ಕನ್ನಡಪ್ರಭ ವಾರ್ತೆ ಹಾಸನ
ನಗರದ ಎಂ. ಕೃಷ್ಣ ಕಾನೂನು ಕಾಲೇಜಿನ ಸಭಾಂಗಣದಲ್ಲಿ ರೋಟರಿ ಕ್ಲಬ್ ಆಫ್ ಕ್ವಾಂಟಾ ಹಾಸನದ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಹುಲಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ಬಸವರಾಜು ಅವರು, ಭಾರತದಲ್ಲಿ ಪ್ರಸ್ತುತ ಸುಮಾರು 3,680 ಹುಲಿಗಳಿದ್ದು, ಮಧ್ಯಪ್ರದೇಶದಲ್ಲಿ 785 ಹುಲಿಗಳೊಂದಿಗೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 563 ಹುಲಿಗಳಿದ್ದು ಎರಡನೇ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ. ಆದರೆ ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಅನುಗುಣವಾಗಿ ಅವುಗಳಿಗೆ ಅಗತ್ಯವಾದ ಅರಣ್ಯ ಪ್ರದೇಶ, ಆಹಾರ, ನೀರು ಹಾಗೂ ಸುರಕ್ಷಿತ ವಾಸಸ್ಥಳದ ವಿಸ್ತರಣೆ ಆಗುತ್ತಿಲ್ಲ ಎಂಬುದು ಆತಂಕಕಾರಿ ವಿಚಾರ. ಭಾರತದಲ್ಲಿ ಸುಮಾರು 84,487 ಚದರ ಕಿಲೋಮೀಟರ್ ಹಾಗೂ ಕರ್ನಾಟಕದಲ್ಲಿ 5,406 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹುಲಿ ಸಂರಕ್ಷಣಾ ಪ್ರದೇಶಗಳಿವೆ. ಒಂದು ಹುಲಿ ಸಾಮಾನ್ಯವಾಗಿ 60ರಿಂದ 100 ಚದರ ಕಿಲೋಮೀಟರ್ ವ್ಯಾಪ್ತಿಯನ್ನು ತನ್ನ ಆವಾಸ ಪ್ರದೇಶವಾಗಿ ಬಳಸುತ್ತದೆ. ಆದ್ದರಿಂದ ಅರಣ್ಯ ನಾಶವನ್ನು ತಡೆಯುವುದು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ಹುಲಿ ಕೇವಲ ಕಾಡಿನ ಪ್ರಾಣಿ ಮಾತ್ರವಲ್ಲ, ಅದು ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಪಾಡುವ ಪ್ರಮುಖ ಜೀವಿ. ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಕಾಡಿನ ಸಸ್ಯ ಸಂಪತ್ತನ್ನು ರಕ್ಷಿಸುತ್ತದೆ. ಹುಲ್ಲುಗಾವಲುಗಳು ಉಳಿದಾಗ ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ ಹಾಗೂ ಇಡೀ ಪರಿಸರ ವ್ಯವಸ್ಥೆ ಆರೋಗ್ಯಕರವಾಗಿರುತ್ತದೆ. ಆದ್ದರಿಂದ ಹುಲಿಯ ಆರೋಗ್ಯಕರ ಅಸ್ತಿತ್ವವೇ ಅರಣ್ಯದ ಆರೋಗ್ಯದ ಸಂಕೇತವಾಗಿದೆ ಎಂದು ಅವರು ವಿವರಿಸಿದರು.ಕಾರ್ಯಕ್ರಮದಲ್ಲಿ ಡಾ. ಎಂ.ಕೆ. ಪಾರ್ಥ ಹರಿಹೆ ಮಾತನಾಡಿ, ವಿಶ್ವ ಹುಲಿ ದಿನಾಚರಣೆಯ ಉದ್ದೇಶ ಕೇವಲ ಆಚರಣೆಗೆ ಸೀಮಿತವಲ್ಲ; ಅರಣ್ಯ ಸಂರಕ್ಷಣೆಯ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ ಎಂದರು. ದೇವರು ನೀಡಿರುವ ನೈಸರ್ಗಿಕ ಸಂಪತ್ತನ್ನು ನಾಶಪಡಿಸಿದರೆ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಲು ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬರೂ ಅರಣ್ಯದ ಮಹತ್ವವನ್ನು ಅರಿತು ಅದನ್ನು ಸಂರಕ್ಷಿಸುವ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಪ್ರೊಜೆಕ್ಟರ್ ಮೂಲಕ ಅರಣ್ಯದ ಜೈವ ವೈವಿಧ್ಯತೆ, ಹುಲಿಗಳ ಜೀವನ ಶೈಲಿ ಹಾಗೂ ವನ್ಯಜೀವಿ ಸಂರಕ್ಷಣೆಯ ಮಹತ್ವವನ್ನು ಬಿಂಬಿಸುವ ವಿಶೇಷ ಶ್ಯಾವಳಿಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಭಾಗವಹಿಸಿದ್ದವರು ಕಾರ್ಯಕ್ರಮದ ಮೂಲಕ ವನ್ಯಜೀವಿ
ಕಾರ್ಯಕ್ರಮದಲ್ಲಿ ಎಂ. ಕೃಷ್ಣ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪುನಿತ ಹೆನ್ರಿ, ರೋಟರಿ ಕ್ಲಬ್ ಆಫ್ ಕ್ವಾಂಟಾ ಹಾಸನದ ಕಾರ್ಯದರ್ಶಿ ಯತೀಶ್, ಅರುಣ್ ಕುಮಾರ್, ಎಚ್. ಕೆ. ರವಿ, ಪ್ರಸನ್ನ, ಚಂದ್ರಶೇಖರ್, ಕೆ. ಆರ್. ಸುರೇಶ್, ಯೋಗಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.