ಯಾವುದೇ ಕೆಲಸವನ್ನು ಸಕಾರಾತ್ಮಕವಾಗಿ ಮಾಡಿದಲ್ಲಿ ಯಶಸ್ವಿಯಾಗುತ್ತದೆ ಎಂಬುದನ್ನು ನಿರೂಪಿಸಿದ ಗಣ್ಯರಲ್ಲಿ ಲಕ್ಷ್ಮಣ ರಾವ್ ಕಿರ್ಲೋಸ್ಕರ್ ಕೂಡ ಒಬ್ಬರು ಎಂದು ಎಂಕೆಇಟಿ ಸಿಬಿಎಸ್ಇ ಶಾಲೆ ಪ್ರಾಂಶುಪಾಲೆ ಅರ್ಚನಾ ಮುಳಗುಂದ ಅಭಿಪ್ರಾಯಪಟ್ಟಿದ್ದಾರೆ.
- ಎಂಕೆಇಟಿ ಸಿಬಿಎಸ್ಇ ಶಾಲೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಅರ್ಚನಾ ಮುಳಗುಂದ
- - -
ಕನ್ನಡಪ್ರಭ ವಾರ್ತೆ ಹರಿಹರ
ಯಾವುದೇ ಕೆಲಸವನ್ನು ಸಕಾರಾತ್ಮಕವಾಗಿ ಮಾಡಿದಲ್ಲಿ ಯಶಸ್ವಿಯಾಗುತ್ತದೆ ಎಂಬುದನ್ನು ನಿರೂಪಿಸಿದ ಗಣ್ಯರಲ್ಲಿ ಲಕ್ಷ್ಮಣ ರಾವ್ ಕಿರ್ಲೋಸ್ಕರ್ ಕೂಡ ಒಬ್ಬರು ಎಂದು ಎಂಕೆಇಟಿ ಸಿಬಿಎಸ್ಇ ಶಾಲೆ ಪ್ರಾಂಶುಪಾಲೆ ಅರ್ಚನಾ ಮುಳಗುಂದ ಅಭಿಪ್ರಾಯಪಟ್ಟರು.
ನಗರದ ಎಂಕೆಇಟಿ ಸಿಬಿಎಸ್ಇ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಸಂಸ್ಥಾಪಕ ಲಕ್ಷ್ಮಣ ರಾವ್ ಕಿರ್ಲೋಸ್ಕರ್ ಜನ್ಮದಿನ ಅಂಗವಾಗಿ ಲಕ್ಷ್ಮಣ ರಾವ್ ಕಿರ್ಲೋಸ್ಕರ್ ಮತ್ತು ರಾಜಾರಾಮ್ ಕಿರ್ಲೋಸ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಲಕ್ಷ್ಮಣ ರಾವ್ ಕಿರ್ಲೋಸ್ಕರ್ ಅವರು ರೈತ ಬೆಳೆದರೆ, ದೇಶಕ್ಕೆ ಅನ್ನ ಎಂಬ ಮಾತಿನಲ್ಲಿ ನಂಬಿಕೆ ಹೊಂದಿದ್ದರು. ಕೃಷಿಗೆ ಅಗತ್ಯ ವಸ್ತುಗಳನ್ನು ವಿನೂತನವಾಗಿ ಉತ್ಪಾದಿಸಿ, ರೈತರು ಹೆಚ್ಚು ಶ್ರಮವಿಲ್ಲದಂತೆ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅವರ ಕಾಳಜಿಯಿಂದಾಗಿ ಸತಾರ ಹಾಗೂ ಸಾಂಗ್ಲಿ ನಡುವಿನ ಕುಗ್ರಾಮದ ಜನತೆ ತಮ್ಮ ಗ್ರಾಮಕ್ಕೆ ಕಿರ್ಲೋಸ್ಕರ್ ವಾಡಿ ಎಂದು ಹೆಸರಿಟ್ಟಿದ್ದಾರೆ. ಆಧುನಿಕ ಜಗತ್ತಿಗೆ ಅಗತ್ಯ ವಸ್ತುಗಳನ್ನು ನಿರ್ಮಿಸಿ ದೇಶದಲ್ಲಿ ಮಾತ್ರವಲ್ಲದೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮೈಸೂರು ಕಿರ್ಲೋಸ್ಕರ್ ಹೆಸರು ಬೆಳಗುವಂತೆ ಮಾಡಿದ್ದರು ಎಂದರು.
ಲಕ್ಷ್ಮಣ ರಾವ್ ನಂತರ ಕಂಪನಿ ನಿರ್ವಹಿಸಿದ ರಾಜಾರಾಮ್ ಕಿರ್ಲೋಸ್ಕರ್ ಕಾರ್ಖಾನೆಯನ್ನು ನಡೆಸುವ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದರು. ತಂದೆ ಹೆಸರಿನಲ್ಲಿ ವಿವಿಧ ಶಾಲಾ- ಕಾಲೇಜುಗಳನ್ನು ಸ್ಥಾಪಿಸಿದರು. ಅಂಥ ಕಾಲೇಜಿನಲ್ಲಿ ಅಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ಇಂದು ಅತ್ಯುನ್ನತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆ ಆಡಳಿತಾಧಿಕಾರಿ ಡಾ. ಬಿ.ಟಿ. ಅಚ್ಯುತ ಅವರು ವಿವಿಧ ವಿಷಯಗಳಲ್ಲಿ ಯಶಸ್ಸು ಸಾಧಿಸಿದ ಅನೇಕರ ಜೀವನ ಚರಿತ್ರೆಗಳು ವಿದ್ಯಾರ್ಥಿಗಳ ಜೀವನವನ್ನು ರೂಪಿಸುತ್ತವೆ. ಇಲ್ಲಿನ ಶಿಕ್ಷಣ ಸಂಸ್ಥೆ ನಿಮ್ಮ ಜೀವನದಲ್ಲಿ ಮೌಲ್ಯಯುತ ಮತ್ತು ಸಂಸ್ಕಾರವಂತರಾಗುವ ಶಿಕ್ಷಣ ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಲಕ್ಷ್ಮಣ ರಾವ್ ಕಿರ್ಲೋಸ್ಕರ್ ಅವರ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯನಿ ಕೆ.ಪರಿಮಳ, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿನಿಯರಾದ ಎಸ್. ತನುಶ್ರೀ ಸ್ವಾಗತಿಸಿ, ಸಾಮ್ರ ಸುಲ್ತಾನ ವಂದಿಸಿದರು. ಸ್ವಾತಿ ಕುಮಾರಿ- ಇಂಚರ ನಿರೂಪಿಸಿದರು.
- - -
-20ಎಚ್ಆರ್ಆರ್02:
ಹರಿಹರದ ಎಂಕೆಇಟಿ ಸಿಬಿಎಸ್ಇ ಶಾಲೆಯಲ್ಲಿ ಶುಕ್ರವಾರ ಶಾಲಾ ಸಂಸ್ಥಾಪಕ ಲಕ್ಷ್ಮಣ ರಾವ್ ಕಿರ್ಲೋಸ್ಕರ್ ಜನ್ಮದಿನ ಅಂಗವಾಗಿ ಲಕ್ಷ್ಮಣ ರಾವ್ ಕಿರ್ಲೋಸ್ಕರ್ ಮತ್ತು ರಾಜಾರಾಮ್ ಕಿರ್ಲೋಸ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಮಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.