- ಭಕ್ತರಿಂದ ತುಲಾಭಾರ ಸೇವೆ । ದುರ್ಗಾದೇವಿ ಜಾತ್ರೆ ನಿಮಿತ್ತ ಕುಂಭಮೇಳ
ಹರಿಹರ: ಇಲ್ಲಿಗೆ ಸಮೀಪದ ಕೊಡಿಯಾಲ ಹೊಸಪೇಟೆ ಗ್ರಾಮದ ಮೂಲ ದುರ್ಗಾ ದೇವಿ ದೇವಸ್ಥಾನ, ಮತ್ತು ನಾಗದೇವರ ಸಪ್ತಮ ವರ್ಧಂತಿ ಮಹೋತ್ಸವ ಅಂಗವಾಗಿ ಸದ್ಗುರು ಅಪ್ಪಾಜಿ ಸಾನ್ನಿಧ್ಯದಲ್ಲಿ ಭಾನುವಾರ ಹಂದರಗಂಬ ಪೂಜೆ ನೆರವೇರಿಸಲಾಯಿತು.
ಅನಂತರ ಸದ್ಗುರು ಅಪ್ಪಾಜಿ ಅವರು ಮಾತನಾಡಿ, ಮೇ 11ರ ಸೋಮವಾರ ಬೆಳಗ್ಗೆ ದೇವಸ್ಥಾನ ಆವರಣದಲ್ಲಿ ಭಕ್ತರಿಂದ ತುಲಾಭಾರ ಸೇವೆ ನಡೆಯಲಿದೆ. ದುರ್ಗಾದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ಆನೆ ಅಂಬಾರಿ ಸಮೇತ ಕೊಡಿಯಾಲ ಗ್ರಾಮದ ದುಂಡಿ ಬಸವೇಶ್ವರ ದೇವಸ್ಥಾನದಿಂದ ರಾಜ್ಯದ ವಿವಿಧ ಕಲಾ ತಂಡದೊಂದಿಗೆ ಕುಂಭಮೇಳ ಜರುಗಲಿದೆ. ಮೇ 12ರಂದು ಬೆಳಗ್ಗೆ 8 ಗಂಟೆಗೆ, ಕ್ಷೇತ್ರಪಾಲಕ ನೂತನ ಅಷ್ಟದಳ ಪದ್ಮ ಪೀಠ ಪ್ರತಿಷ್ಠಾ ಕಾರ್ಯ ಸೇರಿದಂತೆ ಆದ್ಯಗಣಯಾಗ, ನಿರ್ವಿಘ್ನಯಾಗ, ಪಂಚವಿಂಶತಿ ಕಳಸಾರಾಧನೆ, ಪ್ರಧಾನಯಾಗ, ಕುಂಭಾಭಿಷೇಕ ಹಾಗೂ ಶ್ರೀ ಕಾಳಿ ಸಹಸ್ರನಾಮ ಕದಳಿಯಾಗ ಜರುಗಲಿದೆ. ಅದೇ ದಿನ ಸಂಜೆ ನಾಗ ತನುತರ್ಪಣ ಸೇವೆ, ಆಶ್ಲೇಷ ಬಲಿ ಪ್ರಸನ್ನ ಪೂಜೆ ನಡೆಯಲ್ಲಿದ್ದು, ಭಕ್ತರು ಭಾಗವಹಿಸಲು ತಿಳಿಸಿದರು.ದೇವಸ್ಥಾನ ಸಮಿತಿ ಟ್ರಸ್ಟಿ ನಾಗರಾಜ್ ಕುರವತ್ತಿ ಮಾತನಾಡಿ, ಜಾತ್ರಾ ಕಾರ್ಯಕ್ರಮದಲ್ಲಿ ಕುಂಭ ಹೊರಲು ಬಯಸುವ ತಾಯಂದಿರು ದೇವಸ್ಥಾನ ಸಮಿತಿಯವರನ್ನು ಸಂಪರ್ಕಿಸಲು ಕೋರಿದರು.
- - -
ಸದ್ಗುರು ಅಪ್ಪಾಜಿ ಅವರ ಸಾನಿಧ್ಯದಲ್ಲಿ ಹಂದರಗಂಬ ಪೂಜೆ ನೆರವೇರಿಸಲಾಯಿತು.