ಕನ್ನಡಪ್ರಭ ವಾರ್ತೆ ಸಕಲೇಶಪುರ
ನೊಂದವರ ಬದುಕಿಗೆ ಬೆಳಕಾದವರು ದೇವರಾಜ್ ಅರಸು ಎಂದು ಉಪವಿಭಾಗಾಧಿಕಾರಿ ರಾಜೇಶ್ ಹೇಳಿದರು.ಬುಧವಾರ ಪಟ್ಟಣದ ತಾಲೂಕು ಪಂಚಾಯತ್ ಸಂಭಾಗಣದಲ್ಲಿ ದೇವರಾಜ ಅರಸುರವರ ೧೧೦ನೇ ಜನ್ಮದಿನಾಚರಣೆ ಉದ್ದೇಶಿಸಿ ಮಾತನಾಡಿ, ಸ್ವಾತಂತ್ರ್ಯ ಭಾರತದಲ್ಲಿ ಹಿಂದುಳಿದ ವರ್ಗದಿಂದ ಆಯ್ಕೆಯಾದ ಮೊದಲ ಮುಖ್ಯಮಂತ್ರಿ ದೇವರಾಜ್ ಅರಸು. ತಮ್ಮ ಆಡಳಿತದ ಅವಧಿಯಲ್ಲಿ ದಿನದಲಿತರ ಪರವಾಗಿ ಕೆಲಸ ಮಾಡಿದ ಪರಿಣಾಮ ಲಕ್ಷಾಂತರ ಜನರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಅಧಿಕಾರ ದೊರೆತ ವೇಳೆ ಯಾವ ಮಾದರಿಯಲ್ಲಿ ಸೇವೆ ಸಲ್ಲಿಸಬೇಕು ಎಂಬ ಮಾರ್ಗದರ್ಶನ ನೀಡಿದವರು ಅರಸರು. ಇಂದಿನ ಯುವ ಜನತೆ ಅರಸುರವರ ಬದುಕನ್ನು ಆದರ್ಶವನ್ನಾಗಿ ಪಾಲಿಸಬೇಕು ಎಂದರು.ತಹಸೀಲ್ದಾರ್ ಸುಪ್ರೀತಾ ಮಾತನಾಡಿ, ದಕ್ಷಿಣ ಭಾರತದಲ್ಲಿ ಶ್ರೀಮಂತ ಹಾಗೂ ಬಡವರ ಅಂತರ ತಗ್ಗಿಸಿ ಸಮಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಿದ ಮಹತ್ಮಾ ದೇವರಾಜ ಅರಸು, ದೇಶದ ಕಮ್ಯೂನಿಸ್ಟ್ ಆಡಳಿತವಿದ್ದ ಪಶ್ಚಿಮಬಂಗಾಳ ಹಾಗೂ ಕೇರಳಾ ಹೊರತುಪಡಿಸಿ ಉಳುವವನೇ ಒಡೆಯ ಯೋಜನೆಯನ್ನು ಯಥಾವತ್ತಾಗಿ ಜಾರಿಗೆ ತಂದ ಮುಖ್ಯಮಂತ್ರಿ ದೇವರಾಜ ಅರಸುರವರು. ಆರ್ಥಿಕವಾಗಿ ಹಿಂದುಳಿದ ಎಲ್ಲರೂ ಹಿಂದುಳಿದ ವರ್ಗಕ್ಕೆ ಸೇರಿದವರು ಇವರೆಲ್ಲ ಸಮಾಜದ ಮೊದಲ ಸ್ಥರಕ್ಕೆ ಸೇರಬೇಕು ಎಂಬ ಉದ್ದೇಶದಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅನುಕೂಲವಾಗುವಂತೆ ವಸತಿ ನಿಲಯಗಳನ್ನು ಸ್ಥಾಪಿಸಿ ಕೊಟ್ಯಂತರ ಜನರ ಬದುಕಿಗೆ ಬೆಳಕಾದವರು ದೇವರಾಜ ಅರಸು. ಉಚಿತವಾಗಿ ಎಲ್ಲ ದೊರಕಿಸಿದರು. ಶಿಕ್ಷಣವನ್ನು ನಾವೇ ಸಂಪಾದಿಸಬೇಕು ಎಂಬ ನಾಣ್ಣುಡಿಯನ್ನು ಪಾಲಿಸಬೇಕು ಎಂದರು. ಸಂಪನ್ಮೂಲನ ಅಧಿಕಾರಿ ಸಿದ್ದೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ದ್ವಿತಿಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಡಿವೈಎಸ್ಪಿ ಪ್ರಮೋದ್ ಕುಮಾರ್, ಹಿಂದುಳಿದ ವರ್ಗಗಳ ಇಲಾಖೆಯ ಬಸವನಗೌಡ ಪಾಟೀಲ್, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಎಸ್ಜಿ ಲೋಕೇಶ್, ಗ್ರೇಡ್೨ ತಹಸೀಲ್ದಾರ್ ಮೋಹನ್, ತಾಪಂ ಸಹಾಯಕ ನಿರೀಕ್ಷಣಾ ಅಧಿಕಾರಿ ಹರೀಶ್, ಮುಂತಾದವರು ಉಪಸ್ಥಿತರಿದ್ದರು.