-ರೈತರೂ, ಸಾರ್ವಜನಿಕರಿಂದ ರಸ್ತೆ ತಡೆದು ಧರಣಿ । ಯುವ ಮುಖಂಡ ಹಣಮಂತನಾಯಕ ಭಾಗಿ

---

ಕನ್ನಡಪ್ರಭ ವಾರ್ತೆ ನಾರಾಯಣಪುರ

ರೈತರ ಪಂಪ್ ಸೆಟ್ ಗಳಿಗೆ ದಿನದ 7 ಗಂಟೆ ನಿರಂತರವಾಗಿ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಜೆಸ್ಕಾಂ ವಿರುದ್ಧ ನಾರಾಯಣಪುರ, ಜೋಗುಂಡಬಾವಿ, ಮಾರನಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಬುಧವಾರ ರಸ್ತೆ ತಡೆ ನಡೆಸಿದ್ದಾರೆ.

ಜಿ.ಪಂ ಮಾಜಿ ಉಪಾಧ್ಯಕ್ಷ ಗದ್ದೆಪ್ಪ ಪೂಜಾರಿ ನೇತೃತ್ವದಲ್ಲಿ ವಾಲ್ಮೀಕಿ ವೃತ್ತದಲ್ಲಿ ಬೆಳಿಗ್ಗೆಯಿಂದಲೇ ಆರಂಭವಾದ ಶಾಂತಿಯುತ ಧರಣಿಯಲ್ಲಿ ಮಾತನಾಡಿದ ಹಲವರು ಸಮರ್ಪಕ ವಿದ್ಯುತ್ ಪೂರೈಕೆ ಮಾಡದ ಜೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಕಾರ್ಯವೈಖರಿ ಮತ್ತು ಇಲಾಖೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ರೈತರ ಧರಣಿ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಯುವ ಮುಖಂಡ ಹಣಮಂತನಾಯಕ (ಬಬಲುಗೌಡ) ಮಾತನಾಡಿ, ರೈತರ ಧರಣಿಗೆ ಬೆಂಬಲಿಸುವದಾಗಿ ತಿಳಿಸಿ ಅವರು ಈ ಭಾಗದಲ್ಲಿ ಮಳೆ ಕೊರೆತೆಯಿಂದ ರೈತರು ತೀವ್ರ ತೊಂದರೆಯಲ್ಲಿದ್ದಾರೆ.

ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲಾದ ಕಬ್ಬು, ಹತ್ತಿ, ಮೆಣಸಿನಕಾಯಿ, ತೊಗರಿ ಸೇರಿದಂತೆ ಇತರೆ ಬೆಳೆಗಳ ಬೀಜಗಳನ್ನು ಬಿತ್ತನೆ ಮಾಡಿದ್ದಾನೆ ಸಾಕಷ್ಟು ಹಣ ಖರ್ಚು ಮಾಡಿದ್ದಾನೆ ಒಂದು ಹಂತದಲ್ಲಿ ಬೆಳದಿರುವ ಬೆಳೆಗಳು ತೆವಾಂಶ ಕೊರೆತೆಯಿಂದಾಗಿ ಅಂದಾಜು ಶೇ.90 ರಷ್ಟು ಬೆಳೆಗಳು ಒಣಗಿ ಹೋಗುವ ಹಂತ ತಲುಪಿವೆ ಇದನ್ನು ಜೆಸ್ಕಾಂ ಅಧಿಕಾರಿಗಳು ಮನಗಂಡು ವಿದ್ಯುತ್ ಪೂರೈಕೆ ಮಾಡಿದರೆ ಲಭ್ಯ ಜಲಮೂಲಗಳಿಂದ ಬೆಳೆಗಳಿಗೆ ನೀರು ಹಾಯಿಸಿ ಬೆಳೆ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ಹೀಗಾಗಿ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿಕೊಂಡು, ಲೋಡ್ ಆಗುತ್ತಿದೆ ಎನ್ನುವ ನೆಪ, ಕಾರಣಗಳನ್ನು ಹೇಳದೆ ವಿದ್ಯುತ್ ಪೂರೈಕೆಯಲ್ಲಿನ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಮೇಲಾಧಿಕಾರಿಗಳು, ಸರ್ಕಾದ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು ಹಾಗೂ ಸರಿಯಾಗಿ ಕರ್ತವ್ಯ ನಿರ್ವಹಿಸದ ಇರುವ ಸಿಬ್ಬಂದಿಗಳ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕು ಇದು ಇತರೆ ಸಿಬ್ಬಂದಿಗೆ ಪಾಠವಾಗಬೇಕು, ಸಣ್ಣ ಪುಟ್ಟ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕು ಅಗತ್ಯ ಅನಿವಾರ್ಯ ವೇಳೆ‌ ಮಾತ್ರ ಎಲ್ ಸಿ ತೆಗೆದುಕೊಳ್ಳಿ ಪದೆ ಪದೇ ವಿದ್ಯುತ್ ವ್ಯತೆಯ ಉಂಟು ಮಾಡದೇ ಗುಣಮಟ್ಟದ ವಿದ್ಯುತ್ ಪೂರೈಸುವ ಮೂಲಕ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದ ಅವರು ಒಂದು ದಿನದ ಕಾಲಾವಧಿ ನೀಡಲಾಗುತ್ತಿದೆ ನಮ್ಮ ಬೇಡಿಕೆಗಳು ಈಡೇರದೇ ಇದ್ದರೆ ಈ ಭಾಗದ ಎಲ್ಲಾ ರೈತರು, ಸಾರ್ವಜನಿಕರು ಹುಣಸಗಿ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಜೆಸ್ಕಾಂ ಎಇಇ ಕಳಕಪ್ಪ ಅವರಿಗೆ ಪ್ರತಿಭಟನಾಕಾರರು ಸಮರ್ಪಕ ವಿದ್ಯುತ್ ಪೂರೈಕೆ ಕುರಿತು ಮನವಿ ಸಲ್ಲಿಸಿದರು.

ಬಿಜೆಪಿ ಮುಖಂಡ, ಜಿ.ಪಂ ಮಾಜಿ ಉಪಾಧ್ಯಕ್ಷ ಗದ್ದೆಪ್ಪ ಪೂಜಾರಿ, ಪ್ರಮುಖರಾದ ಗಿರಿಯಪ್ಪ ಪೂಜಾರಿ, ತಿಪ್ಪಣ್ಣ ರೋಡಲಬಂಡಾ, ಚಿನ್ನಪ್ಪ ಡೊಳ್ಳಿ, ದ್ಯಾವಣ್ಣಗೌಡ, ದೇವು ಗೋಪಾಳಿ, ಮಲ್ಲಿಕಾರ್ಜುನ ಶೃಂಗೇರಿ, ಬಸೀರ ಅಹ್ಮದ್, ವೈ.ಸಿ ಗೌಡರು, ಸಂಗನಬಸ್ಸು ಚಟ್ಟೇರ, ಅಶೋಕ ನಾಯ್ಡು, ಬಾಲಚಂದ್ರ ಪವಾರ, ಆಂಜನೇಯ ದೊರೆ, ಶಿವಪ್ಪ ಬಿರಾದಾರ, ಆರ್ ಸಿ ಗೌಡರ, ರಮೇಶ ಕೋಳುರ, ಮಧು, ಚಂದ್ರು ಚವ್ಹಾಣ, ಹಣಮಂತ ಗುರಿಕಾರ, ಬಸವರಾಜ ಮಾಮನಿ, ಮುತ್ತು ಸೇರಿದಂತೆ ನಾರಾಯಣಪುರ, ಜೋಗುಂಡಭಾವಿ, ಮಾರನಾಳ ವಿವಿಧ ಗ್ರಾಮಗಳ ರೈತರೂ, ಸಾರ್ವಜನಿಕರು ಧರಣಿಯಲ್ಲಿ ಭಾಗವಹಿಸಿದ್ದರು.

ಪಿಎಸ್ಐ ಅಯ್ಯಪ್ಪ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು,ಸಿಬ್ಬಂದಿ ವರ್ಗದವರಿಂದ ಸೂಕ್ತ ಬಂದೊಬಸ್ತ್ ಒದಗಿಸಲಾಗಿತ್ತು.

ಫೋಟೊ

ನಾರಾಯಣಪುರ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಆಗ್ರಹಿಸಿ ಬುಧವಾರ ನಡೆದ ಧರಣಿಯಲ್ಲಿ ರೈತರು, ಸಾರ್ವಜನಿಕರನ್ನು ಉದ್ದೇಶಿಸಿ ಯುವ ಮುಖಂಡ ಹಣಮಂತನಾಯಕ (ಬಬಲುಗೌಡ) ಮಾತನಾಡಿದರು.