ಹಗರಿಬೊಮ್ಮನಹಳ್ಳಿ: ದಮನಿತರ ಹಾಗೂ ಶೋಷಿತರ ಪರ ಧ್ವನಿ ಎತ್ತುವ ಸಾರ್ವಜನಿಕ ಹಿತಾಸಕ್ತಿಗೆ ಬದ್ಧರಾಗಿರುವ ಪತ್ರಕರ್ತರ ನೆರವಿಗೆ ಸರ್ಕಾರ ಧಾವಿಸಬೇಕು. ಪತ್ರಕರ್ತರ ಸಂಘಟನೆಗಳ ಬದಲಾಗಿ ಸಮಾಜ ಹಾಗೂ ಸಂಘ, ಸಂಸ್ಥೆಗಳು ಪತ್ರಿಕಾ ದಿನಾಚರಣೆ ಆಚರಿಸಬೇಕು ಎಂದು ನಂದೀಪುರ ಶ್ರೀಗಳಾದ ಡಾ. ಮಹೇಶ್ವರ ಶ್ರೀಗಳು ಆಶಿಸಿದರು.
ಪತ್ರಕರ್ತರು ತಮ್ಮ ತಮ್ಮಲ್ಲಿನ ಒಡಕುಗಳನ್ನು ಸರಿಮಾಡಿಕೊಳ್ಳಬೇಕು. ಮುಂದಿನ ವರ್ಷ ಶ್ರೀ ಮಠದಿಂದ ಪತ್ರಿಕಾ ದಿನಾಚರಣೆ ಆಚರಿಸುವ ಚಿಂತನೆ ಹೊಂದಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ, ಖಾಕಿ, ಕಾವಿ ಹಾಗೂ ಖಾದಿಗಳನ್ನು ಪ್ರಶ್ನಿಸುವ ಅಧಿಕಾರ ಪತ್ರಕರ್ತರಿಗೆ ಮಾತ್ರ ಇದೆ. ಪತ್ರಕರ್ತರು ಕೇವಲ ಗುದ್ದಲಿಪೂಜೆ, ಶಂಕುಸ್ಥಾಪನೆ ವರದಿಗಳಿಗೆ ಸೀಮಿತರಾಗದೇ ಜನರ ಸಂಕಷ್ಟಗಳಿಗೆ ಕಿವಿಯಾಗಬೇಕು. ಸಾಮಾಜಿಕ ಅನಿಷ್ಟಗಳು, ಅನ್ಯಾಯ, ಅಕ್ರಮಗಳ ವಿರುದ್ಧ ಧ್ವನಿಯಾಗಬೇಕು ಎಂದು ಸಲಹೆ ನೀಡಿದರು.ಪತ್ರಕರ್ತರಿಗೆ ಬಸ್ ಪಾಸ್ ಸಹಿತ ರಕ್ಷಣಾ ಕಾಯ್ದೆ ಮತ್ತು ಕಾರ್ಮಿಕ ಕಾನೂನುಗಳ ಅನುಷ್ಠಾನ ಜಾರಿಗೆ ಹೋರಾಟ ಮಾಡಿ, ಎರಡೇ ವರ್ಷಗಳಲ್ಲಿ ಪತ್ರಕರ್ತರ ಕುಟುಂಬದವರ ಮುಖದಲ್ಲಿ ಮಂದಹಾಸ ಮೂಡಿಸುವ ವರೆಗೆ ವಿರಮಿಸುವುದಿಲ್ಲ ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ, ಪೊಲೀಸ್, ಆರೋಗ್ಯ, ಸಾಹಿತ್ಯ, ಜಾನಪದ, ರಂಗಭೂಮಿ, ಸಂಗೀತ ಸಹಿತ ಅನೇಕ ಕ್ಷೇತ್ರಗಳಲ್ಲಿ ಸಾಧನೆಗೈದ ೨೫ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಯಿತು.