ಹೊಸಕೋಟೆ: ಬಹುನಿರೀಕ್ಷಿತ ಹೊಸಕೋಟೆ ಜನರ ಕನಸಾದ ಮೆಟ್ರೋ ಯೋಜನೆ ನನಸು ಮಾಡುವಲ್ಲಿ ರಾಜ್ಯ ಸರ್ಕಾರ ಮುಂದಾಗಿದ್ದು ಕೆ.ಆರ್.ಪುರಂನಿಂದ ಹೊಸಕೋಟೆಗೆ ಮೆಟ್ರೋ ತರಲು ಹಸಿರು ನಿಶಾನೆ ತೋರಿದ್ದು ದೆಹಲಿ ಮೂಲದ ಸಂಸ್ಥೆಯೊಂದಕ್ಕೆ ಅದ್ಯಯನ ಯೋಜನೆಗೆ ನಿರ್ದೇಶನ ನೀಡಿದೆ.
ಬೆಂಗಳೂರು ನಗರಕ್ಕೆ ಹೊಂದಿಕೊಂಡು ಬೆಳೆಯುತ್ತಿರುವ ಹೊಸಕೋಟೆ ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು ಪ್ರತಿನಿತ್ಯ ಹೊಸಕೋಟೆ ಮಾರ್ಗದಲ್ಲಿ ಸಹಸ್ರಾರು ಪ್ರಯಾಣಿಕರು ಬಸ್ ಮತ್ತಿತರ ವಾಹನಗಳಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಹೊಸಕೋಟೆ ಮಾರ್ಗದಲ್ಲಿಯೇ ಕೋಲಾರ, ಮಾಲೂರು, ಚಿಂತಾಮಣಿ ಭಾಗಗಳಿಂದಲೂ ಹೊಸಕೋಟೆಗೆ ಬಂದು ಬೆಂಗಳೂರಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನಲೆಯಲ್ಲಿ ಹೊಸಕೋಟೆ ಜನರ ಸುಗಮ ಓಡಾಟಕ್ಕೆ ಅನುಕೂಲವಾಗಲೆಂದು ಹಾಗೂ ಹೊಸಕೋಟೆ ಭಾಗದಿಂದ ಬೆಂಗಳೂರಿಗೆ ಕೆಲಸ ಕಾರ್ಯಗಳಿಗೆ ಹೋಗುವ ಜನರಿಗೆ ಅನುಕೂಲವಾಗಲೆಂದು ಹೊಸಕೋಟೆಯವರೆಗೂ ಮೆಟ್ರೋ ರೈಲು ತರುವ ಯೋಜನೆ ಜಾರಿ ಮಾಡುವುದಾಗಿ ಚುನಾವಣೆ ಸಂದರ್ಭದಲ್ಲಿ ಶರತ್ ಬಚ್ಚೇಗೌಡರು ಕ್ಷೇತ್ರದ ಜನರಿಗೆ ಆಶ್ವಾಸನೆ ನೀಡಿದ್ದರು. ಗೆದ್ದ ನಂತರ ಕ್ಷೇತ್ರದ ಜನರಿಗೆ ನೀಡಿದ ಆಶ್ವಾಸನೆಯನ್ನು ಈಡೇರಿಸುವಲ್ಲಿ ಸತತ ಪ್ರಯತ್ನ ಮಾಡಿದ ಶರತ್ ಬಚ್ಚೇಗೌಡರು ಕಾಂಗ್ರೆಸ್ ಸರಕಾರದ ಮೇಲೆ ಒತ್ತಡ ತಂದು ಯೋಜನೆಗೆ ಜಾರಿಗೆ ಪ್ರಯತ್ನಿಸುತ್ತಲೇ ಇದ್ದರು.
ಸದನದಲ್ಲೂ ಮನವಿ: ಹೊಸಕೋಟೆಯವರೆಗೂ ಮೆಟ್ರೋ ಯೋಜನೆ ವಿಸ್ತರಿಸಬೇಕು ಎಂದು ಶರತ್ ಬಚ್ಚೇಗೌಡರು ಸದನದಲ್ಲೂ ಪ್ರಸ್ತಾಪ ಮಾಡಿದ್ದರು. ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೆಟ್ರೋ ಯೋಜನೆ ವಿಸ್ತರಿಸುವ ಭರವಸೆ ನೀಡಿದ್ದರು. ಹೊಸಕೋಟೆಯಲ್ಲಿ ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆಯೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ವೇದಿಕೆಯಲ್ಲಿ ಶರತ್ ಬಚ್ಚೇಗೌಡರು ಮೆಟ್ರೋ ಯೋಜನೆ ನೀಡುವಂತೆ ಮನವಿ ಮಾಡಿದ್ದರು. ಆಗಲೂ ಉಪಮುಖ್ಯಮಂತ್ರಿಗಳು ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಈ ಯೋಜನೆಗೆ ಅಗತ್ಯ ಡಿಪಿಆರ್ ಸಿದ್ದಪಡಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಭರವಸೆ ನೀಡಿದ್ದರು. ಈಗ ಶಾಸಕ ಶರತ್ ಬಚ್ಚೇಗೌಡರ ಸತತ ಪ್ರಯತ್ನದ ಫಲವಾಗಿ ಬಿಎಂಆರ್ಸಿಎಲ್ ಕೆ.ಆರ್.ಪುರಂನಿಂದ ಹೊಸಕೋಟೆವರೆಗೂ ಮೆಟ್ರೋ ವಿಸ್ತರಿಸಲು ಯೋಜನೆ ರೂಪಿಸಲು ಮುಂದಾಗಿರುವುದು ಹೊಸಕೋಟೆ ಕ್ಷೇತ್ರದ ಜನತಗೆ ಸಂತಸ ತಂದಿದೆ.ಹೇಗೆ ಸಂಪರ್ಕ?
ಕೆ.ಆರ್.ಪುರಂ-ಹೊಸಕೋಟೆವರೆಗೂ ಮೆಟ್ರೋ ಸೇವೆ ವಿಸ್ತರಿಸಲು ೧೬ ಕಿಮೀ ಉದ್ದದ ಡಬಲ್ ಡೆಕ್ಕರ್ ಕಾರಿಡಾರ್ ನಿರ್ಮಾಣ ಮಾಡಲು ಬಿಎಂಎಆರ್ ಸಿಎಲ್ ಅಧ್ಯಯನ ಆರಂಭಿಸಿದೆ. ಕೆ.ಆರ್.ಪುರಂ ಐಟಿಐ ಭವನದಿಂದ ಟಿಸಿ ಪಾಳ್ಯ ಗೇಟ್, ಭಟ್ಟರಹಳ್ಳಿ ಜಂಕ್ಷನ್, ಮೇಡಿಹಳ್ಳಿ ಜಂಕ್ಷನ್, ಆವಲಹಳ್ಳಿ, ಬೂದಿಗೆರೆ ಕ್ರಾಸ್, ಕಾಟಂನಲ್ಲೂರು ಗೇಟ್ ಫ್ಲೈ ಓವರ್, ಹೊಸಕೋಟೆ ಟೋಲ್ ಪ್ಲಾಜಾ, ಕೆಇಬಿ ಸರ್ಕಲ್, ಸರ್ಕಾರಿ ಆಸ್ಪತ್ರೆವರೆಗೂ ಮೆಟ್ರೋ ಸಂಪರ್ಕ ಸಿಗಲಿದೆ. ಒಟ್ಟು 16.3 ಕಿ.ಮೀ. ಉದ್ದ ಹಾಗೂ 11 ನಿಲ್ದಾಣಗಳು ಸಿಗಲಿವೆ. ಇದರಿಂದ ಈ ಭಾಗದ ನಾಗರಿಕರ ಜೊತೆಗೆ ಐಟಿ ವಲಯದ ಉದ್ಯೋಗಿಗಳಿಗೂ ಸಾಕಷ್ಟು ಅನುಕೂಲ ಆಗಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.(ಫೋಟೋ: 1 ಹೆಚ್ಎಸ್ಕೆ 6 - ಶಾಸಕ ಶರತ್ ಬಚ್ಚೇಗೌಡ ಭಾವಚಿತ್ರ)
ಫೋಟೋ: 1 ಹೆಚ್ಎಸ್ಕೆ 5ಕೆ.ಆರ್.ಪುರಂ- ಹೊಸಕೋಟೆವರೆಗೆ ನೇರಳೆ ಬಣ್ಣದ ಮೆಟ್ರೋ ವಿಸ್ತರಣೆಗೆ ಬಿಎಂಆರ್ಸಿಎಲ್ ಸಿದ್ದಪಡಿಸಿರುವ ನಿಲ್ದಾಣಗಳ ನಕ್ಷೆ.