ಕನ್ನಡಪ್ರಭ ವಾರ್ತೆ ಮುಧೋಳ
ಮುಧೋಳ ರೈತ ಹೋರಾಟಗಾರರು ಯಾವತ್ತೂ ಬೆಂಕಿ ಹಚ್ಚುವ ಕೆಲಸ ಮಾಡುವುದಿಲ್ಲ. ಅವರು ಶಾಂತರೀತಿಯಿಂದ ನ್ಯಾಯಯುತ ಬೇಡಿಕೆಗಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ನಮ್ಮ ಹೋರಾಟವು ಮಾನವೀಯ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಂಡು ಬಂದಿದೆ ಎಂದು ಕಬ್ಬು ಬೆಳೆಗಾರರ ಹೋರಾಟಗಾರ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ಹೇಳಿದರು. ನಗರದ ಕಾನಿಪ ಸಂಘದ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇತ್ತೀಚೆಗೆ ಸಮೀರವಾಡಿ ಗೋಧಾವರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿದ್ದ ಕಬ್ಬು ತುಂಬಿದ ಟ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಿರುವ ಪ್ರಕರಣಕ್ಕೆ ನಮ್ಮ ಮುಧೋಳ ಕಬ್ಬು ಹೋರಾಟಗಾರರಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ವಿನಾಕಾರಣ ಪೊಲೀಸರು ನಮ್ಮ ಹೋರಾಟಗಾರರನ್ನು ಬಂಧಿಸುತ್ತಿದ್ದಾರೆ. ಇದು ಮುಂದುವರೆದರೆ ನಾವು ಜೈಲ್ ಭರೋ ಚಳವಳಿ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು.ಬೆಂಕಿ ಹಚ್ಚಿರುವವರನ್ನು ಪೊಲೀಸರು ಸಮಗ್ರ ತನಿಖೆ ಮಾಡಿ ಬಂಧಿಸಲು ನಮ್ಮದು ಯಾವುದೇ ರೀತಿಯ ಅಭ್ಯಂತರವಿಲ್ಲ. ತಪ್ಪು ಮಾಡಿದವರು ಯಾರೇ ಇರಲಿ ಅವರಿಗೆ ಕಾನೂನಿನ ಪ್ರಕಾರ ಕ್ರಮ ಜರುಗಿಸಲಿ ಎಂದು ಒತ್ತಾಯಿಸಿದರು.
ಈ ಹಿಂದೆ ನಮ್ಮ ಹೋರಾಟಗಾರರು ಸಕ್ಕರೆ ಕಾರ್ಖಾನೆಗೆ ತೆರಳಿ ರೈತರ ಬಾಕಿ ಉಳಿಸಿಕೊಂಡಿರುವುದನ್ನು ಪೂರ್ಣ ಪ್ರಮಾಣದಲ್ಲಿ ಚುಕ್ತಾ ಮಾಡಬೇಕು ಮತ್ತು ಪ್ರಸಕ್ತ ಸಾಲಿಗೆ ಕಬ್ಬಿನ ಬೆಲೆ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ನಾವು ಪ್ರತಿಭಟನೆ ಮಾಡಿದ್ದೇವೆ. ಆದರೆ ಬೆಂಕಿ ಹಚ್ಚುವ ಕೆಲಸ ಮಾತ್ರ ನಾವು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.ಸಮೀರವಾಡಿ ಗೋಧಾವರಿ ಸಕ್ಕರೆ ಕಾರ್ಖಾನೆಯ ಆವರಣಲ್ಲಿ ಟ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಿರುವ ಘಟನೆಗೆ ಕಾರ್ಖಾನೆಯವರೇ ಜವಾಬ್ದಾರರು. ಮುಧೋಳ ರೈತ ಹೋರಾಟಗಾರರನ್ನು ಹತ್ತಿಕ್ಕುವ ಉದ್ದೇಶ ಅವರದಾಗಿತ್ತು. ಈಗ ಮುಧೋಳ ಹೋರಾಟಗಾರರ ಮೇಲೆ ಗೂಬೆ ಕೂಡ್ರಿಸುವ ಕೆಲಸ ನಡೆದಿದೆ. ಮುಧೋಳ ರೈತ ಹೋರಾಟಗಾರರನ್ನು ಬಂಧಿಸುವಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತವೇ ಕಾರಣವಾಗಿದೆ. ಇದರ ವಿರುದ್ಧ ನಾವು ಮತ್ತೇ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಧೋಳ ರೈತ ಹೋರಾಟಗಾರರಿಂದ ಜಿಲ್ಲೆಯ ನಾಲ್ಕು ಸಕ್ಕರೆ ಕಾರ್ಖಾನೆಯವರಿಂದ ₹125 ಕೋಟಿ ಬಾಕಿ ಹಣವನ್ನು ವಸೂಲಿ ಮಾಡಿದ್ದೇವೆ. ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ ₹3300 ಬೆಲೆ ಕೊಡಿಸುವಲ್ಲಿ ನಮ್ಮ ಹೋರಾಟ ಯಶಸ್ವಿಯಾಗಿದೆ. ಪ್ರಸಕ್ತ ಸಾಲಿಗೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ 14 ದಿನದೊಳಗಾಗಿ ಕಬ್ಬಿನ ಬಿಲ್ ಪಾವತಿಸಬೇಕು. ಕಬ್ಬಿನ ತೂಕದಲ್ಲಿ ಯಾವುದೇ ರೀತಿಯ ಮೋಸ ಮಾಡಬಾರದು. ಕಬ್ಬಿನ ರಿಕವರಿಯನ್ನು ತತಕ್ಷಣವೇ ರೈತರಿಗೆ ತಿಳಿಸಬೇಕೆಂದು ನಾವು ಒತ್ತಾಯಿಸಿದ್ದೇವೆ ಎಂದು ಹೇಳಿದರು.ಈ ವೇಳೆ ರೈತ ಮುಖಂಡರಾದ ಹಣಮಂತ ನಬಾಬ, ದುಂಡಪ್ಪ ಯರಗಟ್ಟಿ, ಮಹೇಶ ಪಾಟೀಲ, ಪರಸು ಮುರನಾಳ ಇತರರು ಸುದ್ದಿಗೋಷ್ಠಿಯಲ್ಲಿದ್ದರು.