ಹಗಲುವೇಷಗಾರರ ಬದುಕು ಅತಂತ್ರ

KannadaprabhaNewsNetwork |  
Published : Jan 28, 2026, 03:15 AM IST
ಪೋಟೊ ಕ್ಯಾಪ್ಟನ್:ಡಂಬಳ ಗ್ರಾಮದ ಮರುಳಸಿದ್ದೇಶ್ವರ ದೇವಸ್ಥಾನದ ಮುಂದೆ ಹಗಲು ವೇಶಗಾರರಾದ ರಾಮಣ್ಣ ವೇಶಗಾರ ಮತ್ತು ಮಕ್ಕಳು ಹಗಲು ವೇಶ ದರಿಸಿ ಪೌರಾಣಿಕ, ಜಾನಪದ ಹಾಡುಗಳನ್ನು ಹಾಡಿದರು. | Kannada Prabha

ಸಾರಾಂಶ

ಹಗಲುವೇಷಗಾರರು ಊರೂರು ಅಲೆದು ಕಲೆಯನ್ನು ಪ್ರಸ್ತುತಪಡಿಸುತ್ತಾರೆ. ಆದರೆ ಇವರಿಗೆ ವಾಸಿಸಲು ಸಮರ್ಪಕವಾದ ಸೂರು ಇಲ್ಲ. ಅಲ್ಲದೇ ಜಾನಪದ ಕಲಾವಿದರಿಗೆ ನೀಡುವ ಮಾಸಾಶನವನ್ನೂ ನೀಡಿಲ್ಲ.

ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ: ಗ್ರಾಮೀಣ ಭಾಗಗಳಲ್ಲಿ ಹಬ್ಬ, ಜಾತ್ರೆ ಹಾಗೂ ವಿಶೇಷ ಧಾರ್ಮಿಕ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುವ ಹಗಲುವೇಷಗಾರರ ಸಂಪ್ರದಾಯ ನಾಡಿನ ಜನಪದ ಸಂಸ್ಕೃತಿಯ ಮಹತ್ವದ ಅಂಗವಾಗಿದೆ. ಆದರೆ ಅವರ ಬದುಕು ಅತಂತ್ರರಾಗಿದ್ದು, ಸರ್ಕಾರದ ಸೌಲಭ್ಯಕ್ಕಾಗಿ ಅಂಗಲಾಚುತ್ತಿದ್ದಾರೆ.

ಡಂಬಳ ಹೋಬಳಿಯ ಮೇವುಂಡಿ ಗ್ರಾಮದ ಹಗಲು ವೇಷಗಾರರು ತಲೆತಲಾಂತರದಿಂದ ಈ ವೃತ್ತಿ ನಡೆಸಿಕೊಂಡು ಬಂದಿದ್ದಾರೆ. ಹಗಲು ವೇಷದ ಮೂಲಕ ಊರು ಊರು ಅಲೆಯುವ ರಾಮಣ್ಣ ವೇಷಗಾರ ಮತ್ತು ಅವರ ಮಕ್ಕಳು‌ ‌ಬಣ್ಣ ಬಣ್ಣದ ವೇಷಭೂಷಣ, ಮುಖವರ್ಣಿಕೆ, ಕೃಷ್ಣ, ರಾಮ, ಸೀತೆ, ಹನುಮಂತ ಹೀಗೆ ವಿಭಿನ್ನ ಪಾತ್ರಗಳ ಮೂಲಕ ಜಾನಪದ ಹಾಡುಗಳನ್ನು ಹಾಡುವ ಮೂಲಕ ಜನಮನ ರಂಜಿಸುತ್ತಾರೆ. ಅಲ್ಲದೆ ಜಾಗೃತಿಯನ್ನೂ ಮೂಡಿಸುತ್ತಾರೆ.

ಹಗಲಿನಲ್ಲೇ ಊರು ಊರು ಸಂಚರಿಸಿ ದೇವರು, ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಪಾತ್ರಗಳನ್ನು ನಿರ್ವಹಿಸುವ ಮೂಲಕ ಜನರಿಗೆ ಮನರಂಜನೆಯ ಜತೆಗೆ ನೀತಿ ಪಾಠ ಹೇಳುತ್ತಾರೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಎಲ್ಲರೂ ಕುತೂಹಲದಿಂದ ವೀಕ್ಷಿಸುವ ಹಗಲುವೇಷಗಾರರ ಕಲಾ ಪ್ರದರ್ಶನ ಜನಪದ ಪರಂಪರೆಯ ಉಳಿವಿಗೆ ಸಹಕಾರಿಯಾಗಿದೆ.

ಸೂರು, ಮಾಸಾಶನ ಇಲ್ಲ: ಹಗಲುವೇಷಗಾರರು ಊರೂರು ಅಲೆದು ಕಲೆಯನ್ನು ಪ್ರಸ್ತುತಪಡಿಸುತ್ತಾರೆ. ಆದರೆ ಇವರಿಗೆ ವಾಸಿಸಲು ಸಮರ್ಪಕವಾದ ಸೂರು ಇಲ್ಲ. ಅಲ್ಲದೇ ಜಾನಪದ ಕಲಾವಿದರಿಗೆ ನೀಡುವ ಮಾಸಾಶನವನ್ನೂ ನೀಡಿಲ್ಲ. ಇದಕ್ಕಾಗಿ ಕಚೇರಿಗಳಿಗೆ ಅಲೆದು ಅರ್ಜಿ ಸಲ್ಲಿಸಿದರೂ ಮಾಸಾಶನ ನೀಡಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಮತ್ತಷ್ಟು ತೊಂದರೆಯಾಗುತ್ತಿದೆ ಎಂಬುದು ಕಲಾವಿದರ ಅಳಲಾಗಿದೆ.

ಆಧುನಿಕತೆ ಪ್ರಭಾವದಿಂದ ಇಂತಹ ಸಂಪ್ರದಾಯಗಳು ನಿಧಾನವಾಗಿ ಕಡಿಮೆಯಾಗುತ್ತಿದ್ದು, ಹಗಲುವೇಷಗಾರರ ಕಲೆ ಮತ್ತು ಜೀವನ ಸಂಕಷ್ಟಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ವಿಷಯ. ಆದ್ದರಿಂದ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಈ ಜನಪದ ಕಲಾವಿದರಿಗೆ ಪ್ರೋತ್ಸಾಹ, ಸಹಾಯಧನ ಮತ್ತು ವೇದಿಕೆ ಕಲ್ಪಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಕಡುಬಡವರು: ತಲೆತಲಾಂತರದಿಂದ ಹಗಲುವೇಷಗಾರರಾಗಿ ಕಲೆ, ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುತ್ತ ಬಂದಿದ್ದೇವೆ. ನಾವು ಕಡುಬಡವರಾಗಿದ್ದು, ಸರ್ಕಾರ ನಮಗೆ ಸೂರು, ಮಾಸಾಶನ ಸೇರಿದಂತೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿಕೊಡಲು ಮುಂದಾಗಬೇಕು ಎಂದು ಮೇವುಂಡಿ ಗ್ರಾಮದ ರಾಮಣ್ಣ ವೇಷಗಾರ ತಿಳಿಸಿದರು.

ಸಿಗಲಿ ಸೌಲಭ್ಯ: ಬಾಲ್ಯದಿಂದಲೇ ಪ್ರತಿವರ್ಷ ಡಂಬಳ ಗ್ರಾಮ‌ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ ಹಗಲುವೇಷಗಳಾದ ರಾಮ, ಲಕ್ಷ್ಮಣ, ಸೀತೆ, ಹನುಮಂತ ವೇಷಗಳನ್ನು ಧರಿಸಿ ಜಾನಪದ, ಪೌರಾಣಿಕ ಹಾಡುಗಳನ್ನು ಹಾಡುತ್ತ ಬಂದಿರುವ ರಾಮಣ್ಣ ವೇಷಗಾರ ಅವರಿಗೆ ಸರ್ಕಾರ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಉಪನ್ಯಾಸಕ ಮಂಜುನಾಥ ಬಿಸನಳ್ಳಿ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ