ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಬೆಳಿದಿದ್ದ ದ್ವೇಷದ ವಾತಾವರಣವನ್ನು ಸಕಾಲಕ್ಕೆ ಅವರಿಗೆ ಕಾನೂನು ಅರಿವು ನೀಡುವ ಮೂಲಕ ಇಲ್ಲಿಯ ಉಪ ನಗರ ಠಾಣೆ ಇನ್ಸ್ಪೆಕ್ಟರ್ ದಯಾನಂದ ಶೇಗುಣಿಸಿ ಹಾಗೂ ಸಿಬ್ಬಂದಿ ಪ್ರಕರಣ ಅಂತ್ಯಗೊಳಿಸಿದ್ದಾರೆ.
ಇಲ್ಲಿಯ ಮುರುಘಾಮಠ ಬಳಿಯ ಹೊಸ ಎಪಿಎಂಸಿ ಬಳಿ ಎರಡು ಯುವಕರ ಗುಂಪಿನ ನಡುವೆ ಕ್ಷುಲ್ಲಕ ಕಾರಣಕ್ಕೆ ದ್ವೇಷ ಉಂಟಾಗಿ ಸ್ಥಳದಲ್ಲಿ ಗಲಾಟೆಯ ವಾತಾವರಣ ನಿರ್ಮಾಣವಾಗಿತ್ತು.
ವಿಷಯ ತಿಳಿದ ಠಾಣೆಯ ಇನ್ಸ್ಪೆಕ್ಟರ್ ದಯಾನಂದ ಹಾಗೂ ತಂಡ ಅಲ್ಲಿಗೆ ತೆರಳಿ ಯುವಕರಿಗೆ ಕಾನೂನು ಅರಿವು ನೀಡಿ ಪ್ರಕರಣ ಬೆಳೆಯದಂತೆ ತಿಳಿಗೊಳಿಸಿದರು.
ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಮುಖಂಡರ ಜೊತೆಯೂ ಸಮಾಲೋಚನೆ ನಡೆಸಿದ ದಯಾನಂದ, ಮುಂದೆಯೂ ಯಾವುದೇ ರೀತಿಯಲ್ಲಿ ಗಲಾಟೆ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡರೆ ತಮಗೇ ತೊಂದರೆ ಆಗಲಿದ್ದು, ನ್ಯಾಯಾಲಯಕ್ಕೆ ಅಲೆದಾಡಬೇಕಾಗುತ್ತದೆ ಎಂದು ಎಚ್ಚರಿಸಿ ಪ್ರಕರಣ ತಿಳಿಗೊಳಿಸಿದರು.
ಚಾಕುವಿನಿಂದ ಇರಿದು ಯುವಕನ ಕೊಲೆ: ಓರ್ವನಿಗೆ ಗಾಯ
ಧಾರವಾಡ: ಯುವಕನೋರ್ವನಿಗೆ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಶನಿವಾರ ತಡರಾತ್ರಿ ಇಲ್ಲಿಯ ಹುಬ್ಬಳ್ಳಿ ರಸ್ತೆಯ ಯಾಲಕ್ಕಿ ಶೆಟ್ಟರ್ ಪ್ರದೇಶದ ಡಾ. ಅಂಬೇಡ್ಕರ್ ನಗರದಲ್ಲಿ ನಡೆದಿದೆ.
ಅಂಬೇಡ್ಕರ್ ಬಡಾವಣೆಯ ಶರತಕುಮಾರ ಉರ್ಫ್ ಸಚಿನ್ ಸಿದ್ದಪ್ಪ ಕಾಕಣ್ಣವರ (20) ಕೊಲೆಯಾದ ಯುವಕ. ತಡರಾತ್ರಿ 1ರ ಸುಮಾರಿಗೆ ಮನೆ ಕಡೆಗೆ ಹೊರಟಾಗ ಅದೇ ಬಡಾವಣೆಯ ಕೆಲವು ಯುವಕರು ಶರತುಮಾರನನ್ನು ಅಡ್ಡಗಟ್ಟಿ ಜಗಳ ತೆಗೆದಿದ್ದಾರೆ. ನಂತರ ಜಗಳ ವಿಕೋಪಕ್ಕೆ ತಿರುಗಿದಾಗ ಆತನಿಗೆ ಚಾಕುವಿನಿಂದ ಹೊಟ್ಟೆಯ ಭಾಗಕ್ಕೆ ಇರಿಯಲಾಗಿದೆ.
ಅದೇ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದ ಅಮಿತ ವಿಜಯ ಕುಂದಗೋಳ ಎಂಬಾತನಿಗೂ ಚಾಕುವಿನಿಂದ ಇರಿಯಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಸ್ಥಳೀಯರು ಹುಬ್ಬಳ್ಳಿಯ ಕಿಮ್ಸ್ಗೆ ದಾಖಲು ಮಾಡಿದ್ದದರು.
ಆದರೆ, ತೀವ್ರವಾಗಿ ಗಾಯಗೊಂಡಿದ್ದ ಶರತಕುಮಾರ ಚಿಕಿತ್ಸೆ ಫಲಿಸದೇ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ. ಗಾಯಗೊಂಡಿದ್ದ ಅಮಿತ ಕುಂದಗೋಳ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್ಪೆಕ್ಟರ್ ಸಂಗಮೇಶ ದಿಡಿಗಿನಾಳ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವ್ಯಕ್ತಿಯೋರ್ವನ ಮೇಲೆ ಹಲ್ಲೆಹುಬ್ಬಳ್ಳಿ: ಪಾಸ್ಟರ್ ಎಂದು ಹೇಳಿಕೊಂಡು ಓಡಾಡುತ್ತಿದ್ದ ವ್ಯಕ್ತಿ ಗಂಡ ಹೆಂಡತಿಯ ನಡುವೆ ಜಗಳ ಹಚ್ಚುತ್ತಿದ್ದ ಎಂಬ ಆರೋಪದ ಮೇಲೆ ನೊಂದ ಕುಟುಂಬದವರು ವ್ಯಕ್ತಿಯೋರ್ವನಿಗೆ ಏಟು ನೀಡಿರುವ ಘಟನೆ ಇಲ್ಲಿನ ಹೆಗ್ಗೇರಿಯಲ್ಲಿ ನಡೆದಿದೆ. ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೆಗ್ಗೇರಿಯಲ್ಲಿ ಸಂತೋಷ ಎಂಬಾತನಿಗೆ ಹಲ್ಲೆ ಮಾಡಿರುವುದು ವೈರಲ್ ಆಗಿದೆ. ಗಂಡ, ಹೆಂಡತಿ ನಡುವೆ ಜಗಳ ಹಚ್ಚಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾಹಿಸಿಕೊಂಡಿದ್ದಾನೆ.
ಅನೇಕ ಬಾರಿ ಬುದ್ಧಿ ಹೇಳಿದರೂ ಅದೇ ಚಾಳಿ ಮುಂದುವರೆಸಿದ್ದ. ಈ ಹಿನ್ನೆಲೆಯಲ್ಲಿ ನೊಂದ ಕುಟುಂಬದವರು ಹಲ್ಲೆ ಮಾಡಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.