ಗಜೇಂದ್ರಗಡ: ಮಧ್ಯಮ ವರ್ಗದ ಜನರನ್ನು ಆರ್ಥಿಕ ಸದೃಢವಾಗಿಸಲು ಸಹಕಾರ ಸಂಘಗಳು ಶ್ರಮಿಸುತ್ತಿವೆ. ಅದೇ ರೀತಿ ಮಧ್ಯಮ ವರ್ಗದವರ ಆರ್ಥಿಕ ಪ್ರಗತಿಗಾಗಿ ಸಹಕಾರ ಪತ್ತಿನ ಸಂಘವನ್ನು ಆರಂಭಿಸಿದ್ದೇವೆ ಎಂದು ಸೂಳೇಭಾವಿ ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ ತಿಳಿಸಿದರು.
೧೯೯೬ರಲ್ಲಿ ಬಾಗಲಕೋಟೆ ಜಿಲ್ಲೆಯ ಸೂಳೇಭಾವಿ ಸಣ್ಣ ಗ್ರಾಮದಲ್ಲಿ ಅಂದಾಜು ₹೩,೮೬ ಲಕ್ಷ ಷೇರು ಬಂಡವಾಳದಲ್ಲಿ ೬೦೦ ಸದಸ್ಯರನ್ನು ಒಳಗೊಂಡು ಗಾಯತ್ರಿ ಪತ್ತಿನ ಸಹಕಾರ ಸಂಘವು ಗ್ರಾಹಕರ ವಿಶ್ವಾಸ ಹಾಗೂ ಸಿಬ್ಬಂದಿ ಪ್ರಾಮಾಣಿಕ ಕೆಲಸ ಮತ್ತು ಆಡಳಿತ ಮಂಡಳಿತ ಸಹಕಾರದಿಂದ ೪೦ ಶಾಖೆಗಳನ್ನು ತೆರೆದಿದೆ. ಗಜೇಂದ್ರಗಡ, ರೋಣ ಹಾಗೂ ಬೆಟಗೇರಿ ಸೇರಿ ೧೦ ಶಾಖೆಗಳಲ್ಲಿ ಸ್ವಂತ ಕಟ್ಟಡಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಎಲ್ಲ ಶಾಖೆಗಳನ್ನು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಗುರಿ ಹೊಂದಿದ್ದೇವೆ. ಅಲ್ಲದೆ ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಗ್ರಾಹಕರಿಗೆ ಆರೋಗ್ಯ ಸೌಲಭ್ಯ ಸೇರಿ ಇತರ ಯೋಜನೆಗಳ ಜಾರಿ ಕುರಿತು ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ್ ಮಾತನಾಡಿ, ಬ್ಯಾಂಕ್ ಅಲ್ಪ ಸಮಯದಲ್ಲಿ ಕಾರ್ಮಿಕರಿಗೆ, ಬೀದಿಬದಿ ವ್ಯಾಪಾರಿಗಳು ಸೇರಿ ಸಾವಿರಾರು ಜನರಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢವಾಗಿಸಲು ಶ್ರಮಿಸುತ್ತಿರುವ ಗಾಯತ್ರಿ ಪತ್ತಿನ ಸಹಕಾರ ಸಂಘವು ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಜನರ ಬದುಕನ್ನು ಸುಂದರಗೊಳಿಸಲಿ ಎಂದರು.ಡಾ. ಸಂಜಯ್ ಹೊಸಮಠ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ೪ ಜಿಲ್ಲೆಗಳಲ್ಲಿನ ಬ್ಯಾಂಕ್ಗಳ ಸಾಲಿನಲ್ಲಿ ಗಾಯತ್ರಿ ಪತ್ತಿನ ಸಹಕಾರ ಸಂಘವು ಒಂದಾಗಿದ್ದು, ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದ ಸೌಲಭ್ಯಗಳನ್ನು ಗ್ರಾಹಕರಿಗೆ ತಲುಪಿಸುವ ದೆಸೆಯಲ್ಲಿ ಯೋಜನೆಗಳನ್ನು ಹಾಕಿಕೊಳ್ಳಲಿ ಎಂದರು.