ ಪಠ್ಯಕ್ಕೆ ಮಾತ್ರವಲ್ಲದೆ ಜೀವನಪರ್ಯಂತ ಬರಹವನ್ನು ಮೈಗೂಡಿಸಿ ಎಂದು ಶ್ರೀನಿವಾಸ ವಿಶ್ವವಿದ್ಯಾಲಯದ ಸಂಶೋಧನ ಪ್ರಾಧ್ಯಾಪಕ ಡಾ. ರಾಜೇಶ್ ಬೆಜ್ಜಂಗಳ ಹೇಳಿದ್ದಾರೆ.ಇಲ್ಲಿನ ಅಕ್ಷಯ ಪದವಿ ಕಾಲೇಜಿನಲ್ಲಿ ನಡೆದ ಮನದ ಮಾತು ಕವಿತೆಯ ಹಾದಿ ಕವನ ಕಮ್ಮಟ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು

ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ ಮಾತನಾಡಿ, ಮನುಷ್ಯ ಬದುಕಿನಲ್ಲಿ ನೋವು- ನಲಿವುಗಳನ್ನು ಬರಹದ ಮೂಲಕ ಸಾದರಪಡಿಸಿದಾಗ ಅದು ಸಾಹಿತ್ಯವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಜಯಂತ್ ನಡುಬೈಲು, ಬದುಕಿನುದ್ದಕ್ಕೂ ಸಾಹಿತ್ಯ ಎನ್ನುವುದು ನಮ್ಮಲ್ಲಿ ಅಂತರ್ಗತವಾಗಿರುವ ದೀಪ್ತಿ. ಇಂತಹ ವೇದಿಕೆಗಳನ್ನು ಸದುಪಯೋಗ ಪಡಿಸಿಕೊಂಡಾಗ ಪ್ರತಿಭೆಗಳು ಅನಾವರಣವಾಗುತ್ತದೆ ಎಂದರು.

ಕವನ ರಚನೆ ಮತ್ತು ಅನುಭವ ಕಥನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು. ಆಂತರಿಕ ಭರವಸೆ ಗುಣಮಟ್ಟ ಕೋಶ ಸಂಯೋಜಕಿ ರಶ್ಮಿ, ಅದ್ವಯ ಕನ್ನಡ ಸಾಹಿತ್ಯ ಸಂಘದ ಕಾರ್ಯದರ್ಶಿ ದಾಮಿನಿ ಇದ್ದರು.

ಕನ್ನಡ ಭಾಷಾ ವಿಭಾಗ ಮುಖ್ಯಸ್ಥ ಹರಿಸ್ಚಂದ್ರ ಸಿ ಪ್ರಸ್ತಾವನೆ ಮಾಡಿದರು. ವಿದ್ಯಾರ್ಥಿನಿಯರಾದ ವೀಕ್ಷಾ ಮತ್ತು ಸೃಷ್ಟಿ ಪ್ರಾರ್ಥಿಸಿದರು. ಹರಿಪ್ರಸಾದ್ ತೃತೀಯ ಬಿಎ ಅತಿಥಿಗಳ ಪರಿಚಯ ಮಾಡಿದರು. ಕನ್ನಡ ಉಪನ್ಯಾಸಕ ರಶ್ಮಿತಾ ಸ್ವಾಗತಿಸಿದರು. ಅಮೃತ್ ರಾಜ್ ವಂದಿಸಿದರು. ವಿದ್ಯಾರ್ಥಿನಿ ಗ್ರೀಷ್ಮ ನಿರೂಪಿಸಿದರು.