ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮು ಗಲಾಟೆ ಮತ್ತು ಹತ್ಯೆ ತಡೆಗೆ, ಕೋಮು ಸೌಹಾರ್ದತೆ ಕದಡುವವರ ವಿರುದ್ಧ ಕ್ರಮಕ್ಕೆ ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿಪಿ) ರ್ಯಾಂಕ್ನ ಅಧಿಕಾರಿ ನೇತೃತ್ವದ ವಿಶೇಷ ಕಾರ್ಯಪಡೆಯೊಂದನ್ನು ರಚಿಸಿ ಸರ್ಕಾರ ಆದೇಶಿಸಿದೆ.
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಕೋಮು ಗಲಭೆ, ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದಾಗಿ ವಿಶೇಷ ಕ್ರಮ ಕೈಗೊಳ್ಳುವಂತೆ ಎಲ್ಲೆಡೆ ಆಗ್ರಹ ಕೇಳಿಬಂದಿತ್ತು. ಅದಕ್ಕೆ ಪೂರಕವಾಗಿ ಇದೀಗ ರಾಜ್ಯ ಸರ್ಕಾರ ವಿಶೇಷ ಕಾರ್ಯಪಡೆ ರಚಿಸಿ ಆದೇಶಿಸಿದೆ. ಹಾಲಿ ಅಸ್ತಿತ್ವದಲ್ಲಿರುವ ನಕ್ಸಲ್ ನಿಗ್ರಹ ಪಡೆ(ಎಎನ್ಎಫ್)ಯ 656 ಹುದ್ದೆಗಳಲ್ಲಿ 248 ಸಿಬ್ಬಂದಿ, ಅಧಿಕಾರಿಗಳನ್ನು ಈ ವಿಶೇಷ ಕಾರ್ಯಪಡೆಗೆ ವರ್ಗಾಯಿಸಲಾಗಿದೆ.
ಏನೇನು ಕೆಲಸ?:
ರಾಜ್ಯಮಟ್ಟದಲ್ಲಿ ಕಾರ್ಯ ನಿರ್ವಹಿಸಲಿರುವ ಈ ವಿಶೇಷ ಕಾರ್ಯಪಡೆಯು ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗದಲ್ಲಿ ತನ್ನ ಕಂಪನಿಗಳನ್ನು ಹೊಂದಿರಲಿದೆ. ಈ ಕಾರ್ಯಪಡೆ ದ್ವೇಷ ಭಾಷಣ, ಉದ್ರೇಕಕಾರಿ ಘಟನೆಗಳು, ಕೋಮು ಸಂಬಂಧಿತ ಘಟನೆಗಳ ಮೇಲೆ ನಿಗಾವಹಿಸಬೇಕಿದೆ. ಇದಕ್ಕಾಗಿ ಮಾಧ್ಯಮ, ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾವಹಿಸಲು, ಗುಪ್ತಚರ ಮಾಹಿತಿ ಸಂಗ್ರಹಿಸಲು ಮತ್ತು ಮೇಲ್ವಿಚಾರಣೆ ಮಾಡಲು ತಾಂತ್ರಿಕ ಕೋಶವನ್ನು ಒಳಗೊಂಡ ಗುಪ್ತಚರ ಘಟಕ ಹೊಂದಬೇಕು. ಸಂಭಾವ್ಯ ಕೋಮು ಹಿಂಸಾಚಾರದ ಬಗ್ಗೆ ಕಣ್ಗಾವಲು ಮತ್ತು ಮಾನವ ಗುಪ್ತಚರ ಮೂಲಕ ಎಚ್ಚರಿಕೆ ವ್ಯವಸ್ಥೆ ರಚಿಸಬೇಕು. ಮೂಲಭೂತವಾದ ಗುರುತಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಆದೇಶದಲ್ಲಿ ಸೂಚಿಸಲಾಗಿದೆ. ಅಲ್ಲದೆ, ವಲಯ ಐಜಿಪಿ ಅವರು ಕೋಮು ಗಲಭೆ ಸಂದರ್ಭದಲ್ಲಿ ವಿಶೇಷ ಕಾರ್ಯಪಡೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ತಿಳಿಸಲಾಗಿದೆ.
-ವಿಶೇಷ ಕಾರ್ಯಪಡೆಗೆ ನಿಯೋಜಿಸಿದ ಸಿಬ್ಬಂದಿ/ಅಧಿಕಾರಿ
ಹುದ್ದೆಸಂಖ್ಯೆ
ಡಿಐಜಿಪಿ01
ಡಿವೈಎಸ್ಪಿ(ಸಿವಿಲ್)01
ಸಹಾಯಕ ಕಮಾಂಡೆಂಟ್01
ಪಿಐ/ಆರ್ಪಿಐ04
ಪಿಎಸ್ಐ/ಎಸ್ಐ/ಆರ್ಎಸ್ಐ16
ಸಿಎಚ್ಸಿ60
ಸಿಪಿಸಿ/ಎಪಿಸಿ150
ಅನುಯಾಯಿ15
ಒಟ್ಟು248