-ಅಂಬ್ರೇಶ ಮಾಲಗತ್ತಿ ನೇತೃತ್ವದಲ್ಲಿ ತಹಸೀಲ್ದಾರ್‌ ಎಂ.ಬಸವರಾಜ್ ಅವರಿಗೆ ಮನವಿ ಸಲ್ಲಿಕೆ

----

ಕನ್ನಡಪ್ರಭ ವಾರ್ತೆ ಹುಣಸಗಿ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿರುವ ನೌಕರರ ಮೇಲೆ ಅನಗತ್ಯ ಒತ್ತಡ ಹೇರದೇ, ಮಾನಸಿಕ ನೆಮ್ಮದಿಯಿಂದ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಹುಣಸಗಿ ತಾಲೂಕು ಘಟಕದ ಅಧ್ಯಕ್ಷ ಅಂಬ್ರೇಶ ಮಾಲಗತ್ತಿ ನೇತೃತ್ವದಲ್ಲಿ ತಹಸೀಲ್ದಾರ್‌ ಹಾಗೂ ತಾಲೂಕು ದಂಡಾಧಿಕಾರಿ ಎಂ.ಬಸವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜೂ.30 ರಿಂದ ಜುಲೈ 29 ರವರೆಗೆ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಶಾಲಾ ಶಿಕ್ಷಣ ಇಲಾಖೆಯ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಗ್ರಾಮ ಆಡಳಿತಾಧಿಕಾರಿ ಭುವನ ಆರ್ ಅವರು ಎಸ್‌ಐಆರ್ ಕಾರ್ಯಕ್ಕೆ ತೆರಳುವ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಿರುವ ಘಟನೆ ನೌಕರರಲ್ಲಿ ಆತಂಕ ಮತ್ತು ಮಾನಸಿಕ ಒತ್ತಡ ಉಂಟುಮಾಡಿದೆ ಎಂದು ಮನವಿಯಲ್ಲಿ ತಿಳಿಸಿದರು.


ನಿಗದಿತ ಕರ್ತವ್ಯ ಅವಧಿಯನ್ನು ಮೀರಿ ಕಾರ್ಯನಿರ್ವಹಿಸುವಂತೆ ಸೂಚಿಸುವುದು, ಭಾನುವಾರ ಹಾಗೂ ಇತರ ಸಾರ್ವತ್ರಿಕ ರಜೆ ದಿನಗಳಲ್ಲಿಯೂ ಕೆಲಸಕ್ಕೆ ನಿಯೋಜಿಸುವುದು ನೌಕರರ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಲಿದೆ.

ಸುರಕ್ಷತೆ ಕುರಿತು ಸೂಕ್ತ ಕ್ರಮಗಳ ಅಗತ್ಯವಿದೆ ಎಂದು ಅಧ್ಯಕ್ಷ ಅಂಬ್ರೇಶ ಮಾಲಗತ್ತಿ ಅವರು ಗಮನಕ್ಕೆ ತಂದರು.

ನಂತರ ತಹಸೀಲ್ದಾರ ಎಂ.ಬಸವರಾಜ್ ಅವರು, ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನೌಕರರಿಗೆ ಒತ್ತಡರಹಿತ ವಾತಾವರಣ ಕಲ್ಪಿಸಲಾಗಿದೆ. ಯಾವುದೇ ಆತಂಕ ಅಗತ್ಯವಿಲ್ಲ. ನಮ್ಮ ತಾಲೂಕಿನಲ್ಲಿ ಪ್ರಗತಿ ಸಾಧಿಸಲು ತಾವು ಶ್ರಮಿಸುತ್ತಿರುವ ಕಾರ್ಯವೈಖರಿ ಶ್ಲಾಘಿಸಿದ ಅವರು, ಸಮಸ್ಯೆಗೆ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ಸರ್ಕಾರಿ ನೌಕರರ ಸಂಘ ಹಾಗೂ ಸ.ಪ್ರಾ.ಶಾ.ನೌಕರರ ಸಂಘದ ಡಾ.ಮೆಹಬೂಬ್ ಖಾಜಿ, ಕಲ್ಲಪ್ಪ ಜಂಜಿಗಡ್ಡಿ, ಶಾಂತಪ್ಪ ದೊಡ್ಡಮನಿ, ಭೀಮಣ್ಣ ವಾಲ್ಮೀಕಿ, ಪರಶುರಾಮ ಚಲವಾದಿ, ಹುಲಗಪ್ಪ ಹಡಗಿನಾಳ, ಸಿದ್ದಾರ್ಥ ಪಾಟೀಲ, ಅರವಿಂದ ಖಂಡೇಕಲ್, ಶಿವಕುಮಾರ ಬಂಡೊಳ್ಳಿ, ಅಕ್ಕಮಹಾದೇವಿ ದೇಶಮುಖ, ಬಸನಗೌಡ ವಠಾರ, ಮಹೇಶ, ಅಣ್ಣಾ ಸಾಹೇಬ್. ವೆಂಕಟೇಶ, ದೇವಪ್ಪ, ಚಾಂದ ಪಾಶ ಇತರರಿದ್ದರು.

ಫೋಟೊ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವ ನೌಕರರ ಮೇಲೆ ಅನಗತ್ಯ ಒತ್ತಡ ಹೇರದೇ, ಮಾನಸಿಕ ನೆಮ್ಮದಿಯಿಂದ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘ, ಹುಣಸಗಿ ತಾಲೂಕು ಘಟಕದ ಅಧ್ಯಕ್ಷ ಅಂಬ್ರೇಶ ಮಾಲಗತ್ತಿ ನೇತೃತ್ವದಲ್ಲಿ ತಹಸೀಲ್ದಾರ್‌ ಎಂ.ಬಸವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.