ಖಾಜು ಸಿಂಗೆಗೋಳ
ತಾಲೂಕಿನಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಬರದ ಛಾಯೆ ಆವರಿಸುತ್ತಿದ್ದು, ಅನ್ನದಾತರು ಆತಂಕಕ್ಕೆ ಸಿಲುಕಿದ್ದಾರೆ.
ಕೆಲವು ರೈತರು ಬಿತ್ತನೆಗೆ ಕೃಷಿ ಭೂಮಿ ಹಸನು ಮಾಡಿಕೊಂಡು ಆಕಾಶದತ್ತ ಮುಖ ಮಾಡಿದ್ದರೆ, ಬಿತ್ತನೆ ಮಾಡಿದ ರೈತರು ಚಿಗುರೊಡೆದ ಪೈರು ಕಣ್ಮುಂದೆ ಒಣಗುತ್ತಿರುವುದನ್ನು ಕಂಡು ಸಂಕಟ ಪಡುತ್ತಿದ್ದಾರೆ. ಕಳೆದ ವರ್ಷ ಈ ವೇಳೆಗೆ ಶೇ.80ರಷ್ಟು ಬಿತ್ತನೆ ಮಾಡಲಾಗಿತ್ತು. ಈ ವರ್ಷ ಕೇವಲ ಶೇ.5ರಷ್ಟು ಮಾತ್ರ ಬಿತ್ತನೆ ಮಾಡಲಾಗಿದೆ.ಬಿತ್ತನೆ ಮಾಡುವಷ್ಟು ಮಳೆ ಇಲ್ಲ :ತಾಲೂಕಿನಲ್ಲಿ ಬಿತ್ತನೆ ಮಾಡುವಷ್ಟು ಮಳೆಯಾಗಿಲ್ಲ. ಕೃಷಿ ಇಲಾಖೆ ಈ ಬಾರಿ 1.76 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಂಡಿದೆ. ಈಗಾಗಲೇ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಮುಂಗಾರು ಬಿತ್ತನೆ ಮಾಡಲಾಗಿದೆ.
ಈ ವೇಳೆಗೆ ವಾಡಿಕೆಯಂತೆ 156 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಆಗಿದ್ದು ಕೇವಲ 132 ಮಿ.ಮೀ. ಇದರಿಂದ ತಾಲೂಕಿನಲ್ಲಿ ಶೇ.16ರಷ್ಟು ಮಳೆ ಕೊರತೆ ಉಂಟಾಗಿದೆ ರೋಹಿಣಿ ಮಳೆಯಾಗುತ್ತದೆ, ಬಿತ್ತನೆ ಕಾರ್ಯ ಕೈಗೊಳ್ಳಬೇಕು ಎಂದು ರೈತರು ಜಮೀನು ಹದ ಮಾಡಿಕೊಂಡು ಮಳೆಗಾಗಿ ಕಾದಿದ್ದಾರೆ. ಕೃತಿಕಾ, ರೋಹಿಣಿ ಮಳೆಗಳು ಆಗಲಿಲ್ಲ. ಮೃಗಶಿರಾ ಮಳೆಯಂತೂ ಸಂಪೂರ್ಣ ಕೈಕೊಟ್ಟಿದೆ. ಆರಿದ್ರ ಮಳೆ ಆಗುತ್ತದೆ ಎಂಬ ವಿಶ್ವಾಸದಲ್ಲಿ ರೈತರು ಇದ್ದಾರೆ. ಆದರೆ ಗಾಳಿಯ ರಭಸಕ್ಕೆ ಮೊಡ ಓಡುತ್ತಿದ್ದು, ಇನ್ನೇನು ಮಳೆ ಬರುತ್ತದೆ ಎನ್ನುವಷ್ಟರಲ್ಲಿ ಮೊಡ ಛಿದ್ರ ಛಿದ್ರವಾಗಿ ಮಾಯವಾಗುತ್ತಿದೆ. ಮಳೆ ಕೊರತೆ ಕೃಷಿ ಕೆಲಸಗಳಿಗೆ ನಷ್ಟವನ್ನುಂಟು ಮಾಡುತ್ತಿದೆ ಮತ್ತು ರೈತರಿಗೆ ಆರ್ಥಿಕ ಸಂಕಷ್ಟ ತರುತ್ತಿದೆ.
ಮುಂಗಾರು ಮಳೆಗಳಾದ ಕೃತಿಕಾ, ರೋಹಿಣಿ, ಮೃಗಶಿರ, ಆರಿದ್ರಾ, ಪುನರ್ವಸು, ಪುಷ್ಯ ಮತ್ತು ಆಶ್ಲೇಷ ಮಳೆಗಳು ಸಕಾಲಕ್ಕೆ ತಕ್ಕಂತೆ ಬಂದರೆ ಮಾತ್ರ ಕೃಷಿಕರಿಗೆ ಬಂಪರ್ ಸಿಗಲಿದೆ. ಅತಿವೃಷ್ಟಿ ಇಲ್ಲವೆ ಅನಾವೃಷ್ಟಿ ಉಂಟಾದರೆ ಸಂಕಷ್ಟ ತಪ್ಪಿದ್ದಲ್ಲ. ಮುಂಗಾರಿನಲ್ಲಿ ರೊಕ್ಕದ ಬೆಳೆಗಳಾದ ಹೆಸರು, ಉದ್ದು, ತೊಗರಿ, ಸಜ್ಜೆ ಮೊದಲಾದ ಅಲ್ಪಾವಧಿ ಬೆಳೆ ಬೆಳೆದರೆ ಮಾತ್ರ ರೈತರ ಮೊಗದಲ್ಲಿ ನಗೆ ಮೂಡುತ್ತದೆ. ಮುಂಗಾರು ಹೋದರೆ ಹಿಂಗಾರು ಮಾತ್ರ ಗತಿ.
ಕೃಷಿ ಇಲಾಖೆಯ ಅಧಿಕಾರಿಗಳು ಸಕಾಲಕ್ಕೆ ರೈತರಿಗೆ ಬೀಜ, ರಸಗೊಬ್ಬರ ನೀಡಲು ದಾಸ್ತಾನು ಮಾಡಿದ್ದಾರೆ. 1200 ಕ್ವಿಂಟಲ್ ಬೀಜ ದಾಸ್ತಾನದಲ್ಲಿ ಇಲ್ಲಿಯವರೆಗೆ ಕೇವಲ 450 ಕ್ವಿಂಟಲ್ ಬೀಜ ಮಾರಾಟವಾಗಿದೆ.
ಈ ವರ್ಷ ಮುಂಗಾರು ಹಂಗಾಮು ರೈತರ ಭರವಸೆ ಹುಸಿಗೊಳಿಸಿದೆ. ವರ್ಷದ ಕುಟುಂಬ ಖರ್ಚುವೆಚ್ಚಕ್ಕಾಗಿ ರೈತರು ಮುಂಗಾರು ಫಸಲನ್ನೇ ಅವಲಂಬಿಸಿರುತ್ತಾರೆ. ಮುಂಗಾರು ಕೈಕೊಟ್ಟರೆ ರೈತರ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಲಿದೆ. ಜೂನ್ ಮುಗಿದು ಜುಲೈ ಆರಂಭವಾದರೂ ಮಳೆಯ ಸುಳಿವು ಇಲ್ಲ. ಮುಂದೆ ಏನು ಮಾಡಬೇಕೆಂದು ತಿಳಿಯದಾಗಿದೆ.
ಮುಂಗಾರು ಬಿತ್ತನೆ ಹಂಗಾಮು ಬಿತ್ತನೆಗೆ ಅಗತ್ಯವಾದ ವಿವಿಧ ಬೀಜಗಳನ್ನು ಇಲಾಖೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳಲಾಗಿದೆ. ಮುಂಗಾರು ಬೆಳೆಗಳಾದ ಹೆಸರು, ಸಜ್ಜೆ, ತೊಗರಿ, ಮೆಕ್ಕೆಜೋಳ, ತೊಗರಿ ಇತರೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. ಆದರೆ ಬರಬೇಕಾದ ಪ್ರಮಾಣದಲ್ಲಿ ಮಳೆ ಆಗಿಲ್ಲ. ಹೀಗೆಯೇ ಮುಂದುವರಿದರೆ ಬಿತ್ತನೆಗೆ ಸಮಸ್ಯೆ ಆಗುತ್ತದೆ.
ಜುಲೈ ತಿಂಗಳಲ್ಲಿ ಮಳೆ ಬಾರದಿದ್ದರೆ ಲಿಂಬೆ ಕೊಂಡಿ ಉದುರುತ್ತದೆ. ಲಿಂಬೆ ಕಾಯಿ ಸಣ್ಣದಾಗಿ ಬೆಳೆಯುತ್ತದೆ. ಇಳುವರಿ ಮೇಲೆ ಪರಿಣಾಮ ಬೀರುತ್ತದೆ.
- ಸತೀಶ ಬಡಿಗೇರ, ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿ