-ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ । ಸಹಾಯಕ ಆಯುಕ್ತರ ಕಮಿಟಿ ನೀಡಿದ ಶಿಫಾರಸುಗಳಿಗೆ ಕಿಮ್ಮತ್ತಿಲ್ಲ..!
-ಕನ್ನಡಪ್ರಭ ಸರಣಿ ವರದಿ ಭಾಗ : 137
ಆನಂದ್ ಎಂ. ಸೌದಿಕನ್ನಡಪ್ರಭ ವಾರ್ತೆ ಯಾದಗಿರಿ
ಕೈಗಾರಿಕಾ ಪ್ರದೇಶದಲ್ಲಿನ ದುಸ್ಥಿತಿ ಅರಿಯಲು ಸಹಾಯಕ ಆಯುಕ್ತರ ನೇತೃತ್ವದ ಕಮಿಟಿಯು ಜಿಲ್ಲಾಧಿಕಾರಿಗೆ ನೀಡಿದ ವರದಿಯಲ್ಲಿ, ಇಲ್ಲಿನ ಸ್ಥಿತಿಗತಿ ಅರಿಯಲು ಕೆಲವೊಂದು ಷರತ್ತುಗಳ/ನಿಯಮಗಳ ಪಾಲಿಸಬೇಕೆಂದು ಸೂಚಿಸಲಾಗಿತ್ತಾದರೂ, ಇಡೀ ಪರಿಸರ ಹಾಳುಗೆಡವಲು ಕಾರಣವಾದ ಕೆಲವೊಂದು ಪ್ರಭಾವಿ/ ದೊಡ್ಡ ದೊಡ್ಡ ಕೆಮಿಕಲ್ ಕಂಪನಿಗಳು ಎಸಿ ಕಮಿಟಿ ಸೂಚನೆಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ, ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳೂ ಮೌನಕ್ಕೆ ಶರಣಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇನ್ನು, ಕಾರ್ಖಾನೆಯವರು ನಿಯಮಾನುಸಾರ ಸ್ಥಳಿಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಅಂದರೆ, ಶೇ. 70% ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡುವ ಬಗ್ಗೆ ಸೂಚನೆ ಕೇವಲ ಕಾಗದದಲ್ಲಷ್ಟೇ ದಾಖಲಾದಂತಿದೆ. ಶೇ.70 ರಷ್ಟಲ್ಲ, ಕಾರ್ಖಾನೆಗಳು ಸ್ಥಾಪಿತವಾಗಿ ದಶಕ ಉರುಳಿದರೂ, ಶೇ.7ರಷ್ಟೂ ಉದ್ಯೋಗ ಸ್ಥಳೀಯರಿಗೆ ಸಿಕ್ಕಿಲ್ಲ.
ಔಷಧಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಕಡ್ಡಾಯವಾಗಿ ಸುರಕ್ಷಿತ ಕವಚಗಳನ್ನು ನೀಡುವ ಬಗ್ಗೆ ಸೂಚನೆಯ ಬಗ್ಗೆ ಗಮನ ಹರಿಸಿದಾಗ, ಜನರ ಜೀವದ ಜೊತೆ ಕಂಪನಿಗಳು ಚೆಲ್ಲಾಟವಾಡುತ್ತಿರುವ ಬಗ್ಗೆ ಮೊನ್ನೆ ಮೊನ್ನೆಯಷ್ಟೇ ನಡೆದ ಘಟನೆಗಳೇ ಸಾಕ್ಷಿ. ಅಂದರೆ, ಸುರಕ್ಷಿತ ಕವಚಗಳ ಇರಲಿ, ಅವಘಡಗಳಾದಾದ ಆಸ್ಪತ್ರೆಗಳಿಗೂ ಕರೆದೊಯ್ಯದೇ, ಅವರನ್ನು ಹೆದರಿಸಿ, ಬೆದರಿಸಿ, ಅವರವರ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ ಎಂಬ ಆರೋಪಗಳಿವೆ.
ಇಂತಹನೇಕ ಷರತ್ತು ಉಲ್ಲಂಘನೆಯಾದರೂ, ಅಧಿಕಾರಿಗಳು ತಮಗೇನೂ ಗೊತ್ತಿಲ್ಲದಂತೆ ವರ್ತಿಸುತ್ತಿರುವುದು ಅವರ ಕಾರ್ಯವೈಖರಿಯ ಬಗ್ಗೆ ಅನುಮಾನಿಸುವಂತಿದೆ.
ನಮ್ಮ ಭಾಗದಲ್ಲಿ ಸ್ಥಾಪಿಸಿದ ಬಹುತೇಕ ರಾಸಾಯನಿಕ ಕೈಗಾರಿಕೆಗಳಿಂದ ಗಾಳಿ, ಮಣ್ಣು ಮತ್ತು ನೀರು ಮಾಲಿನ್ಯವಾಗುತ್ತಿವೆ ಎಂದು ಜನರ ಧ್ವನಿಯಾಗಿ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದ ನಂತರ ಜಿಲ್ಲಾಧಿಕಾರಿಗಳು, ಇದರ ಅಧ್ಯಾಯನಕ್ಕಾಗಿ ಸಹಾಯಕ ಆಯುಕ್ತರ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ರಚನೆ ಮಾಡಿದರೆ, ಅಧಿಕಾರಿಗಳು ಈ ರಾಸಾಯನಿಕ ಕೈಗಾರಿಕೆಗಳಿಂದ ಜನಕ್ಕೆ ಯಾವುದೇ ತೊಂದರೆಯಾಗಿರುವುದಿಲ್ಲ ಎಂದು ಕೈಗಾರಿಕಾ ಫ್ರೆಂಡ್ಲಿಯಾಗಿ ವರದಿ ನೀಡಿರುವುದು ಅತ್ಯಂತ ದುರದೃಷ್ಟಕರ. ಎಲ್ಲ ಅಧಿಕಾರಿಗಳು ಒಂದು ವಾರ ಈ ಕೈಗಾರಿಕಾ ಸುತ್ತಲಿನ ಗ್ರಾಮಗಳಲ್ಲಿ ವಾಸ್ತವ್ಯ ಮಾಡಲಿ, ನಂತರ ವರದಿ ನೀಡಲಿ. ಅದನ್ನು ಬಿಟ್ಟು ಇಲ್ಲಿನ ವಾಸ್ತಾಂಶ ಮರೆಮಾಚುವ ಕಾರ್ಯ ಮಾಡಬೇಡಿ.
22ವೈಡಿಆರ್10 : ಕಡೇಚೂರು ಬಾಡಿಯಾ ಕೈಗಾರಿಕಾ ಪ್ರದೇಶದ ನೋಟ.
22ವೈಡಿಆರ್12 : ಎಸಿ ಕಮೀಟಿ ನೀಡಿರುವ ಶಿಫಾರಸ್ಸುಗಳು