ಚಿತ್ರದುರ್ಗ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ಪೂಜಾರಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತಿಪ್ಪೇಹಳ್ಳಿ (ಹೊನ್ನಿನ ಹಳ್ಳ) ಹತ್ತಿರ ಚಿನ್ನಹಗರಿ ನದಿ ಬಳಿ 2026ರ ಜನವರಿ 15ರಂದು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಆದಿವಾಸಿ ಮ್ಯಾಸ ನಾಯಕರ ಚಿನ್ನಹಗರಿ ಉತ್ಸವ-2026 ಹಮ್ಮಿಕೊಳ್ಳಲಾಗಿದೆ ಎಂದು ಮ್ಯಾಸಬೇಡ (ಮ್ಯಾಸನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಡಾ.ಗೆರೆಗಲ್ ಪಾಪಯ್ಯ ತಿಳಿಸಿದರು. ಇಲ್ಲಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮ್ಯಾಸಬೇಡ (ಮ್ಯಾಸನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಮತ್ತು ಚಿನ್ನಹಗರಿ ಪ್ರಕಾಶನ ಹಾಗೂ ಗಾದ್ರಿ ಪಾಲನಾಯಕ ದೇವಸ್ಥಾನ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಉತ್ಸವ ಆಚರಿಸಲಾಗುತ್ತಿದೆ. ಚಿನ್ನಹಗರಿ ಉತ್ಸವ-2026ರ ಅಂಗವಾಗಿ ಡಿ.18 ರಂದು ಚಿತ್ರದುರ್ಗ ನಗರದ ರಾಜವೀರ ಮದಕರಿ ನಾಯಕರ ಪ್ರತಿಮೆ ಬಳಿ ಉತ್ಸವದ ಪೋಸ್ಟರ್ ಬಿಡುಗಡೆ ಮಾಡಲಾಗುವುದು ಎಂದರು. ಮ್ಯಾಸಬೇಡ (ಮ್ಯಾಸನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ದೊಡ್ಡಮನಿ ಪ್ರಸಾದ್ ಮಾತನಾಡಿ, ಮ್ಯಾಸ ನಾಯಕರನ್ನು ಪರಿಶಿಷ್ಟ ಪಂಗಡಕ್ಕೆ ನಾಯಕ ಎಂಬ ಸಮನಾರ್ಥಕ ಪದ ಅಡಿಯಲ್ಲಿ 1976 ರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವಾಗ, ಮ್ಯಾಸ ನಾಯಕ ಬುಡಕಟ್ಟಿಗೂ ಮತ್ತು ನಾಯ್ಕಡ ಬುಡಕಟ್ಟಿಗೂ ಸಾಮ್ಯತೆ ಇರುವ ಲಕ್ಷಣಗಳನ್ನು ಅಧ್ಯಯನ ಮಾಡಿ ಪರಿಶೀಲಿಸಲಾಗಿತ್ತು. ಈ ಎರಡೂ ಬುಡಕಟ್ಟುಗಳು ಒಂದೇ ಎಂದು ಭಾರತ ಸಂಸತ್ತು ನಮ್ಮನ್ನು ಪರಿಷ್ಟ ಪಂಗಡಕ್ಕೆ ಸೇರಿಸಿದೆ. ಈ ಅನನ್ಯ ಬಡುಕಟ್ಟು ಲಕ್ಷಣಗಳನ್ನು ಸಂರಕ್ಷಿಸಿಕೊಂಡು ಹೋಗುವುದು ಕಾರ್ಯಕ್ರಮದ ಉದ್ದೇಶ. ಬುಡಕಟ್ಟು ಲಕ್ಷಣಗಳನ್ನು ನಾಶಮಾಡಲು, ನಮ್ಮೊಳಗೆ ಅನ್ಯ ಜಾತಿಯವರು ನುಸಿಳಿದ್ದಾರೆ ಮತ್ತು ನಮ್ಮ ಮೀಸಲಾತಿ ಕದಿಯುತ್ತಿದ್ದಾರೆ. ಇದರ ಬಗ್ಗೆ ನಮ್ಮ ಮ್ಯಾಸ ನಾಯಕ ಬಂಧುಗಳನ್ನು ಎಚ್ಚರಿಸಲಾಗುವುದು ಎಂದರು. ಮ್ಯಾಸ ನಾಯಕರು ಮುಖ್ಯವಾಹಿನಿಯಿಂದ ಬೇರೆಯೇ ಮ್ಯಾಸರ ಹಟ್ಟಿಗಳಲ್ಲಿ ವಾಸವಿದ್ದಾರೆ. ನಮ್ಮದಲ್ಲದ ವೈದಿಕ ಪರಂಪರೆಯಿಂದ ದೂರ ಇದ್ದು, ಉದಿ-ಪದಿ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ. ಪೂರ್ವಜರ ಅತ್ಮಗಳು ನಮ್ಮ ದೇವರ ಎತ್ತುಗಳಲ್ಲಿ ನೆಲೆಸಿವೆ ಎಂದು ದೇವರ ಎತ್ತುಗಳನ್ನೇ ದೇವರೆಂದು ಪೂಜಿಸುತ್ತಿದ್ದಾರೆ. ಇದೇ ಧಾರ್ಮಿಕ ನಂಬಿಕೆಯು ನಾಯ್ಕಡ ಪಂಗಡಲ್ಲಿಯೂ ಇರುತ್ತದೆ. ಮ್ಯಾಸನಾಯಕ ಬಡಕಟ್ಟು ನಾಯ್ಕಡ ಆದಿವಾಸಿ ಜನಾಂಗದಿಂದ ಬೇರ್ಪಟ್ಟು ಚಿತ್ರದುರ್ಗ, ಮೊಳಕಾಲ್ಮುರು, ಕೂಡ್ಲಿಗಿ ಭಾಗಕ್ಕೆ ಅಲೆಮಾರಿಗಳಾಗಿ ಬಂದರು ಎಂದು ಸಾಂಸ್ಕೃತಿಕ ಇತಿಹಾಸ ನೆನಪಿಸಿಕೊಳ್ಳುವುದು ಈ ಉತ್ಸವದ ಆಚರಣೆ ಉದ್ದೇಶವಾಗಿದೆ ಎಂದು ತಿಳಿಸಿದರು. ವಾಲ್ಮೀಕಿ ನಾಯಕರ ಮಹಾ ವೇದಿಕೆ ರಾಜ್ಯಾಧ್ಯಕ್ಷ ರಾಜಣ್ಣ ಲಕ್ಷ್ಮೀಸಾಗರ ಮಾತನಾಡಿ, ಬುಡಕಟ್ಟು ಜನರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಎಲ್ಲಾ ಮ್ಯಾಸ ನಾಯಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.