ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಪರಿಶ್ರಮ ಮತ್ತು ಚಿಂತನೆಯೊಂದಿಗೆ ಉನ್ನತ ಗುರಿ ಸಾಧಿಸಬೇಕು ಎಂದು ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಡಾ.ಪಿ. ಶಿವರಾಜು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನೇಹ ಸಿಂಚನ ಪ್ರತಿಭಾ ಪುರಸ್ಕಾರ ಮತ್ತು ತರಗತಿ ಪ್ರತಿನಿಧಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿನಿಯರು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಶಿಕ್ಷಣದ ಜೊತೆಗೆ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿನಿಯರು ತಮ್ಮ ಪ್ರತಿಭೆಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶ ಪಡೆದುಕೊಳ್ಳಲು ಪ್ರತಿಭೆ ಬಹಳ ಮುಖ್ಯ. ಜ್ಞಾನವಂತರಾಗಲು ವೈಯಕ್ತಿಕ ಕೊರತೆಗಳು ಮುಖ್ಯವಲ್ಲ. ಇಚ್ಛಾಶಕ್ತಿ ಮುಖ್ಯ. ಆಧುನಿಕ ಸಮಾಜದ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ನಾವು ಸಮರ್ಥರಾಗಬೇಕು. ನಿಮ್ಮ ಭವಿಷ್ಯ ಉತ್ತಮವಾಗಲು ನಿರಂತರ ಪರಿಶ್ರಮದ ಅವಶ್ಯಕತೆ ಇದೆ ಎಂದು ಹೇಳಿದರು.
ಸಮಾಜ ಸೇವಕಿ ಎ. ಪುಷ್ಪಾ ಅಯ್ಯಂಗಾರ್ ಮಾತನಾಡಿ, ಮಹಿಳಾ ಶಿಕ್ಷಣದ ಮಹತ್ವ ತಿಳಿಸುತ್ತಾ ಯುವತಿಯರು ಸ್ವಾವಲಂಭಿಗಳಾಗಿ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆವಹಿಸಿದ್ದ ನಟರಾಜ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಎಚ್.ವಿ. ಬಸವರಾಜು ಮಾತನಾಡಿ, ಸಂಸ್ಥೆಯು ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿದೆ. ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿನಿಯರಿಗೆ ಪ್ರವೇಶಾತಿ ನೀಡಿ ಉತ್ತಮ ಫಲಿತಾಂಶವನ್ನು ವಿದ್ಯಾರ್ಥಿನಿಯರು ಪಡೆಯುವಲ್ಲಿ ನಮ್ಮ ಅಧ್ಯಾಪಕರ ಉತ್ತೇಜನ, ಪ್ರೋತ್ಸಾಹ, ಮಾರ್ಗದರ್ಶನ ಶ್ರೇಷ್ಠವಾಗಿದೆ. ಇದನ್ನು ವಿದ್ಯಾರ್ಥಿನಿಯರು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಪ್ರಾಂಶುಪಾಲೆ ಡಾ.ಎಂ. ಶಾರದಾ ಮಾತನಾಡಿ, ಸಂಸ್ಕಾರವಂತರಾಗಲು ಗುರು ಮತ್ತು ಗುರಿ ಬೇಕು. ನಮ್ಮ ಕಾಲೇಜು ಶೈಕ್ಷಣಿಕ ಗುರಿಯನ್ನು ಈಡೇರಿಸುತ್ತದೆ ಎಂದರು.ಹಿರಿಯ ವಿದ್ಯಾರ್ಥಿನಿಯರನ್ನು ಗುಲಾಬಿ ಹೂ ಮತ್ತು ಸಿಹಿ ತಿನಿಸು ಕೊಟ್ಟು ಸ್ವಾಗತಿಸಲಾಯಿತು. ತರಗತಿ ಪ್ರತಿನಿಧಿಗಳಿಗೆ ಗಣ್ಯರು ಬ್ಯಾಡ್ಜ್ ನೀಡುವ ಮೂಲಕ ಪದಗ್ರಹಣ ಮಾಡಿದರು. ನಂತರ ಎಲ್ಲಾ ತರಗತಿ ಪ್ರತಿನಿಧಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. 2025-26ನೇ ಸಾಲಿನಲ್ಲಿ ಮೂರು ವರ್ಷದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಸಮಾಜ ಸೇವಕಿ ಎ. ವೈದೇಹಿ, ಸಂಚಾಲಕ ಡಾ.ಜಿ. ಪ್ರಸಾದಮೂರ್ತಿ ಮೊದಲಾದವರು ಇದ್ದರು.2025-26ನೇ ಶೈಕ್ಷಣಿಕ ಸಾಲಿನಲ್ಲಿ ಮೂರು ವರ್ಷದ ಶೇಕಡವಾರು ಅತಿ ಹೆಚ್ಚು ಅಂಕವನ್ನು ಬಿಕಾಂ ವಿಭಾಗದಲ್ಲಿ ಎಂ. ಮೈತ್ರಿ, ಎಸ್. ರಚನಾ, ಮಾನಸ, ಬಿಎ ವಿದ್ಯಾರ್ಥಿನಿ ಎ. ಲಕ್ಷ್ಮೀ, ಎಚ್.ಎಸ್. ಸ್ನೇಹಾ, ಆರ್.ಜಿ. ಸುಶ್ಮಿತಾ ಅವರನ್ನು ಅಭಿನಂದಿಸಲಾಯಿತು.