ಅಪ್ಪ ಬೆಳೆದ ಬೆಳೆಯೆ ಮಗಳ ಮದುವೆ ಚಪ್ಪರ

KannadaprabhaNewsNetwork | Updated : Jun 03 2025, 10:24 AM IST
ಹನೂರು ತಾಲೂಕಿನ "ಶುದ್ಧ ಫಾರ್ಮ್ಸ್ "ನಲ್ಲಿ ಆರ್.ತುಳಸಿ, ಕನ್ನಡಪ್ರಭ ರೈತರತ್ನ ಪಿ.ದಯಾನಂದ ಅವರ ಪುತ್ರಿ ರಶ್ಮಿ ಮತ್ತು ಬೆಂಗಳೂರಿನ ವೀಣಾ, ಆರ್. ಕಿಶೋ‌ರ್ ಕುಮಾರ್ ಅವರ ಪುತ್ರ ಕುಬೇರ್ ಕೆ.ಅವರ ವಿವಾಹ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ದೇವರಾಜು ಕಪ್ಪಸೋಗೆ

 ಚಾಮರಾಜನಗರ : ಹನೂರು ತಾಲೂಕಿನ ಚಿಂಚಳ್ಳಿ ಗ್ರಾಮದ ಪ್ರಗತಿಪರ ರೈತ ದಯಾನಂದ್ ಅವರು ಲಂಡನ್‌ನಲ್ಲಿ ಕಾನೂನು ಪದವಿ ಪಡೆದ ಪುತ್ರಿ ರಶ್ಮಿ ಅವರನ್ನು ಬೆಂಗಳೂರಿನ ವೀಣಾ ಮತ್ತು ಕಿಶೋರ್ ದಂಪತಿ ಪುತ್ರ, ಖಾಸಗಿ ಕಂಪನಿ ಉದ್ಯೋಗಿ ಕುಬೇರ್ ಅವರ ಜೊತೆ ತೋಟದಲ್ಲಿ ಮದುವೆ ಮಾಡಿಕೊಟ್ಟಿದ್ದು ಪ್ರಕೃತಿ ಮಡಿಲಲ್ಲಿ ನವ ಜೀವನದ ಉಲ್ಲಾಸ ತರಿಸಿದ್ದಾರೆ.

ಮದುವೆಗೆ ಬರುವ ಬಂಧು ಬಾಂಧವರು, ತೋಟಗಾರಿಕೆ, ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ಜೇನು ಸಾಕಣೆ, ರೇಷ್ಮೆ, ಹಾಗೂ ಅರಣ್ಯ ಕೃಷಿಯನ್ನು ನೋಡಿ ಸಂಭ್ರಮಿಸುವ ಮೂಲಕ ಮದುವೆಯಲ್ಲಿ ಭಾಗಿಯಾಗಲಿ ಎಂಬ ಉದ್ದೇಶದಿಂದ ಹೊಲದಲ್ಲೇ ಅದ್ಧೂರಿ ವಿವಾಹಕ್ಕೆ ನಾಂದಿ ಹಾಡಿದ್ದಾರೆ.

 ತೋಟದಲ್ಲಿ ಬೆಳೆದಿರುವ ಬಾಳೆ, ಬಿದಿರು, ತೆಂಗು, ಚೆಂಡು, ಸೇವತಿಂಗೆ ಹೂಗಳಿಂದ ಚಪ್ಪರ ನಿರ್ಮಿಸಿ ತಾವು ಬೆಳೆದ ಮಾವು, ಕಲ್ಲಂಗಡಿ ಸೇರಿದಂತೆ ಹಲವು ಹಣ್ಣುಗಳ ಪಾನೀಯ ಕೊಟ್ಟಿದ್ದಾರೆ. ನವಣೆ ಬಾತ್, ಎಳನೀರು ಪಾಯಸ ಸೇರಿದಂತೆ ಸಿರಿ ಧಾನ್ಯಗಳ ಬೊಂಬಾಟ್ ಭೋಜನವನ್ನು ಅತಿಥಿಗಳಿಗೆ ಉಣ ಬಡಿಸಿದ್ದಾರೆ.ತಮ್ಮ ಜಮೀನಿನಲ್ಲಿ ಲೆಮನ್ ಗ್ರಾಸ್ ಬೆಳೆಯ ಮೂಲಕವು ಆದಾಯವನ್ನು ಕಂಡುಕೊಂಡಿರುವ ದಯಾನಂದ್ ಅವರು, ಬಂದಂತ ಅತಿಥಿಗಳಿಗೆ ಲೆಮನ್ ಗ್ರಾಸ್ ಬೆಳೆಯುವ ವಿಧಾನ ಸೇರಿದಂತೆ ಕೃಷಿ ಪಾಠ ಮಾಡಿದ್ದು ತಮ್ಮ ತೋಟದಲ್ಲೇ ಬೆಳೆದ ತೋತಾಪುರಿ ಮಾವಿನಕಾಯಿ ಹಾಗೂ ಲೆಮನ್ ಗ್ರಾಸ್ ಸಸಿಯನ್ನು ತಾಂಬೂಲವಾಗಿ ಕೊಟ್ಟು ಗಮನ ಸೆಳೆದಿದ್ದಾರೆ.

ವಿಂಟೇಜ್ ಬೈಕ್-ಔಷಧಿ ಸಸ್ಯವನ

ಜತೆಯಲ್ಲಿ ಫೋಟೋ ಸಂಭ್ರಮ

ಬೇರೆ ವಿವಾಹ ಮಹೋತ್ಸವದಲ್ಲಿ ವಧು-ವರರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯ. ಆದರೆ, ದಯಾನಂದ್ ಪುತ್ರಿ ವಿವಾಹದಲ್ಲಿ ಹೊಸ ಲೋಕವೇ ಅನಾವರಣಗೊಂಡಿತ್ತು. ದಯಾನಂದ್ ಅವರು ಸಂಗ್ರಹಿಸಿದ್ದ ಅಪರೂಪದ ವಿಂಟೇಜ್ ಬೈಕ್ ಗಳು, ವಾಹನಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಜೊತೆಗೆ, ಔಷಧ ಸಸ್ಯಗಳ ಲೋಕವೇ ತೆರೆಯಲಾಗಿತ್ತು.‌ 

ವಿವಾಹಕ್ಕೆ ಬಂದವರಿಗೆ ಫೋಟೊ ಪಾಯಿಂಟ್‌ಗಳನ್ನು ರೂಪಿಸಿ ಮದುವೆಗೆ ಬಂದವರು ಸುಂದರ ನೆನಪುಗಳನ್ನು ಸೆರೆ ಹಿಡಿಯುತ್ತಿದ್ದರು. ನಾನು ಪ್ರಕೃತಿ ಮತ್ತು ಪ್ರಾಣಿ ಪ್ರೇಮಿ, ಸಿಟಿಯಲ್ಲಿ ಮಾಲಿನ್ಯದ ನಡುವೆ ಮದುವೆಯಾಗುವುದು ನನಗೆ ಇಷ್ಟವಿಲ್ಲ. ಚಿಕ್ಕದ್ದಾಗಿ, ಸಣ್ಣದಾಗಿ ಛತ್ರದಲ್ಲಿ ಮದುವೆಯಾಗುವ ಬದಲು ಪ್ರಕೃತಿ, ಕೃಷಿ ನಡುವೆ ಖುಷಿಯಾಗಿ ಮದುವೆಯಾಗಿರುವುದು ನನಗೆ ಸಂತಸ ತಂದಿದೆ.

ರಶ್ಮಿ ದಯಾನಂದ್, ವಧು

ಎಲ್ಲರೂ ಸಿಟಿಯಲ್ಲಿ ಹಾಲ್‌ನಲ್ಲಿ, ಹೋಟೆಲ್‌ನಲ್ಲಿ ಮದುವೆ ಆಗುತ್ತಾರೆ. ನಾವು ಪ್ರಕೃತಿ, ಮರ-ಗಿಡಗಳ ನಡುವೆ ಮದುವೆ ಆಗಿದ್ದೇವೆ. ನಾವು ಹೆಚ್ಚು ಆರ್ಗಾನಿಕ್ ಬಳಸಿದ್ದು ಪ್ಲಾಸ್ಟಿಕ್ ಫ್ರೀ ಮದುವೆ ಆಗಿದ್ದೇವೆ. ಊಟವನ್ನು ಕೂಡ ವಿಭಿನ್ನವಾಗಿ ಬಂದ ಅತಿಥಿಗಳಿಗೆ ಉಣಬಡಿಸಿದ್ದೇವೆ. 

ಕುಬೇರ್, ವರ

ಹಿಂದಿನ ಕಾಲದಲ್ಲಿ ನಮ್ಮ‌ ಮನೆ ಮುಂದೆ ಚಪ್ಪರದಲ್ಲಿ ಮದುವೆ ಆಗುತ್ತಿದ್ದರು. ಆದರೀಗ, ಅದು ಮರೆಯಾಗುತ್ತಿದೆ. ಈಗಿನ ಮದುವೆಯ ವೈಭವೀಕರಣ ಇಲ್ಲದೇ ನಾವು ದಿನನಿತ್ಯ ಕೆಲಸ ನಾಡು ಮಾಡುವ ಸ್ಥಳದಲ್ಲಿ ಮದುವೆ ಮಾಡಿದ್ದು ಕೃಷಿಯಿಂದ ಬಹಳಷ್ಟು ಜನರು ವಿಮುಖರಾಗುತ್ತಿದ್ದು ಮರೆತ ಕೃಷಿಯನ್ನು ಮದುವೆ ಮೂಲಕ ನೆನಪಿಸಬೇಕು ಎಂಬುದು ಕೂಡ ಇಲ್ಲಿ ಮದುವೆ ಮಾಡಿರುವುದು.

ದಯಾನಂದ, ಕೃಷಿ ರೈತರತ್ನ ಪ್ರಶಸ್ತಿ ಪುರಸ್ಕೃತ

Read more Articles on