ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ನಾಡಪ್ರಭು ಕೆಂಪೇಗೌಡರ ಆದರ್ಶವನ್ನು ಕೇವಲ ಜಯಂತ್ಯುತ್ಸವದಲ್ಲಿ ಮಾತ್ರ ನೆನೆದು ಕೊಂಡಾಡಿದರೆ ಸಾಲದು ಯುಗ ಪುರುಷರ ಇತಿಹಾಸವನ್ನು ಸದಾ ಸ್ಮರಿಸುವ ಕೆಲಸವಾಗಬೇಕು ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ತಾಲೂಕು ನಾಡಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ನಾಡಪ್ರಭು ಕೇಂಪೇಗೌಡರ ಜಯಂತಿ ಉದ್ಘಾಟಿಸಿ ಮಾತನಾಡಿ, ಯುಗಪರುಷರನ್ನು ಜಾತಿ ವರ್ಗಗಳಿಗೆ ಸೀಮಿತ ಮಾಡುತ್ತಿದ್ದೇವೆ. ಎಲ್ಲರೂ ಕೂಡಾ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ್ದಾರೆ. ಇವರನ್ನು ಜಾತಿ ಧರ್ಮದ ಸಂಕೋಲೆಗಳಿಂದ ಬಂಧಿಸಬಾರದು ಎಂದರು.
ಕೆಂಪೇಗೌಡರ ಆಡಳಿತವನ್ನು ಇಂದಿಗೂ ನಾವು ಕೊಡಲಾಗುತ್ತಿಲ್ಲ ಎಂದರೆ ಎಂತಹ ಸ್ಥಿತಿಯಲ್ಲಿದ್ದೇವೆ ಎಂದು ಆಲೋಚಿಸಬೇಕು. ವಿಜಯನಗರದ ಮಾಂಡಲಿಕರಾಗಿದ್ದ ಕೆಂಪೇಗೌಡರು ವಿಜಯನಗರವನ್ನೆ ಮೀರಿಸುವ ಆಡಳಿತವನ್ನು ಹೇಗೆ ನೀಡಿದರು. ಪ್ರತಿಯೊಬ್ಬ ಕಸುಬುದಾರನಿಗೂ ಕೂಡಾ ಉದ್ಯೋಗ ಸಿಗುವ ತಾಣ ನಿರ್ಮಾಣ ಮಾಡಿದರು ಎಂಬುದನ್ನು ತಿಳಿದುಕೊಳ್ಳಬೇಕು. ಕೆಂಪೇಗೌಡರಂತಹ ಯುಗ ಪುರುಷರು ಮತ್ತೆ ಹುಟ್ಟಿ ಬರಬೇಕು ಎಂದರು.ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕ ತೌಟನಹಳ್ಳಿ ಕೆಂಪೇಗೌಡ ನಾಡಪ್ರಭುಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ಗೌಡ ಎಂಬುದು ಜಾತಿ ಸೂಚಕ ಪದವಲ್ಲ. ಅವನೊಬ್ಬ ನಾಯಕನಾಗಿರುತ್ತಿದ್ದ. ಜಾತ್ಯತೀತವಾಗಿ ಕೆಲಸ ಮಾಡುವವನಾಗಿರುತ್ತಿದ್ದ. ಇಂತಹ ನಾಯಕನೆ ನಮ್ಮ ಕೆಂಪೇಗೌಡ ಎಂದರು.
ಕೆಂಪೇಗೌಡ ಜಯಂತಿ ಅಂಗವಾಗಿ ತಾಲೂಕು ಆಡಳಿತವು ವಿವಿಧ ಶಾಲೆಗಳ ಮಕ್ಕಳಿಗೆ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.ತಾಲೂಕಿನ ವಿವಿಧ ಕ್ಷೇತ್ರದ ಗಣ್ಯರಿಗೆ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್ ನೇತೃತ್ವದಲ್ಲಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಪಂಕಜಾ ಪ್ರಕಾಶ್, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾಪಂ ಇಒ ಕೆ.ಸುಷ್ಮ, ಬಿಇಒ ವೈ.ಕೆ.ತಿಮ್ಮೇಗೌಡ, ಆರ್ಟಿಓ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಕುಮಾರ್, ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಎಸ್.ಎಲ್.ಮೋಹನ್, ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ನಂಜಪ್ಪ, ನಿರ್ದೇಶಕ ಅಕ್ಕಿಹೆಬ್ಬಾಳು ರಘು, ತಾಲೂಕು ನಯನಜ ಕ್ಷತ್ರೀಯ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ, ಬಸ್ತಿ ರಂಗಪ್ಪ ಹಲವರಿದ್ದರು.