ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಎಡೆಬಿಡದೆ ಸುರಿದ ಮಳೆಯಿಂದ ಪ್ರವಾಹದ ಆತಂಕ ಸೃಷ್ಟಿಯಾಗಿತ್ತು. ಶನಿವಾರವಂತೂ ಇಡೀ ದಿನ ಧಾರಾಕಾರವಾಗಿ ಬಂದ ಮಳೆ ಭಾನುವಾರ ಬೆಳಗಿನ ಜಾವದವರೆಗೂ ಮುಂದುವರಿದಿತ್ತು. ಭದ್ರಾ ನದಿ ಉಗಮ ಸ್ಥಾನವಾದ ಗಂಗಾಮೂಲ, ಕುದುರೆಮುಖ, ಕಳಸ ಭಾಗದಲ್ಲೂ ಕಳೆದೆರಡು ದಿನಗಳಿಂದ ವ್ಯಾಪಕವಾಗಿ ಮಳೆಯಾಗಿದ್ದು, ಭದ್ರಾನದಿ ಹರಿವು ಅಪಾಯ ಮಟ್ಟ ಮೀರಿತ್ತು. ಭದ್ರಾ ನದಿಯ ನೀರು ಏರಿಕೆಯಾದಂತೆ ಬಾಳೆಹೊನ್ನೂರಿನ ಭದ್ರಾ ನದಿ ಅಸುಪಾಸಿನ ತೋಟ, ಗದ್ದೆಗಳಿಗೆ ಭದ್ರೆಯ ಪ್ರವಾಹದ ನೀರು ನುಗ್ಗಿದ್ದು, ಜಲಾವೃತಗೊಂಡಿದ್ದವು.
ಪಟ್ಟಣದ ಡೋಬಿ ಹಳ್ಳದ ದಂಡೆಯ ಕೃಷಿ ಉತ್ಪನ್ನ ಮಾರುಕಟ್ಟೆಯ ಸಂತೆ ಮಾರುಕಟ್ಟೆ ಸಂಕೀರ್ಣಗಳಿಗೂ ಸಹ ಪ್ರವಾಹದ ನೀರು ನುಗ್ಗಿದ್ದು, ಭಾನುವಾರ ಸಂಜೆವರೆಗೂ ನೀರು ಇಳಿದಿರಲಿಲ್ಲ. ಶನಿವಾರ ರಾತ್ರಿ ದೋಬಿಹಳ್ಳದ ಪಕ್ಕದ ಲ್ಲಿರುವ ಎನ್.ಆರ್.ಪುರ ರಸ್ತೆಯ ಹೋಟೆಲ್ವೊಂದಕ್ಕೆ ಸಹ ನೀರು ನುಗ್ಗಿದ್ದು, ಭಾನುವಾರ ಬೆಳಗಿನ ವೇಳೆಗೆ ನೀರು ಇಳಿಕೆಯಾಗಿತ್ತು.ಐತಿಹಾಸಿಕ ಖಾಂಡ್ಯ ಕ್ಷೇತ್ರದಲ್ಲೂ ಮಳೆಯ ಅಬ್ಬರ ಹೆಚ್ಚಾಗಿದ್ದು, ಖಾಂಡ್ಯ ಮಾರ್ಕಾಂಡೇಶ್ವರ ದೇವಸ್ಥಾನದ ಸಮೀಪದ ಭದ್ರಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿತ್ತು. ಶನಿವಾರ ಕಳಸ-ಹೊರನಾಡು-ಕೊಟ್ಟಿಗೆಹಾರ ಸಂಪರ್ಕ ಕಲ್ಪಿಸುವ ಬೈರೇಗುಡ್ಡದ ಬಳಿಯಲ್ಲಿ ಬೃಹತ್ ಗಾತ್ರ ಮರ ರಸ್ತೆಗೆ ಉರುಳಿದೆ. ಕೆಲ ಕಾಲ ಸಂಚಾರ ಕಡಿತ ಗೊಂಡಿತ್ತು.
ಬಾಳೆಹೊನ್ನೂರಿನ ಡೋಬಿಹಳ್ಳದ ದಡದ ಸಂತೆ ಮಾರುಕಟ್ಟೆ ಸಂಕೀರ್ಣಕ್ಕೆ ಭದ್ರಾ ನದಿ ಪ್ರವಾಹದ ನೀರು ನುಗ್ಗಿರುವುದು.೦೨ಬಿಹೆಚ್ಆರ್ ೨: