ಕಾಫಿ ತೋಟಗಳಿಗೆ ರಸಗೊಬ್ಬರ, ಗೊಟ್ಟಿಗೆ ಗೊಬ್ಬರ ನೀಡುವ ಕೆಲಸ ಆರಂಭ । ಭತ್ತದ ನಾಟಿ ಪೂರ್ವ ಸಿದ್ಧತೆ । ಕಾರ್ಮಿಕರಿಗೆ ಬೇಡಿಕೆ
ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನಲ್ಲಿ ತೋಟದ ಕಾರ್ಮಿಕರೆ ಬೆಳೆಗಾರರನ್ನು ನಿಯಂತ್ರಿಸುತ್ತಿದ್ದಾರೆ. ಹೌದು ಇದು ಆಶ್ಚರ್ಯವಾದರು ಸತ್ಯ. ಸದ್ಯ ಕಾಫಿ ತೋಟದಲ್ಲಿ ಮರಗಸಿ, ಗಿಡಗಸಿ ಹಾಗೂ ಕಚಡಾ ಹೊಡೆಯುವ ಪ್ರಕ್ರಿಯೆ ನಡೆಯುತ್ತಿದ್ದರೆ ಕಾಳು ಮೆಣಸು ಸಂರಕ್ಷಣೆಯ ಕಾರ್ಯಗಳೂ ಆರಂಭವಾಗಿವೆ.ಸಕಲೇಶಪುರದಲ್ಲಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ಕಾಫಿತೋಟಗಳಿಗೆ ರಸಗೊಬ್ಬರ, ಗೊಟ್ಟಿಗೆ ಗೊಬ್ಬರ ನೀಡುವ ಕೆಲಸಕ್ಕೂ ಬೆಳೆಗಾರರು ಮುಂದಾಗಿದ್ದಾರೆ. ಅಲ್ಲದೆ ಭತ್ತ ನಾಟಿ ಪೂರ್ವ ಸಿದ್ದತೆಗಳಿಗೂ ಸದ್ಯ ಚಾಲನೆ ನೀಡಲಾಗಿದೆ. ಇದರಿಂದ ಕಾರ್ಮಿಕರಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಸದ್ಯ ಕಾಫಿ ಹಣ್ಣು ಕೊಯ್ಲಿನ ನಂತರ ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕದಿಂದ ಬಂದಿದ್ದ ಕಾರ್ಮಿಕರು ಗ್ರಾಮಕ್ಕೆ ಮರಳಿದ್ದು ಇವರ ಅನುಪಸ್ಥಿತಿಯಲ್ಲಿ ಸ್ಥಳೀಯ ಕಾರ್ಮಿಕರು ಈ ಎಲ್ಲ ಕೆಲಸಗಳನ್ನು ನಿರ್ವಹಿಸಬೇಕಿದೆ.
ತೋಟದ ಕಾರ್ಮಿಕರಿಗೂ ಓಟಿ:
ತೋಟದ ಕೆಲಸವನ್ನು ಸಕಾಲಿಕವಾಗಿ ಮುಗಿಸುವ ಒತ್ತಡದಲ್ಲಿರುವ ಬೆಳೆಗಾರರು ಕಾರ್ಮಿಕರಿಗೆ ಆಮಿಷ ಒಡ್ಡುವುದು ಸಹಜವಾಗಿದೆ. ಒಂದು ತೋಟದಿಂದ ಮತ್ತೊಂದು ತೋಟದಲ್ಲಿ ಕೂಲಿ ಹೆಚ್ಚಳವಿದೆ. ಮುಂಜಾನೆ ೬ ಕ್ಕೆ ಒಂದು ತೋಟದ ಕೆಲಸಕ್ಕೆ ತೆರಳುವ ಕಾರ್ಮಿಕರು ೧೦ ಗಂಟೆಗೆ ಮರಳಿದರೆ. ೧೧ ರಿಂದ ೨ ಗಂಟೆಗಳವರಗೆ ಮತ್ತೊಂದು ತೋಟ ಹಾಗೂ ಮಧ್ಯಾಹ್ನ ೩ ರಿಂದ ೬ ಗಂಟೆವರಗೆ ಮತ್ತೊಂದು ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ದಿನಕ್ಕೆ ಮೂರರಿಂದ ನಾಲ್ಕು ಗಂಟೆಗಳ ಕೆಲಸ ನಿರ್ವಹಿಸುವ ಕಾರ್ಮಿಕರು ಹೆಚ್ಚುವರಿ ಕೆಲಸ ನಿರ್ವಹಣೆ ಮಾಡಲು ಗಂಟೆ ಲೆಕ್ಕದಲ್ಲಿ ಕೂಲಿ ಕೇಳುತ್ತಿದ್ದು ಮಹಿಳಾ ಕಾರ್ಮಿಕರಿಗೆ ಒಂದು ಗಂಟೆಗೆ ನೂರು ರು., ಪುರುಷರಿಗೆ ೧೫೦ ರಿಂದ ೨೦೦ ರು. ಲೆಕ್ಕದಲ್ಲಿ ಕೂಲಿ ನಿಗದಿಪಡಿಸಲಾಗಿದೆ.
ತೀವ್ರ ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಬೆಳೆಗಾರರು ಕಾರ್ಮಿಕರಿಗೆ ಮಿಮೆ, ಮನೆಯಿಂದ ತೋಟಕ್ಕೆ ಕರೆತರಲು ವಾಪಸ್ಸು ಬಿಡಲು ವಾಹನ ಸೌಲಭ್ಯ ಸೇರಿದಂತೆ ಹಲವು ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಗ್ರಾಮದಲ್ಲೆ ಕೆಲಸವಿದ್ದರೂ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ವಾಹನಗಳಲ್ಲಿ ತೆರಳುವುದು ಕಾರ್ಮಿಕರಿಗೆ ಹವ್ಯಾಸವಾಗಿದೆ.
ಸದ್ಯ ಮೇ ತಿಂಗಳ ಮಧ್ಯದ ವಾರದಿಂದ ಮಳೆ ಆಗಾಗ ಸುರಿಯುತ್ತಿರುವುದರಿಂದ ಏಕಕಾಲದಲ್ಲಿ ಕಾಫಿ ಹಾಗೂ ಭತ್ತದ ಗದ್ದೆಗಳಲ್ಲಿ ಕೆಲಸ ಆರಂಭವಾಗಿದೆ. ಜೂನ್ ತಿಂಗಳ ಆರಂಭದಿಂದ ಸುರಿಯುತ್ತಿರುವ ಜಡಿ ಮಳೆ ಕಾಫಿ ತೋಟದ ಕೆಲಸಕ್ಕೆ ತಡೆ ಒಡ್ಡಿದೆ. ಇದರಿಂದಾಗಿ ಕಾಳು ಮೆಣಸು ಬಳ್ಳಿಗಳ ಸಂರಕ್ಷಣೆ, ರಸಗೊಬ್ಬರ ಹಾಗೂ ಕೊಟ್ಟಿಗೆ ಗೊಬ್ಬರ ನೀಡುವ ಕೆಲಸಕ್ಕೆ ತೊಂದರೆಯಾಗಿದ್ದು ಕನಿಷ್ಠ ಒಂದು ವಾರ ಮಳೆ ನಿಂತರೆ ಸಾಕು ಎಂಬ ಮನಸ್ಥಿತಿಗೆ ಬೆಳೆಗಾರರು ಬಂದಿದ್ದಾರೆ.
ರವಿಕುಮಾರ್. ಕಾಫಿಬೆಳೆಗಾರ. ಜಾನೆಕೆರೆ. .
ಸದ್ಯ ಕಾಫಿ ತೋಟದಲ್ಲಿ ಮುಂಗಾರು ಪೂರ್ವ ಸಾಕಷ್ಟು ಕೆಲಸಗಳು ಬಾಕಿ ಇದ್ದು ಕಾರ್ಮಿಕರ ಸಮಸ್ಯೆ ಕಾರಣ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ.ಬಸವರಾಜ್. ಎಸ್ಎಲ್ಒ ಕಾಫಿ ಮಂಡಳಿ. ಮಠಸಾಗರ.