ಕೊಪ್ಪಳ: ತೊಟ್ಟಿಲು ತೂಗುವ ಕೈ ಜಗವ ಆಳಬಲ್ಲದು. ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣುತ್ತಾರೆ. ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೂ ಎಲ್ಲ ಕ್ಷೇತ್ರದಲ್ಲಿ ಮಹಿಳೆ ಕೊಡುಗೆ ನೀಡಿರುವುದನ್ನು ಕಾಣಬಹುದು ಎಂದು ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ರಾಜ್ಯ ಸದಸ್ಯೆ ಹಾಗೂ ವಿಜಯನಗರ ರೋಟರಿ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣ ಸದಾಶಿವ ಹೇಳಿದರು.
ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮಿ ಮಾತನಾಡಿ, ೧೨ನೇ ಶತಮಾನದಲ್ಲಿ ಅಕ್ಕಮಹಾದೇವಿಯ ವಿಚಾರ ನಮಗೆ ಸ್ಫೂರ್ತಿಯಾಗಬೇಕು. ಹೆಣ್ಣು ಮಕ್ಕಳಿಗೆ ಅವಕಾಶ, ಹಕ್ಕು,ನ್ಯಾಯ ಕೊಟ್ಟಾಗ ಅವಳು ಸಮಾಜಕ್ಕೆ ಮರಳಿ ನೀಡುವ ಕೆಲಸ ಮಾಡುತ್ತಾಳೆ. ಕುಟುಂಬದ ಏಳಿಗೆಯಲ್ಲಿ ಮಹಿಳೆಯ ಪಾತ್ರ ಬಹಳ ಇದೆ. ಕುಟುಂಬ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಸಮಾನತೆಯ ಕೊರತೆ ಇದೆ. ಅವಳಿಗೆ ಅವಕಾಶ ನೀಡಿದರೆ ಅವಳು ಸಹ ದೇಶ, ರಾಜ್ಯಕ್ಕೆ ತನ್ನದೆ ಆದ ಕೊಡುಗೆ ನೀಡಬಲ್ಲಳು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟಿನ ಕಾರ್ಯದರ್ಶಿ ಡಾ.ಆರ್.ಮರೇಗೌಡ ಮಾತನಾಡಿ, ೧೨ನೇ ಶತಮಾನದಲ್ಲಿ ಬಸವಣ್ಣನವರು ಸ್ತ್ರೀ ಸಮಾನತೆ ತಂದರು. ಅವರ ವಿಚಾರ ನಮಗೆ ಪ್ರೇರಣೆಯಾಗಲಿ. ಸಮಾಜದ ಪ್ರತಿ ಹೆಣ್ಣುಮಗಳಿಗೆ ಸಮಾನವಾದ ಅವಕಾಶ ಮಾಡಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಹಿಳೆ ಅಭಿವೃದ್ಧಿಯಾದರೆ ಕುಟುಂಬ, ಸಮಾಜ ತಾನಾಗಿಯೇ ಸುಧಾರಣೆಯಾಗುತ್ತದೆ. ಇಂತಹ ಕಾರ್ಯಕ್ರಮಗಳು ಮಹಿಳಾ ಏಳಿಗೆಗೆ ಪೂರಕವಾಗಿ ಸ್ಫೂರ್ತಿ ತಂದುಕೊಡುತ್ತೇವೆ ಎಂದರು.ಡಾ.ರುದ್ರಾಕ್ಷಿ ದೇವರಗುಡಿ, ಡಾ.ಕಸ್ತೂರಿ ಕರಮುಡಿ, ಮಮತಾ ಕುದುರಿಮೋತಿ ಮಾತನಾಡಿದರು. ಮಹಾವಿದ್ಯಾಲಯದ ಶೈಕ್ಷಣಿಕ ಸಂಯೋಜಕ ಪ್ರೊ. ಎಚ್.ಬಿ.ಆನಂದಹಳ್ಳಿ, ಪ್ರಾಚಾರ್ಯ ಡಾ. ಎಸ್.ಬಿ ಕಂಬಾರ್, ಐಕ್ಯುಎಸಿ ಸಂಯೋಜಕಿ ಡಾ.ಕವಿತಾ ಕೆ, ಪ್ರಾಧ್ಯಾಪಕ ಡಾ.ಆನಂದ ದೇಸಾಯಿ, ಶ್ರೀಧರ್ ಪೂಜಾರ, ಡಾ.ನೀಲಾಂಬಿಕ ಹುದ್ದಾರ, ಡಾ.ಶೈಲಜಾ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಶಿಕ್ಷಣಾರ್ಥಿಗಳಾದ ಮಂಜುನಾಥ್ ಸ್ವಾಗತಿಸಿದರು, ಪವಿತ್ರ ಪ್ರಾರ್ಥಿಸಿದರು ಹಾಗೂ ಗುರುರಾಜ್ ವಂದಿಸಿದರು.