ಮುಂದುವರಿದ ಡಿಕೆಶಿ vs ಎಚ್‌ಡಿಕೆ ವಾಕ್ಸಮರ!

KannadaprabhaNewsNetwork |  
Published : Aug 30, 2026, 01:45 AM IST
ಡಿಕೆಶಿ | Kannada Prabha

ಸಾರಾಂಶ

‘ನಾನು ಸಿಎಂ ಆಗಿದ್ದಕ್ಕೆ ಎಚ್‌.ಡಿ.ಕುಮಾರಸ್ವಾಮಿಗೆ ಅಸೂಯೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಿಡಿ ಕಾರಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು‘ನಾನು ಸಿಎಂ ಆಗಿದ್ದಕ್ಕೆ ಎಚ್‌.ಡಿ.ಕುಮಾರಸ್ವಾಮಿಗೆ ಅಸೂಯೆ. ಕುಮಾರಸ್ವಾಮಿ ಮಾತ್ರ ಅಲ್ಲ, ಬಿಜೆಪಿ, ಜೊತೆಗೆ ಎನ್‌ಡಿಎನ ಇಡೀ ಮೈತ್ರಿಕೂಟಕ್ಕೆ ನಾನು ಸಿಎಂ ಆಗಿರುವುದನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ, ಏನೇನೋ ಮಾತನಾಡುತ್ತಿದ್ದಾರೆ, ಮಾತನಾಡಲಿ. ಆದರೆ, ಒಂದಂತೂ ಸತ್ಯ, ಟೀಕೆಗಳು ಸಾಯುತ್ತವೆ, ಮಾಡಿದ ಕೆಲಸ ಉಳಿಯುತ್ತದೆ. ಇದನ್ನು ನಂಬಿದವನು ನಾನು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಿಡಿ ಕಾರಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಬೇಕಿದ್ದರೆ, ಡಿಕೆಶಿಯವರು ವಿಧಾನಸೌಧವನ್ನೇ ಮಾರುತ್ತಾರೆ’ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಈ ಹಿಂದೆ ಯಾರ್ಯಾರು ಏನೇನನ್ನು ಮಾರಲು ಹೊರಟಿದ್ದರು ಎಂಬ ಚರಿತ್ರೆ ಬಿಚ್ಚಿಟ್ಟರೆ ಎಲ್ಲವೂ ಬಯಲಾಗುತ್ತದೆ. ನಾನು ಸದ್ಯಕ್ಕೆ ಆ ತಂಟೆಗೆ ಹೋಗುವುದಿಲ್ಲ. ಕುಮಾರಸ್ವಾಮಿಯವರಿಗೆ ಬಾಯಿ ಚಪಲ. ಚಪಲಕ್ಕೆ ಮಾತನಾಡಿ ಖುಷಿ ಪಡಲಿ ಬಿಡಿ. ನನ್ನ ಬಗ್ಗೆ ಇನ್ನೂ ಬೇಕಾದಷ್ಟು ಟೀಕೆ ಮಾಡಲಿ. ಅಸೂಯೆಗೆ ಯಾವುದೇ ಮದ್ದಿಲ್ಲ ಎಂದರು.ರಾಜಕೀಯಕ್ಕಾಗಿ ಪಾದಯಾತ್ರೆ:ನಾಗೇಂದ್ರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ತಮ್ಮ ರಾಜಕೀಯಕ್ಕಾಗಿ ನಿರಪರಾಧಿಯನ್ನು ಬಲಿ ತೆಗೆದುಕೊಂಡರು. ಯಾವ ತಪ್ಪು ಮಾಡದೆ ಇದ್ದರೂ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ನಾಗೇಂದ್ರ ರಾಜೀನಾಮೆಯ ನಂತರವೂ ಬಿಜೆಪಿಯವರು ಪಾದಯಾತ್ರೆ ಮಾಡುವುದಾದರೆ ಮಾಡಲಿ. ಅವರಿಗೆ ರಾಜಕೀಯ ಬೇಕು. ಹೀಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕುಟುಕಿದರು.ನನ್ನ ಒಂದೇ ಒಂದು ಪ್ರಶ್ನೆಗೂ ಬಿಜೆಪಿಯವರು ಉತ್ತರ ಕೊಡಲಿಲ್ಲ. ಯಾವ ಕಾರಣಕ್ಕಾಗಿ ನಾಗೇಂದ್ರ ಅವರ ರಾಜೀನಾಮೆ ಕೇಳಿದರು ಎಂಬ ನನ್ನ ಪ್ರಶ್ನೆ ಬಗ್ಗೆ ಬಿಜೆಪಿಯವರು ಉತ್ತರ ಕೊಡಲಿ ಎಂದು ಸವಾಲು ಹಾಕಿದರು.

ಮೇಕೆದಾಟು ಯೋಜನೆ ಜಾರಿಗೆ ಕೇಂದ್ರಕ್ಕೆ ಅರ್ಜಿ ಸಲ್ಲಿಕೆ:

ಮೇಕೆದಾಟು ಯೋಜನೆ ಬಗ್ಗೆ ಪ್ರತಿಕ್ರಿಯಿಸಿ, ಸುಪ್ರೀಂಕೋರ್ಟ್‌ ನಮ್ಮ ಪರವಾಗಿಯೇ ತೀರ್ಪು ನೀಡಿರುವುದರಿಂದ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಮೇಕೆದಾಟು ಯೋಜನೆ ಜಾರಿಗೊಳಿಸುವ ಮೂಲಕ ನೀರಿನ ಸದ್ಭಳಕೆ ಮಾಡಿಕೊಳ್ಳಲು ಮುಂದಾಗಿದ್ದೇವೆ. ಈ ಯೋಜನೆ ಜಾರಿಗೆ 5,400 ಹೆಕ್ಟೇರ್‌ ಜಮೀನಿನ ಅಗತ್ಯವಿದೆ. ಈ ಪೈಕಿ ಅರಣ್ಯ ಇಲಾಖೆಯ ಜಾಗವೂ ಸೇರಿದೆ. ಅರಣ್ಯ ಪ್ರದೇಶಕ್ಕೆ ಪರ್ಯಾಯವಾಗಿ ಜಮೀನು ನೀಡಲು ಸಿದ್ಧತೆ ಆಗಿದೆ. ಈಗ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದು, ಕೇಂದ್ರ ಸರ್ಕಾರಕ್ಕೆ ಮೇಕೆದಾಟು ಯೋಜನೆ ಸಂಬಂಧ ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇತ್ತೀಚೆಗೆ ನಾನು ತಮಿಳುನಾಡಿಗೆ ಹೋಗಿದ್ದಾಗಲೂ ಇದೇ ವಿಷಯ ಮಾತನಾಡಿದ್ದೇನೆ. ದೇಶದ ನೆಲ, ಜಲ, ಭಾಷೆ ವಿಚಾರದಲ್ಲಿ ನಾವು ಒಗ್ಗಟ್ಟಾಗಬೇಕು ಎಂದು ಅವರು ಕರೆ ನೀಡಿದರು.

ತುಂಗಭದ್ರಾ ವಿಷಯದಲ್ಲಿಯೂ 3 ರಾಜ್ಯಗಳ ಮುಖ್ಯಮಂತ್ರಿಗಳು ಸೇರಿ ಕೇಂದ್ರ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿರುವುದು ಐತಿಹಾಸಿಕ ಬೆಳವಣಿಗೆ. ತುಂಗಭದ್ರಾದಲ್ಲಿ 33 ಟಿಎಂಸಿಯಷ್ಟು ಹೂಳು ತುಂಬಿದೆ. ಈ ಹೂಳು ತೆಗೆಸಲು ಕೇಂದ್ರ ಸರ್ಕಾರ ಹೊಸ ನೀತಿ ರೂಪಿಸಿಕೊಟ್ಟಿದೆ ಎಂದರು.

ತೇಗದ ಸಿರಿ ಯೋಜನೆ:

ಪ್ರತಿ ವರ್ಷ ಒಂದು ಕೋಟಿ ಮರ ನೆಡಬೇಕು ಎಂಬ ಉದ್ದೇಶವಿದೆ. ಯಾವುದೋ ಮರ ನೆಡುವ ಬದಲಿಗೆ ತೇಗದ ಮರಗಳನ್ನು ನೆಟ್ಟರೆ ಮುಂದಿನ 20 ರಿಂದ 25 ವರ್ಷಕ್ಕೆ ಒಳ್ಳೆಯ ಆರ್ಥಿಕ ಸಂಪತ್ತು ಆಗಲಿದೆ. ರಸ್ತೆಯ ಅಕ್ಕಪಕ್ಕ ತೇಗದ ಮರಗಳನ್ನು ಬೆಳೆಸಿದರೆ ಪಕ್ಕದ ಜಮೀನಿನವರು ಅವುಗಳ ಪೋಷಣೆ ಮಾಡಬೇಕು. ಮರಗಳ ಮಾರಾಟವಾದ ಹಣದಲ್ಲಿ ಶೇ.70ರಷ್ಟು ರೈತರಿಗೆ ಉಳಿದ ಶೇ.30ರಷ್ಟು ಸರ್ಕಾರಕ್ಕೆ ಎಂಬ ಚಿಂತನೆ ಇದೆ ಎಂದು ಅವರು ಹೇಳಿದರು.ನಾನ್ಯಾಕೆ ಅಸೂಯೆ ಪಡಲಿ: ಎಚ್‌ಡಿಕೆ

‘ಡಿಕೆಶಿ ಸಿಎಂ ಆದರೆ ನಾನ್ಯಾಕೆ ಅಸೂಯೆ ಪಡಲಿ. ಎಷ್ಟು ಜನ‌ ಸಿಎಂಗಳನ್ನು ನಾನು ನೋಡಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿ, ಜನರ ಕಷ್ಟ-ಸುಖಕ್ಕೆ ಸ್ಪಂದಿಸಿ. ಆಗ ನಾನೇ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಸಿಎಂ ಡಿ.ಕೆ.ಶಿವಕುಮಾರ್‌ಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.ಮಂಡ್ಯದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ನಾನು ಸಿಎಂ ಆಗಿದ್ದಕ್ಕೆ ಎಚ್ಡಿಕೆಗೆ ಅಸೂಯೆ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿ, ಡಿಕೆಶಿ ಸಿಎಂ ಆದರೆ ನಾನ್ಯಾಕೆ ಅಸೂಯೆ ಪಡಲಿ?. ಸಿಎಂಗಿರಿಗೆ ಕೊಂಬಿದ್ಯಾ?. ಸಿಎಂ ಆದ ತಕ್ಷಣ ಏನು ಸಿಗುತ್ತದೆ, ದುಡ್ಡು ಮಾಡುವವರಿಗೆ ಸಿಎಂಗಿರಿ ಬೇಕು ಎಂದರು.ನಾಗೇಂದ್ರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿ, ಇದರ ಕ್ರೆಡಿಟ್ ಯಾರಿಗೆ ಹೋಗಬೇಕು ಎಂಬುದು ಮುಖ್ಯವಲ್ಲ. ಕಾಂಗ್ರೆಸ್‌ಗೆ ಆಗುತ್ತಿರುವ ಮುಜುಗರ ತಪ್ಪಿಸಲು ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ. ಯಾವ ಕಾರಣಕ್ಕೆ ಕಾಂಗ್ರೆಸ್‌ಗೆ ಮುಜುಗರ ಆಗುತ್ತಿದೆ. ₹187 ಕೋಟಿ ಹಗರಣದ ಮುಜುಗರ ತಪ್ಪಿಸಲು ರಾಜೀನಾಮೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.ಕುಮಾರಸ್ವಾಮಿ ಮೇಲೆ ಆರೋಪ ಇಲ್ವಾ ಎಂದಿರುವ ನಾಗೇಂದ್ರ ಅವರ ಪ್ರಶ್ನೆಗೆ ಉತ್ತರಿಸಿ, ಕುಮಾರಸ್ವಾಮಿ ಮೇಲೆ ಇರುವುದು ರಾಜಕೀಯ ಆರೋಪ. ನಾನು ದುಡ್ಡು ಹೊಡೆದಿದ್ದೇನೆ ಎಂದು ಎಲ್ಲೂ ಇಲ್ಲ. 14 ವರ್ಷದಿಂದ ಈ ಆರೋಪವನ್ನು ಜೀವಂತವಾಗಿ ಇಟ್ಟುಕೊಂಡಿದ್ದಾರೆ. ಕುಮಾರಸ್ವಾಮಿಯವರ ಬಾಯಿ ಮುಚ್ಚಿಸಲು ಯಾರಿಂದಲೂ ಆಗುವುದಿಲ್ಲ. ನಾನು ಎರಡು ಬಾರಿ ಸಿಎಂ ಆಗಿದ್ದಾಗ ಆರೋಪವನ್ನು ಮುಚ್ಚಿ ಹಾಕಬಹುದಿತ್ತು. ನಾನು ಅದನ್ನು ಇನ್ನೂ ಹಾಗೆ ಇಟ್ಟು ಆರೋಪ ಮಾಡಿರುವವರು ತನಿಖೆ ಮಾಡಿಸಲಿ ಎಂದು ಬಿಟ್ಟಿದ್ದೇನೆ. ಆದರೆ, ನಾಗೇಂದ್ರ ಅವರು ಹಣ ಹೊಡೆದಿರುವ ಮುಜುಗರ ತಪ್ಪಿಸಿಕೊಳ್ಳಲು ರಾಜೀನಾಮೆ ನೀಡಿದ್ದಾರೆ ಎಂದು ಟೀಕಿಸಿದರು.ಇದೇ ವೇಳೆ, ಬಿಡದಿಯಲ್ಲಿ ಕುಮಾರಸ್ವಾಮಿ ಕುಟುಂಬದ ಜಮೀನೂ ಇದೆ, ಅವರದೂ ಭೂವ್ಯವಹಾರವಿದೆ ಎಂಬ ಬಾಲಕೃಷ್ಣ ಹೇಳಿಕೆಗೆ ತಿರುಗೇಟು ನೀಡಿ, ಬೆಂಗಳೂರು ನಗರದಲ್ಲಿ ಭೂಮಿ ವ್ಯವಹಾರ ಮಾಡುವವರು ಗನ್ ಇಟ್ಕೊಳ್ಳುತ್ತಾರೆ. ನಾನ್ಯಾವುದು ಭೂಮಿ ವ್ಯವಹಾರ ಮಾಡಿಲ್ಲ. ಸಿನೆಮಾ ಹಂಚಿಕೆದಾರನಾಗಿದ್ದಾಗ ಸಂಪಾದಿಸಿದ ಹಣದಲ್ಲಿ ಜಮೀನು ಖರೀದಿ ಮಾಡಿದ್ದೇನೆ. ಯಾರದೋ ಜಮೀನಿಗೆ ಬೇಲಿ ಹಾಕಿ, ಆ ಭೂಮಿಯನ್ನು ಕಸಿದುಕೊಂಡಿಲ್ಲ.ಪ್ರತಿನಿತ್ಯ ಭೂಮಿ ವ್ಯವಹಾರ ಮಾಡುವವರಿದ್ರೆ ಗನ್ ಇಟ್ಟಕೊಳ್ಳಲೇ ಬೇಕು. ಭೂಮಿ ಬರೆಸಿಕೊಳ್ಳುವಾಗ ಯಾರಿಗಾದರೂ ಹೆದರಿಸಬೇಕಲ್ವಾ?. ಅದರಿಂದ ಅಂತವರು ಗನ್ ಇಟ್ಟುಕೊಂಡಿರುತ್ತಾರೆ ಎಂದು ಹೇಳಿದ್ದೇನೆ ಎಂದರು.ಪೂರ್ವ ಸಿದ್ಧತೆ ಮಾಡಿಕೊಂಡು ಕೋರ್ಟ್ ಗೆ ಹೋಗಿ: ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಸರಿಯಾದ ಪೂರ್ವ ಸಿದ್ಧತೆ ಮಾಡಿಕೊಂಡು ನ್ಯಾಯಾಲಯಕ್ಕೆ ಹೋಗುತ್ತಿಲ್ಲ. ಇದರಿಂದ ನ್ಯಾಯಾಲಯದಲ್ಲಿ ಹಿನ್ನಡೆಯಾಗುತ್ತಿದೆ. ಕಳೆದ ಎರಡು ತಿಂಗಳಿನಿಂದ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ. ಇನ್ನೂ ಕೆಆರ್‌ಎಸ್ ಡ್ಯಾಂ ತುಂಬಿಲ್ಲ. ನೀರು ಬಿಡುತ್ತಿದ್ದೇವೆಂದು ಹೇಳಲು ಧೈರ್ಯ ಇವರಿಗಿಲ್ಲ. ನೀರು ಹೋಗುವುದು ಹೋಗುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಗೀತದಿಂದ ಮನಸ್ಸಿಗೆ ನೆಮ್ಮದಿ, ಶಾಂತಿ
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಅನುಮತಿ