ಕನ್ನಡಪ್ರಭ ವಾರ್ತೆ ಸಿರಿಗೆರೆ
ಕೋವಿಡ್ ನಂತರದ ಸಾಂಸ್ಕೃತಿಕ ಬದುಕು ವಿನಾಶದ ಅಂಚಿಗೆ ಬಂದು ತಲುಪಿತ್ತು. ಕಲಾಪ್ರಕಾರಗಳು ನಶಿಸಿ ಹೋಗುತ್ತಿದ್ದವು.ಆ ಸಂದರ್ಭದಲ್ಲಿ ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠವು ಗ್ರಾಮೀಣ ಕಲೆಗಳನ್ನು ಉಳಿಸಲು ವಿಶೇಷ ಪ್ರಯತ್ನ ನಡೆಸಿತು. ಅದರಲ್ಲಿ ವೀರಗಾಸೆಯೂ ಒಂದು ಎಂದು ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಭಾರತಿ ವಿಭಾಗದ ಉಪನ್ಯಾಸಕ ನವೀನ್ ಮಂಡಗದ್ದೆ ತಿಳಿಸಿದರು.
ಸಿರಿಗೆರೆಯ ಗುರು ಶಾಂತೇಶ್ವರ ದಾಸೋಹ ಭವನದಲ್ಲಿ ಗುರು ಶಾಂತರಾಜ ದೇಶಿಕೇಂದ್ರ ಸ್ವಾಮೀಜಿ ಶ್ರದ್ಧಾಂಜಲಿ ಅಂಗವಾಗಿ ಏರ್ಪಡಿಸಿದ್ದ ಎರಡು ದಿನಗಳ ವೀರಗಾಸೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿ ಮಾತನಾಡಿದರು.ವೀರಗಾಸೆ ನಮ್ಮ ಜನಪದ ಕಲಾಪ್ರಕಾರಗಳಲ್ಲಿ ಒಂದು ವಿಶಿಷ್ಟ ಕಲೆ. ಪೌರಾಣಿಕ ಹಿನ್ನೆಲೆಯಲ್ಲಿ ಈ ಕಲೆ ಬೆಳೆದು ನಿಂತಿದೆ ಎಂದರು.
ಕಲೆಯನ್ನು ಆಸ್ವಾದಿಸಲು ನಮ್ಮ ಒಳಗಿನ ಮತ್ತು ಹೊರಗಿನ ಮನಸ್ಸುಗಳು ಶುದ್ಧವಾಗಿರಬೇಕು. ಒಳ ಮನಸ್ಸಿಗೆ ಒಪ್ಪಿತವಾಗುವ ಕಲೆ ನಮ್ಮಲ್ಲಿ ವಿಶೇಷ ಗುಣಗಳನ್ನು ಹುಟ್ಟು ಹಾಕುತ್ತದೆ ಎಂದರು.ಕಲೆಗಳ ಕಡೆಗೆ ಮನಸ್ಸು ಕೊಡದದಿರುವ ಈ ಕಾಲಗಟ್ಟದ ಯುವಕರಲ್ಲಿ ಆಸಕ್ತಿ ಬೆಳೆಸಿ ಅವರನ್ನು ಕಲೆಗಳ ಕಡೆಗೆ ಕರೆತರಬೇಕು. ಕಲೆಯನ್ನು ನಮ್ಮೊಳಗೆ ಅನುಭವಿಸಲು ಆರಂಭಿಸಿದರೆ ತಮ್ಮಲ್ಲಿ ಸಾಂಸ್ಕೃತಿಕತೆ, ಚಾರಿತ್ರಿಕತೆ ಮತ್ತು ದೈವಿಕ ಭಾವಗಳು ಬೆಳೆಯುತ್ತವೆ ಎಂದರು.
ಸರ್ಕಾರವು ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರತಿ ವರ್ಷ ಪ್ರಶಸ್ತಿ ಕೊಡುತ್ತಿದೆ. ಈ ಪ್ರಶಸ್ತಿಗಳು ೭೦ ವಯೋಮಾನ ದಾಟಿದವರಿಗೆ ಸಿಗುತ್ತಿವೆ. ನಮ್ಮ ಹೊಸ ತಲೆಮಾರಿನ ಯುವಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿದರೆ ಕಲೆಯನ್ನು ಬೆಳೆಸಲು ಅವರಿಂದ ಸಾಧ್ಯವಾಗುತ್ತದೆ. ಈ ದಿಕ್ಕಿನಲ್ಲಿ ಸರ್ಕಾರ ಮತ್ತು ಅಕಾಡೆಮಿ ಯೋಚಿಸಬೇಕು ಎಂದರು.ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು ತರಳಬಾಳು ಪೀಠದ19ನೇ ಗುರುಗಳಾಗಿದ್ದರು. ಅತ್ಯಂತ ಶಾಂತಸ್ವಭಾವದ ಮೂರ್ತಿಯ ಪ್ರತಿರೂಪದಂತಿದ್ದರು. 1938 ರ ಆಸುಪಾಸಿನಲ್ಲಿ ಅವರು ಶಾಲಾ ಕಾಲೇಜು ತೆರೆಯಲಿಲ್ಲವಾದರೂ ಮಕ್ಕಳ ಅನುಕೂಲಕ್ಕಾಗಿ ಪೇಟೆಪಟ್ಟಣಗಳಲ್ಲಿ ಪ್ರಸಾದ ನಿಲಯ ಸ್ಥಾಪಿಸಿದ್ದರು ಎಂದರು.
ಅವರ ಶ್ರದ್ಧಾಂಜಲಿ ಅಂಗವಾಗಿ ಸುಮಾರು ೪೦ ವರ್ಷಗಳಿಂದ ವೀರಗಾಸೆ ಸ್ಪರ್ಧೆಗಳು ಮಠದಲ್ಲಿ ನಡೆಯುತ್ತಿವೆ. ಇವುಗಳಲ್ಲಿ ಗ್ರಾಮಾಂತರ ತಂಡಗಳು ಆಸಕ್ತಿಯಿಂದ ಭಾಗವಹಿಸಬೇಕು ಎಂದರು.ಕಲೆಯಲ್ಲಿ ತೊಡಗಿಸಿಕೊಳ್ಳಲು ಹೆಣ್ಣು ಗಂಡೆಂಬ ತಾರತಮ್ಮ ಇಲ್ಲ. ಎಲ್ಲರೂ ಕಲೆಯಲ್ಲಿ ಸಾಧನೆ ಮಾಡಬಹುದು. ವೀರಗಾಸೆ ಜಾನಪದ ಕಲೆಗಳಲ್ಲಿ ಅಪೂರ್ವವಾದುದು. ಇದನ್ನು ಗಂಡು ಕಲೆ ಎಂದೇ ಕರೆಯಲಾಗುತ್ತಿತ್ತು. ಕೆಲವು ವರ್ಷಗಳ ಹಿಂದಿನ ತನಕವೂ ಮಹಿಳೆಯರು ಈ ಕಲೆಯ ಪ್ರದರ್ಶನದಲ್ಲಿ ಭಾಗಿಯಾಗುತ್ತಿರಲಿಲ್ಲ. ಈಗೀಗ ಮಹಿಳೆಯರೂ ಕೂಡ ಈ ಕಲೆಯಲ್ಲಿ ತೊಡಗಿಸಿಕೊಂಡಿರುವುದು ಸಂತಸದ ವಿಷಯ ಎಂದರು.
ವೀರಗಾಸೆಯನ್ನು ಶಾಸ್ತ್ರೋಕ್ತವಾಗಿ ಕಲಿತಿರುವ ಹಿರಿಯ ಕಲಾವಿದರು ನಮ್ಮಲ್ಲಿದ್ದಾರೆ. ಅವರನ್ನು ಬಳಸಿಕೊಂಡು ವೀರಗಾಸೆಯನ್ನು ಬೆಳೆಸಿ ಉಳಿಸುವ ಕೆಲಸ ಆಗಬೇಕು. ವೀರಗಾಸೆಯ ಇತಿಹಾಸವನ್ನು ದಾಖಲಿಸಿ ಮುಂದಿನ ಪೀಳಿಗೆಗೆ ನೀಡುಬ ಹಂಬಲ ತಮ್ಮದಾಗಿದ್ದು ಅಂತಹ ಪ್ರಕಟಣೆಯನ್ನು ಮಠದ ವತಿಯಿಂದ ಹೊರತರಲಾಗುವುದು ಎಂದರು.ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ಧಯ್ಯ ಪ್ರಸ್ತಾವಿಕವಾಗಿ ಮಾತನಾಡಿದರು. ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ. ವಾಮದೇವಪ್ಪ, ತೀರ್ಪುಗಾರರಾದ ಬಸವರಾಜಪ್ಪ ಅದ್ರಿಕಟ್ಟೆ, ನಿರಂಜನಮೂರ್ತಿ, ಪಾರ್ಥಸಾರಥಿ ವೇದಿಕೆಯಲ್ಲಿದ್ದರು.