ಬಡತನ ಮೆಟ್ಟಿ ನಿಲ್ಲುವುದೇ ಬದುಕಿನ ಗುರಿ: ಡಾ.ಕೋರೆ

KannadaprabhaNewsNetwork |  
Published : Nov 03, 2025, 03:15 AM IST
ಸುಭಾಸ್ ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ನೂತನವಾಗಿ ನಿರ್ಮಾಣ ಮಾಡಿರುವ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯಕ್ಕೇ 60 ಕ್ಕೂ ಹೆಚ್ಚು ಸಮಾಜದ ಬಡ ವಿದ್ಯಾರ್ಥಿನಿಯರಿಗೆ ಪ್ರವೇಶ | Kannada Prabha

ಸಾರಾಂಶ

ಬಸವಣ್ಣವರ ತತ್ವ ಸಿದ್ಧಾಂತಗಳನ್ನ ಮನನ ಮಾಡಿಕೊಂಡು ಜೀವನ ರೂಪಿಸಿಕೊಳ್ಳುವುದು ನಿಮ್ಮೆಲ್ಲರ ಧ್ಯೇಯವಾಗಬೇಕೆಂದು ಡಾ.ಕೋರೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿದ್ಯಾರ್ಥಿನಿಯರು ಔದ್ಯಮಿಕ ಜಗತ್ತಿಗೆ ಅಗತ್ಯವಾದ ಕೋರ್ಸ್‌ಗಳನ್ನು ಅಧ್ಯಯನ ಮಾಡಿ ಜೀವನವನ್ನು ರೂಪಿಸಿಕೊಳ್ಳಬೇಕು. ಇಂದು ವೈದ್ಯಕೀಯ, ತಾಂತ್ರಿಕ ಕ್ಷೇತ್ರದಲ್ಲಿ ಹಲವಾರು ಅಲೈಡ್ ಕೋರ್ಸಳು ಇವೆ. ಇಂತಹ ಕೋರ್ಸ್ ಗಳಿಂದ ಮಹಿಳೆಯರು ಸ್ವಾವಲಂಬಿ ಜೀವನವನ್ನು ನಡೆಸಬಹುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

ಸುಭಾಸ್ ನಗರದಲ್ಲಿ ಅ.ಭಾ.ವೀ. ಲಿಂಗಾಯತ ಮಹಾಸಭೆಯು ನೂತನವಾಗಿ ನಿರ್ಮಿಸಿರುವ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೆಳಗಾವಿಯಲ್ಲಿ ವಿದ್ಯಾರ್ಜನೆಗಾಗಿ ಆಗಮಿಸುವ ಸಮಾಜದ ಬಡ ವಿದ್ಯಾರ್ಥಿನಿಯರಿಗೆ ಉಚಿತ ವಸತಿ ನಿಲಯ ನಿರ್ಮಾಣ ಮಾಡಿಕೊಡಬೇಕೆಂಬುದು ಬಹುದಿನಗಳ ಕನಸಾಗಿತ್ತು. ಅದನ್ನು ಸವಾಲಾಗಿ ಸ್ವೀಕರಿಸಿ, ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಹಕಾರದಿಂದ ಸುಭಾಷ್ ನಗರದಲ್ಲಿ ಸ್ಥಳ ಪಡೆದು ಅನೇಕ ದಾನಿಗಳ ಸಹಾಯದಿಂದ ಸುಸಜ್ಜಿತ ಹಾಗೂ ಬೃಹತ್ ವಸತಿ ನಿಲಯ ಸಿದ್ಧಪಡಿಸಿ ಇಂದು ಬಡವಿದ್ಯಾರ್ಥಿನಿಯರಿಗೆ ಹಸ್ತಾಂತರಿಸುತ್ತಿರುವುದು ಸಂತೋಷವೆನಿಸಿದೆ ಎಂದರು.

ಬಡತನ ಎಲ್ಲರಿಗೂ ಇರುತ್ತದೆ ಅದನ್ನು ಮೆಟ್ಟಿ ನಿಲ್ಲುವುದು ನಮ್ಮ ಬದುಕಿನ ಗುರಿಯಾಗಬೇಕು. ವಿದ್ಯಾರ್ಥಿನಿಯರು ಯಾವ ಕಾರಣಕ್ಕೂ ಧೃತಿಗೆಡದೆ ಉತ್ತಮವಾದ ಕೋರ್ಸ್‌ಗಳನ್ನು ಮಾಡಿ ಯಶಸ್ವಿಯಾಗಿ ವಿದ್ಯಾಭ್ಯಾಸವನ್ನು ಪೂರೈಸಿ ಸ್ವಾವಲಂಬಿ ಜೀವನ ನಡೆಸಿದ್ದೆ ಆದರೆ ನಮ್ಮ ಉದ್ದೇಶ ಸಫಲವಾಗುವುದು. ಬಸವಣ್ಣವರ ತತ್ವ ಸಿದ್ಧಾಂತಗಳನ್ನ ಮನನ ಮಾಡಿಕೊಂಡು ಜೀವನ ರೂಪಿಸಿಕೊಳ್ಳುವುದು ನಿಮ್ಮೆಲ್ಲರ ಧ್ಯೇಯವಾಗಬೇಕೆಂದು ಡಾ.ಕೋರೆ ಹೇಳಿದರು.

ಜಿಲ್ಲಾ ಘಟಕದ ಉಪಾಧ್ಯಕ್ಷ ಹಿರಿಯ ನ್ಯಾಯವಾದಿ ಎಂ.ಬಿ. ಜಿರಳಿ ಮಾತನಾಡಿ, ನಮ್ಮ ಸಮಾಜವು ಮಹಿಳೆಯರಿಗೆ ವಿದ್ಯಾಭ್ಯಾಸಕ್ಕಾಗಿ ಎಲ್ಲ ರೀತಿಯ ಅವಕಾಶ ಮಾಡಿಕೊಡುತ್ತಿದೆ. ಮಹಿಳೆಯರು ಸಮಾಜದ ಮುನ್ನೆಲೆಗೆ ಬರಬೇಕು ಎಂಬುದು ಬಸವಾದಿ ಶಿವಶರಣರ ಸಂಕಲ್ಪವಾಗಿತ್ತು. ಇಂದು ನಮ್ಮ ಮಹಾಸಭೆಯು ಡಾ.ಕೋರೆಯವರ ನೇತೃತ್ವದಲ್ಲಿ ಉಚಿತ ವಸತಿ ನಿಲಯ ನಿರ್ಮಿಸಿ ನಿಮಗೆಲ್ಲ ಅನುಕೂಲ ಕಲ್ಪಿಸಿದೆ. ಇದರ ಪ್ರಯೋಜನವನ್ನು ಪಡೆಯಬೇಕು. ನಮ್ಮ ಸಂಸ್ಕಾರಗಳನ್ನು ಮರೆಯಬಾರದು. ಕಷ್ಟಪಟ್ಟು ಓದಿ ಯಶಸ್ಸಿನ ಮೆಟ್ಟಲು ಹತ್ತಿದರೆ ಕೋರೆ ಅವರ ಶ್ರಮ ಸಾರ್ಥಕವಾಗುವುದು ಎಂದು ಹೇಳಿದರು.

ಪ್ರಸ್ತಾವಿಕ ನುಡಿಗಳನ್ನಾಡಿದ ಉಪಾಧ್ಯಕ್ಷ ಡಾ.ಗುರುದೇವಿ ಹುಲೆಪ್ಪನವರಮಟ, ಡಾ.ಕೋರೆಯವರು ಅಗಾಧವಾದದ್ದನ್ನು ಸಾಧಿಸಿ ತೋರಿಸುತ್ತಾರೆ ಎನ್ನುವುದಕ್ಕೆ ಈ ಉಚಿತ ವಿದ್ಯಾರ್ಥಿ ನಿಲಯ ಸಾಕ್ಷಿಯಾಗಿ ನಿಂತಿದೆ. ವೀರಶೈವ ಲಿಂಗಾಯತ ಸಮಾಜಕ್ಕೆ ಅವರು ನೀಡಿದ ಕೊಡುಗೆ ಬಹುದೊಡ್ಡದು. ಮಹಾಸಭೆಯ ಎಲ್ಲಾ ರಚನಾತ್ಮಕ ಕಾರ್ಯಗಳ ಹಿಂದೆ ಕೋರೆಯವರ ಕೊಡುಗೆ ಅಪಾರವಾಗಿದೆ. ಬಡ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಆಶ್ರಯ ಮಾಡಿಕೊಡಬೇಕೆಂಬ ಅವರ ಸಂಕಲ್ಪ ಇಂದು ಈಡೇರಿದೆ. ಅವರ ಜೊತೆಗೆ ಹಗಲಿರುಲು ಶ್ರಮಿಸಿದ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದವರ ಕೊಡುಗೆ ಅಲ್ಲಗಳಿವೆಂತಿಲ್ಲ. ವಿದ್ಯಾರ್ಥಿನಿಯರು ನಿರಂತರವಾಗಿ ಓದಿ ಈ ವಸತಿ ನಿಲಯದಲ್ಲಿ ಜೀವನ ರೂಪಿಸಿಕೊಳ್ಳಬೇಕೆಂದರು.

ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ವಸತಿ ನಿಲಯದ ನಿಯಮಗಳನ್ನು ವಿದ್ಯಾರ್ಥಿನಿಯರು ಯಾವ ಕಾರಣಕ್ಕೂ ಉಲ್ಲಂಘಿಸಬಾರದು. ಓದಿನೆಡೇಗೆ ಹೆಚ್ಚಿನ ಗಮನಹರಿಸಿ, ತಂದೆ ತಾಯಿಗಳ ಕನಸನ್ನು ಸಾಕಾರಗೊಳಿಸಬೇಕು. ಕಳೆದ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ಡಾ.ಕೋರೆಯವರ ಸಾರಥ್ಯದಲ್ಲಿ ಈ ವಸತಿ ನಿಲಯ ರೂಪಿಸಲಾಗಿದೆ. ತಾವೆಲ್ಲ ಉತ್ತಮವಾಗಿ ಕಲಿತು ಉದ್ಯೋಗ ಪಡೆದು ಸಮಾಜಕ್ಕೆ ಕೀರ್ತಿ ತರಬೇಕೆಂದರು.

ಅಮೆರಿಕದ ಖ್ಯಾತ ಉದ್ದಿಮೆದಾರ ರವಿಶಂಕರ್ ಭೂಪಲಾಪುರೆ, ಕೋರೆಯವರ ಸೇವೆ ಕೊಂಡಾಡುತ್ತಾ, ಸಮಾಜದ ಹೆಣ್ಣು ಮಕ್ಕಳಿಗೆ ಕಲಿಕೆಗಾಗಿ ಮಾಡಿರುವ ಈ ಸೇವೆ ಚಿರಸ್ಮರಣೀಯವಾಗಿದೆ. ವಸತಿ ನಿಲಯದಲ್ಲಿರುವ ಈ ಎಲ್ಲ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಊಟದ ವ್ಯವಸ್ಥೆಯ ಖರ್ಚು ವೆಚ್ಚವನ್ನು ನೋಡಿಕೊಳ್ಳುವುದಾಗಿ ಹೇಳಿದರು. ಇದೇ ವೇಳೆ 60ಕ್ಕೂ ಹೆಚ್ಚು ಸಮಾಜದ ಬಡ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಲಾಯಿತು. ಆಶಾ ಯಮಕನಮರಡಿ ನಿರೂಪಿಸಿದರು. ಆಶಾ ಪ್ರಭಾಕರ್ ಕೋರೆ, ಜ್ಯೋತಿ ಬದಾಮಿ, ರಮೇಶ್ ಕಳಸಣ್ಣವರ, ಸೋಮಲಿಂಗ ಮಾವಿನಕಟ್ಟಿ, ಎಂ.ವೈ.ಮೇಣಸಿನಕಾಯಿ, ಬಾಲಚಂದ್ರ ಬಾಗಿ, ಉಮೇಶ್ ಬಾಳಿ ಮಹಾಸಭೆಯ ಪದಾಧಿಕಾರಿಗಳು, ಪ್ರವೇಶ ಪಡೆದ ವಿದ್ಯಾರ್ಥಿನಿಯರು ಹಾಗೂ ಪಾಲಕರು ಉಪಸ್ಥಿತರಿದ್ದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ